Asianet Suvarna News Asianet Suvarna News

Bears Killed in Road Accidents: ಸರ್ಕಾರದ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಕರಡಿಗಳ ಬಲಿ ಬೇಕು?

*  ಕರಡಿಧಾಮಕ್ಕೆ ದೊರೆಯದ ಅನುಮೋದನೆ
*  10 ವರ್ಷದಲ್ಲಿ 11 ಕರಡಿ ಅಪಘಾತಕ್ಕೆ ಬಲಿ
*  ನಾಲ್ಕಾರು ವರ್ಷ ಕಳೆದರೂ ಅನುಮೋದನೆ ನೀಡಿದ ಸರ್ಕಾರ
 

11 Bear Killed in Road Accidents Last one Decade in Koppal grg
Author
Bengaluru, First Published Dec 26, 2021, 9:31 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.26):  ಜಿಲ್ಲೆಯಲ್ಲಿ ಕರಡಿಗಳ ಸಂತತಿ ಹೆಚ್ಚಿದ್ದು ಕೊಪ್ಪಳ(Koppal) ತಾಲೂಕಿನ ಹಿರೇಸೂಳಿಗೆರೆಯ ಅರಣ್ಯ ಇಲಾಖೆ ವ್ಯಾಪ್ತಿಯ 800 ಎಕರೆ ಪ್ರದೇಶದಲ್ಲಿ ಕರಡಿಧಾಮ ನಿರ್ಮಿಸಬೇಕೆಂದು ಸರ್ಕಾರಕ್ಕೆ ನಾಲ್ಕಾರು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆ(Forest Department) ಪ್ರಸ್ತಾವನೆ ಸಲ್ಲಿಸಿದ್ದರೂ ಈ ವರೆಗೆ ಅನುಮೋದನೆ ದೊರೆತಿಲ್ಲ. ಹೀಗಾಗಿ ಕಳೆದ ಹತ್ತು ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ ಅಪಘಾತದಲ್ಲಿ(Accidents) 11 ಕರಡಿ ಬಲಿಯಾಗಿವೆ(Death).

ಹಿರೇಸೂಳಿಕೇರಿ, ಮುನಿರಾಬಾದ್‌, ಯಲಬುರ್ಗಾ ತಾಲೂಕಿನ ಮ್ಯಾದನೇರಿ ಸೇರಿದಂತೆ ಇದರ ಸುತ್ತಮುತ್ತಲಿನ ಪ್ರದೇಶದಲ್ಲಿ ಕರಡಿ(Bear) ಸಂತತಿ ಹೆಚ್ಚಿದೆ. ಇಲ್ಲಿಯೇ ರಾಷ್ಟ್ರೀಯ ಹೆದ್ದಾರಿ 50 ಹಾದುಹೋಗಿದೆ. ಈ ಭಾಗದಲ್ಲಿಯೇ ಹೆಚ್ಚು ಕರಡಿಗಳು ರಸ್ತೆ ಅಪಘಾತದಲ್ಲಿ ಬಲಿಯಾಗುತ್ತಿವೆ. ಇತ್ತೀಚೆಗೆ ಮ್ಯಾದನೇರಿ ಕ್ರಾಸ್‌ ಬಳಿ ಎರಡ್ಮೂರು ವರ್ಷದ ಗಂಡು ಕರಡಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿತ್ತು.

ಹೊಸಪೇಟೆ: ದರೋಜಿ ಕರಡಿಧಾಮದಲ್ಲೀಗ ಸಫಾರಿ ಸೇವೆ..!

ಎಷ್ಟು ಬಲಿಯಾಗಬೇಕು:

ಹೆದ್ದಾರಿ ಉದ್ದಕ್ಕೂ ಕಾಡು ಪ್ರಾಣಿಗಳಿವೆ(Wild Animals). ವಾಹನ ನಿಧಾನ ಚಲಿಸಿ ಎಂದು ಸಾಲು ಸಾಲು ಬೋರ್ಡ್‌ ಹಾಕಿದ್ದರೂ ಸವಾರರು ಅತೀ ವೇಗವಾಗಿ ಹೋಗುವಾಗ ಕರಡಿ ಅಸು ನೀಗುತ್ತಿವೆ. ಹತ್ತು ವರ್ಷದಲ್ಲಿ 11 ಕರಡಿಗಳು ಸಾವನ್ನಪ್ಪಿದ್ದು ಇನ್ನೆಷ್ಟು ಬಲಿಯಾಗಬೇಕು ಎಂದು ಹಿರಿಯ ಅರಣ್ಯ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ನನ್ನ ಅವಧಿಯಲ್ಲಿಯೇ 6 ಕರಡಿ ಹೆದ್ದಾರಿ ಅಪಘಾತದಲ್ಲಿ ಮೃತಪಟ್ಟಿವೆ. ಅದು ಬೆಳಗಿನ ಜಾವವೇ ನಡೆದಿವೆ. ನಾನು ಬರುವ ಮೊದಲು 5 ಕರಡಿಗಳು ಸತ್ತಿವೆ. ಇದರ ಲೆಕ್ಕ ಇನ್ನೂ ಹೆಚ್ಚಿರಬಹುದು ಎಂದು ಹೇಳಿದ್ದಾರೆ.

ಸರ್ವೇ ಆಗಿಲ್ಲ:

ಜಿಲ್ಲೆಯಲ್ಲಿ ಕರಡಿ ಸಂತತಿ ದೊಡ್ಡ ಪ್ರಮಾಣದಲ್ಲಿದ್ದು ಈ ವರೆಗೂ ಸರ್ವೇ ಮಾಡಿಲ್ಲ. ಇವುಗಳ ಜತೆಗೆ ಕಾಡುಪ್ರಾಣಿಗಳ ಸಂಖ್ಯೆಯೂ ಹೆಚ್ಚಿದೆ. ಇವುಗಳ ಸಂರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ ಎನ್ನುವುದು ಪ್ರಾಣಿಪ್ರಿಯರ ವಾದ. ಕರಡಿಗಳು ಊರೊಳಗೆ, ಜಮೀನಿಗೆ ನುಗ್ಗಿ ಬೆಳೆ ನಾಶ(Crop Loss) ಮಾಡಿದ ಪ್ರಕರಣಗಳು ಸಹ ಜರುಗಿವೆ.

ಸರ್ಕಾರದ ಹಂತದಲ್ಲಿಯೇ ಉಳಿದ ಕರಡಿಧಾಮ:

ಹಿರೇಸೂಳಿಕೇರಿ ಅರಣ್ಯ ಇಲಾಖೆ ವ್ಯಾಪ್ತಿಯ 800 ಎಕರೆ ಪ್ರದೇಶದಲ್ಲಿ ಕರಡಿಧಾಮ ನಿರ್ಮಿಸಲು ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ, ಸರ್ಕಾರ(Government of Karnataka) ಅದಕ್ಕೆ ಅನುಮೋದನೆ ನೀಡಿಯೇ ಇಲ್ಲ. ಕರಡಿಗಳು ಬಲಿಯಾದಾಗ ಮಾತ್ರ ಕರಡಿಧಾಮ ನಿರ್ಮಾಣದ ಚರ್ಚೆ ಮುಂದೆ ಬರುತ್ತದೆ. ಬಳಿಕ ಅದನ್ನು ಮರೆಯಲಾಗುತ್ತದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಕರಡಿಧಾಮ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿ ಕರಡಿಗಳ ಸಂತತಿ ಉಳಿವಿಗೆ ಆದ್ಯತೆ ನೀಡಬೇಕು ಎಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.

ಗಂಗಾವತಿ ನಗರದೊಳಗೆ ನುಗ್ಗಿದ ಕರಡಿ: ಮೂವರ ಮೇಲೆ ದಾಳಿ, ಬೆಚ್ಚಿಬಿದ್ದ ಜನತೆ

ಗ್ರಿಲ್‌ ಅಳವಡಿಸಿ:

ಹಿರೇಸೂಳಿಕೇರಿ, ಮುನಿರಾಬಾದ್‌, ಮ್ಯಾದನೇರಿ ಸೇರಿದಂತೆ ಕರಡಿಗಳು ವಾಸಿಸುವ ಪ್ರದೇಶದಲ್ಲಿ ಹಾದುಹೋಗಿರುವ ಹೆದ್ದಾರಿಯುದ್ದಕ್ಕೂ ಗ್ರಿಲ್‌ ಅಳವಡಿಸಿದರೆ ಕರಡಿಗಳ ಬಲಿ ತಡೆಯಬಹುದು. ಅರಣ್ಯ(Forest) ಪ್ರದೇಶದಲ್ಲಿ ಮಾನವನ ಅತಿಕ್ರಮಣದಿಂದ ಆಹಾರ ಅರಸಿ ಕರಡಿಗಳು ರಸ್ತೆ ದಾಟುವಾಗ ಈ ರೀತಿ ಅಪಘಾತ ಸಂಭವಿಸುತ್ತಿದೆ.

ಅರಣ್ಯ ಇಲಾಖೆಯಿಂದ ಕರಡಿಗಳ ಸರ್ವೇ ಆಗಿಲ್ಲ. ಕರಡಿಧಾಮ ನಿರ್ಮಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು ಪ್ರಸ್ತಾವನೆ ದೊರೆತಿಲ್ಲ. ಹೆದ್ದಾರಿಯುದ್ದಕ್ಕೂ ನಾಮಫಲಕ ಅಳವಡಿಸಿದ್ದರೂ ಕರಡಿಗಳು ಅಪಘಾತದಲ್ಲಿ ಮೃತಪಡುವುದು ತಪ್ಪಿಲ್ಲ ಅಂತ ಕೊಪ್ಪಳ ಡಿಎಫ್‌ಒ ಹರ್ಷಕುಮಾರ ತಿಳಿಸಿದ್ದಾರೆ.  

ಜಿಲ್ಲೆಯಲ್ಲಿ ವೈವಿಧ್ಯಮಯ ಪ್ರಾಣಿಗಳಿವೆ. ಕರಡಿ, ಚಿರತೆ, ಜಿಂಕೆ ಸೇರಿದಂತೆ ಹತ್ತು ಹಲವು ಬಗೆಯ ಕಾಡುಪ್ರಾಣಿಗಳು ಇಲ್ಲಿವೆ. ಇವುಗಳನ್ನು ಸಂರಕ್ಷಿಸುವ ಯೋಜನೆ ಜಾರಿಗೊಳಿಸಬೇಕು. ಕರಡಿಗಳು ಹೆದ್ದಾರಿಯಲ್ಲಿ ಬಲಿಯಾಗುತ್ತಿರುವುದು ನೋವಿನ ಸಂಗತಿ ಅಂತ ಪ್ರಾಣಿಪ್ರಿಯ ಸುಜೀತ್‌ ಶೆಟ್ಟರ್‌ ಹೇಳಿದ್ದಾರೆ. 

Follow Us:
Download App:
  • android
  • ios