ವರುಣಾ ಅಖಾಡ ಬಿಟ್ಟು ವಿಜಯೇಂದ್ರ ಹೊರಬರಲು ಕಾರಣಗಳಿವು
- ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲವೆಂದು ಯಡಿಯೂರಪ್ಪ ಘೋಷಣೆ
- ವಿಜಯೇಂದ್ರ ಬದಲು ಜಿಲ್ಲಾ ಪಂಚಾಯತ್ ಸದಸ್ಯ ಸದಾನಂದಗೆ ಟಿಕೆಟ್ ನೀಡಲು ಚಿಂತನೆ
- ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ವರುಣಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ
ಮೈಸೂರು (ಏ.23): ಭಾರೀ ಕುತೂಹಲ ಕೆರಳಿಸಿದ್ದ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕಣದಿಂದ ಹಿಂದೆ ಸರಿದಿದ್ದಾರೆ. ಕೊನೆಕ್ಷಣದಲ್ಲಿ ಸ್ಪರ್ಧೆಯಿಂದ ವಿಜಯೇಂದ್ರ ಹಿಂದೆ ಸರಿಯಲು ಹಲವು ಕಾರಣಗಳಿವೆ.
ಮೊದಲನೆಯದಾಗಿ, ಬಿಜೆಪಿಗೆ ವರುಣಾದಲ್ಲಿ ಯಾವುದೇ ಪ್ರಬಲವಾದ ನೆಲೆಯಿಲ್ಲ. ಕಾಂಗ್ರೆಸ್ ಬಳಿಕ ಇಲ್ಲಿ ಪ್ರಾಬಲ್ಯವಿರುವುದು ಜೆಡಿಎಸ್ ಪಕ್ಷಕ್ಕೆ. ಬಿಜೆಪಿ ತೃಪ್ತಿದಾಯಕ ಪ್ರಮಾಣದಲ್ಲಿ ಮತಗಳಿಸಬೇಕಾದರೆ ಇಲ್ಲಿ ಬಹಳ ಹರಸಾಹಸ ಪಡಬೇಕು.
ಎರಡನೆಯದಾಗಿ, ವಿಜಯೇಂದ್ರರನ್ನು ಕಣಕ್ಕಿಳಿಸುವುದರಿಂದ ನಾಯಕರೇ ವಂಶ-ರಾಜಕಾರಣ ನಡೆಸುತ್ತಿದ್ದಾರೆ ಎಂಬ ಆರೋಪವನ್ನು ಬಿಜೆಪಿ ಎದುರಿಸಬೇಕಾಗುತ್ತದೆ. ಆದರೆ ಈಗಾಗಲೇ ಗೋವಿಂದ ಕಾರಜೋಳ ಹಾಗೂ ಸೋಮಣ್ಣ ಅಪ್ಪ-ಮಕ್ಕಳಿಗೆ ಬಿಜೆಪಿ ಟಿಕೆಟ್ ನೀಡಿದೆ.
ವರುಣಾದಲ್ಲಿ ವಿಜಯೇಂದ್ರ ಸೋಲುವುದು ಖಚಿತವೆಂದು ಆಂತರೀಕ ಸಮೀಕ್ಷೆ ಹೇಳಿದೆ. ಅದಾಗ್ಯೂ ವಿಜಯೇಂದ್ರರನ್ನು ಕಣಕ್ಕಿಳಿಸುವುದು ‘ರಾಜಕೀಯ ಆತ್ಮಹತ್ಯೆ’ಯಾಗುತ್ತದೆ.
ವಿಜಯೇಂದ್ರ ಸೋತರೆ ಅವರ ರಾಜಕೀಯ ಭವಿಷ್ಯಕ್ಕೆ ಅದು ಮಾರಕವಾಗಲೂಬಹುದು ಎಂಬ ಲೆಕ್ಕಾಚಾರ ಯಡಿಯೂರಪ್ಪರವರದ್ದು. ಈ ಹಿನ್ನಲೆಯಲ್ಲಿ ಯಡಿಯೂರಪ್ಪ ಈ ತೀರ್ಮಾನ ಕೈಗೊಂಡಿದ್ದಾರೆಂದು ಹೇಳಲಾಗುತ್ತಿದೆ.