ಬಾದಾಮಿಯಲ್ಲಿ ಸಿದ್ದರಾಮ v/s ಶ್ರೀರಾಮ
- ಕೊನೆಗೂ ಬಾದಾಮಿ ಅಭ್ಯರ್ಥಿಯನ್ನು ಅಂತಿಮಗೊಳಿಸಿದ ಬಿಜೆಪಿ
- ಬಾದಾಮಿಯಲ್ಲಿ ಸಿದ್ದರಾಮಯ್ಯ v/s ಶ್ರೀರಾಮುಲು
- ಮೊಳಕಾಲ್ಮೂರಿನಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಶ್ರೀರಾಮುಲು
ಬೆಂಗಳೂರು (ಏ. 23): ಭಾರೀ ಕುತೂಹಲ ಕೆರಳಿಸಿರುವ ಬಾದಾಮಿ ಕ್ಷೇತ್ರಕ್ಕೆ ಕೊನೆಗೂ ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ.
ಬಾದಾಮಿಯಲ್ಲಿ ಕಾಂಗ್ರೆಸ್’ನಿಂದ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲಿದ್ದು, ಬಿಜೆಪಿಯು ಶ್ರೀರಾಮುಲು ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಬಾದಾಮಿಯ ಜನರ ಒತ್ತಾಯದ ಮೇರೆಗೆ ತಾನು ಬಾದಾಮಿಯಿಂದ ಸ್ಪರ್ಧಿಸುವುದಾಗಿ ಸಿಎಂ ಹೇಳಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆಗೆ ಏ.24 ಕೊನೆ ದಿನವಾಗಿದ್ದು, ಸಿದ್ದರಾಮಯ್ಯ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಸಿದ್ದರಾಮಯ್ಯಗೆ ಪ್ರಬಲ ಸ್ಪರ್ಧೆಯೊಡ್ಡಲು ಬಹಳ ಲೆಕ್ಕಾಚಾರದ ಬಳಿಕ ಇದೀಗ ಶ್ರೀರಾಮುಲು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಶ್ರೀರಾಮುಲು ಈಗಾಗಲೇ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಕುರುಬ, ಅಲ್ಪಸಂಖ್ಯಾತ ಹಾಗೂ ಇತರ ಹಿಂದುಳಿದ ವರ್ಗಗಳ ಮತಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಮುಲು ಸ್ಪರ್ಧೆಗೆ ಅನುಕೂಲವಾಗಬಹುದೆಂದು ಬಿಜೆಪಿ ಲೆಕ್ಕಾಚಾರ ಹಾಕಿದೆ.
ಹೈಕಮಾಂಡ್ ಒಪ್ಪಿದರೆ ತಾನು ಸ್ಪರ್ಧಿಸುವುದಾಗಿ ಭಾನುವಾರ ಯಡಿಯೂರಪ್ಪ ಹೇಳಿದ್ದರು.