Asianet Suvarna News Asianet Suvarna News

ಇದು 'ಪಬ್ಲಿಸಿಟಿ ಇಂಟ್ರಸ್ಟ್‌ ಲಿಟಿಗೇಷನ್‌', ತಾಜ್‌ಮಹಲ್‌ ಕುರಿತಾದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್‌!

ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಎಂ ಎಂ ಸುಂದರೇಶ್‌ ಅವರ ಪೀಠವು ಅರ್ಜಿಯನ್ನು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸ್ಪಷ್ಟವಾಗಿ ನಿರಾಕರಿಸಿದೆ.

This is Publicity interest litigation Supreme Court dismisses plea on Taj Mahal san
Author
First Published Oct 21, 2022, 3:22 PM IST

ನವದೆಹಲಿ (ಅ.21): ತಾಜ್‌ಮಹಲ್‌ನಲ್ಲಿರುವ ಮುಚ್ಚಿರುವ 22 ಕೋಣೆಗಳನ್ನು ತೆರೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಅರ್ಜಿದಾರರಿಗೆ ಛೀಮಾರಿ ಹಾಕಿದೆ. ಇದು ಪಬ್ಲಿಕ್‌ ಇಂಟ್ರಸ್ಟ್‌ ಲಿಟಿಗೇಷನ್‌ ರೀತಿ ಕಾಣುತ್ತಿಲ್ಲ, ಪಬ್ಲಿಸಿಟಿ ಇಂಟ್ರೆಸ್ಟ್‌ ಲಿಟಿಗೇಷನ್‌ ರೀತಿ ಕಾಣುತ್ತಿದೆ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಎಂ ಎಂ ಸುಂದರೇಶ್‌ ಅಭಿಪ್ರಾಯಪಟ್ಟಿದೆ. ಆ ಮೂಲಕ ಅರ್ಜಿಯನ್ನು ತಿರಸ್ಕರಿಸಿದ್ದ ಅಲಹಬಾದ್‌ ಹೈಕೋರ್ಟ್‌ನ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ತಾಜ್‌ಮಹಲ್‌ನ ಇತಿಹಾಸ ಮತ್ತು ಸ್ಮಾರಕದ ಆವರಣದಲ್ಲಿ 22 ಕೊಠಡಿಗಳನ್ನು ತೆರೆಯುವ ಕುರಿತು "ಸತ್ಯಶೋಧನೆ ತನಿಖೆ" ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡುವ ಆದೇಶ ಪ್ರಕಟಿಸಿದೆ. "ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ, ಇದು ಪ್ರಚಾರ ಹಿತಾಸಕ್ತಿ ಮೊಕದ್ದಮೆಯಾಗಿದೆ. ವಜಾಗೊಳಿಸಲಾಗಿದೆ," ಎಂದು ಪೀಠ ಹೇಳಿದೆ.

ಮೇ 12 ರಂದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಯೋಧ್ಯೆ ಘಟಕದ ಮಾಧ್ಯಮ ಉಸ್ತುವಾರಿಯಾಗಿರುವ ಅರ್ಜಿದಾರ ರಜನೀಶ್ ಸಿಂಗ್ (Rajaneesh Singh) ಅವರು ತಮ್ಮ ಕಾನೂನು ಅಥವಾ ಸಾಂವಿಧಾನಿಕ ಹಕ್ಕುಗಳಲ್ಲಿ ಯಾವುದನ್ನು ಉಲ್ಲಂಘಿಸುತ್ತಿದ್ದಾರೆ ಎಂಬುದನ್ನು ಸೂಚಿಸಲು ವಿಫಲರಾಗಿದ್ದಾರೆ ಎಂದು ಹೈಕೋರ್ಟ್(Allahabad High Cour) ಹೇಳಿತ್ತು. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಯನ್ನು "ಸಾಂದರ್ಭಿಕ" ರೀತಿಯಲ್ಲಿ ಸಲ್ಲಿಸಿದ ಅರ್ಜಿದಾರರ ಪರ ವಕೀಲರಿಗೂ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದೆ. ಈ ವಿಷಯದಲ್ಲಿ ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಆದೇಶವನ್ನು ರವಾನಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಸಂವಿಧಾನದ ಈ ವಿಧಿಯು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಅಥವಾ ಪ್ರಾಧಿಕಾರಕ್ಕೆ ಆದೇಶಗಳನ್ನು ಅಥವಾ ರಿಟ್‌ಗಳನ್ನು ಹೊರಡಿಸಲು ಉಚ್ಚ ನ್ಯಾಯಾಲಯಕ್ಕೆ ಅಧಿಕಾರ ನೀಡುತ್ತದೆ. ಮೊಘಲರ ಕಾಲದ ಸಮಾಧಿಯು (Taj Mahal) ಶಿವನ ದೇವಾಲಯವಾಗಿತ್ತು ಎಂದು ಹಲವಾರು ಹಿಂದೂ ಬಲಪಂಥೀಯ ಸಂಘಟನೆಗಳು ಹಿಂದೆ ಹೇಳಿಕೊಂಡಿದ್ದವು.

Taj Mahal: ತಾಜ್‌ನ ರಹಸ್ಯ ಕೋಣೆಗಳು ಖಾಲಿ: ವಿವಾದಕ್ಕೂ ಮೊದಲೇ ಚಿತ್ರ ಬಿಡುಗಡೆ

ಈ ಸ್ಮಾರಕವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಸಂರಕ್ಷಣೆ ಮಾಡುತ್ತಿದೆ.  ಪುರಾತನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ಸ್ಥಳಗಳು ಮತ್ತು ಅವಶೇಷಗಳು (ರಾಷ್ಟ್ರೀಯ ಪ್ರಾಮುಖ್ಯತೆಯ ಘೋಷಣೆ) ಕಾಯಿದೆ, 1951 ಮತ್ತು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯಿದೆ, 1958 ರ ಕೆಲವು ನಿಬಂಧನೆಗಳನ್ನುತಾಜ್‌ಮಹಲ್‌ ವಿಚಾರದಲ್ಲಿ ರದ್ದುಗೊಳಿಸುವಂತೆಯೂ ಅರ್ಜಿಯು ಕೋರಿತ್ತು. ಈ ಕಾಯಿದೆಯ ಅಡಿಯಲ್ಲಿ ಫತೇಪುರ್ ಸಿಕ್ರಿ, ಆಗ್ರಾ ಕೋಟೆ ಮತ್ತು ಇತಿಮದ್-ಉದ್-ದೌಲಾ ಸಮಾಧಿಯನ್ನು ಐತಿಹಾಸಿಕ ಸ್ಮಾರಕಗಳೆಂದು ಘೋಷಣೆ ಮಾಡಲಾಗಿದೆ.

ತಾಜ್ ಮಹಲ್ ನ ಮುಚ್ಚಿದ ರೂಮ್ ಗಳ ಬಗ್ಗೆ ಪ್ರಶ್ನೆ ಮಾಡಲು ನೀವ್ಯಾರು ಎಂದು ಕೇಳಿದ ಅಲಹಾಬಾದ್ ಹೈಕೋರ್ಟ್!

ಏನಿದು ವಿಚಾರ: ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಆದೇಶದ ಮೇರೆಗೆ ತಾಜ್‌ಮಹಲ್‌ನ ಒಳಗೆ ವಿಗ್ರಹಗಳು ಮತ್ತು ಶಾಸನಗಳನ್ನು ಅಡಗಿಸಿ ಇಡಲಾಗಿದೆ. ಪ್ರಮುಖ ಐತಿಹಾಸಿಕ ಪುರಾವೆಗಳನ್ನು ಹುಡುಕಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಅದಕ್ಕಾಗಿ ಸತ್ಯಶೋಧನಾ ಸಮಿತಿಯನ್ನು ರಚನೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಇದೇ ವಿಚಾರದಲ್ಲಿ ವಾದ ಮಾಡಿದ್ದ ಅರ್ಜಿದಾರರು, ತಾಜ್ ಮಹಲ್ ಹಳೆಯ ಶಿವ ದೇವಾಲಯವಾಗಿದ್ದು, ಇದನ್ನು ತೇಜೋ ಮಹಾಲಯ ಎಂದು ಕರೆಯಲಾಗುತ್ತಿತ್ತು. ಎಂದು ಅನೇಕ ಹಿಂದೂ ಗುಂಪುಗಳು ಪ್ರತಿಪಾದಿಸುತ್ತಿವೆ, ಇದನ್ನು ಅನೇಕ ಇತಿಹಾಸಕಾರರು ಸಹ ಬೆಂಬಲಿಸಿದ್ದಾರೆ ಎಂದಿದ್ದರು. ತಾಜ್‌ಮಹಲ್‌ನ ನಾಲ್ಕು ಅಂತಸ್ತಿನ ಕಟ್ಟಡದ ಮೇಲಿನ ಮತ್ತು ಕೆಳಗಿನ ಭಾಗದಲ್ಲಿ 22 ಕೊಠಡಿಗಳು ಶಾಶ್ವತವಾಗಿ ಬೀಗ ಹಾಕಲ್ಪಟ್ಟಿವೆ ಮತ್ತು ಪಿಎನ್‌ ಓಕ್‌ನಂತಹ ಇತಿಹಾಸಕಾರರು ಮತ್ತು ಅನೇಕ ಹಿಂದೂ ಆರಾಧಕರು ಆ ಕೊಠಡಿಗಳಲ್ಲಿ ಶಿವ ದೇವಾಲಯವಿದೆ ಎಂದು ನಂಬುತ್ತಾರೆ ಎಂದು ಅರ್ಜಿದಾರ ರಜನೀಶ್‌ ಸಿಂಗ್ ಹೇಳಿದ್ದಾರೆ.

Follow Us:
Download App:
  • android
  • ios