ಕಾಶ್ಮೀರ: ಉಗ್ರರ ಗುಂಡಿಗೆ ಮತ್ತಿಬ್ಬರು ನಾಗರಿಕರು ಬಲಿ!
* ಹೊರರಾಜ್ಯದವರನ್ನೇ ಗುರಿಯಾಗಿಸಿ ದಾಳಿ
* ಕಾಶ್ಮೀರ: ಉಗ್ರರ ಗುಂಡಿಗೆ ಮತ್ತಿಬ್ಬರು ನಾಗರಿಕರು ಬಲಿ
* ಬಿಹಾರ, ಯುಪಿ ಮೂಲದ ಇಬ್ಬರ ಹತ್ಯೆ
* ಒಂದೇ ತಿಂಗಳಲ್ಲಿ 9 ನಾಗರಿಕರ ಹತ್ಯೆ
ಶ್ರೀನಗರ(ಅ.17): ಕೇಂದ್ರಾಡಳಿತ ಪ್ರದೇಶ(Union Territory) ಜಮ್ಮು ಮತ್ತು ಕಾಶ್ಮೀರದಲ್ಲಿ(Jammu Kashmir) ಅಮಾಯಕ ನಾಗರಿಕರನ್ನು ಹತ್ಯೆ ಮಾಡುವ ಪಾಕಿಸ್ತಾನ(Pakistan) ಬೆಂಬಲಿತ ಉಗ್ರರ ಪಾತಕಿ ಕೃತ್ಯ ಮುಂದುವರೆದಿದ್ದು, ಶನಿವಾರ ಇಬ್ಬರನ್ನುಗುಂಡಿಟ್ಟು ಹತ್ಯೆ ಮಾಡಲಾಗಿದೆ. ಇದರೊಂದಿಗೆ ಈ ತಿಂಗಳಲ್ಲಿ ಉಗ್ರರಿಗೆ ಬಲಿಯಾದ ನಾಗರಿಕರ ಸಂಖ್ಯೆ 9ಕ್ಕೆ ಏರಿದೆ.
ಶ್ರೀನಗರದ(Srinagar) ಈದ್ಗಾ(Edga) ಪ್ರದೇಶದಲ್ಲಿ ಶನಿವಾರ ಸಂಜೆ 30 ವರ್ಷದ ಅರವಿಂದ್ ಕುಮಾರ ಶಾ ಎಂಬ ಯುವಕನ ಮೇಲೆ ಉಗ್ರರು ದಾಳಿ ನಡೆಸಿದ್ದು, ಅರವಿಂದ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಿಹಾರ ಮೂಲದ ಅರವಿಂದ್ ಕುಮಾರ್, ಬೀದಿಬದಿ ವ್ಯಾಪಾರಿಯಾಗಿದ್ದು, 370 ವಿಧಿ ರದ್ದಾದ ಮೇಲೆ ಶ್ರೀನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳಲು ಶುರುಮಾಡಿದ್ದ. ಮತ್ತೊಂದೆಡೆ ಪುಲ್ವಾಮಾದಲ್ಲಿ(Pulwama) ಯುಪಿ ಮೂಲದ ಕಾರ್ಪೆಂಟರ್ ಸಗೀರ್ ಅಹ್ಮದ್ ಎಂಬಾತನನ್ನೂ ಉಗ್ರರು ಗುಂಡಿಟ್ಟು ಕೊಂದಿದ್ದಾರೆ.
ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದು ನೆರೆಯ ಪಾಕಿಸ್ತಾನವನ್ನು(Pakistan) ಕಂಗೆಡಿಸಿದೆ. ಮತ್ತೊಂದೆಡೆ ಹೊರರಾಜ್ಯದವರೂ, ಕಾಶ್ಮೀರದಲ್ಲಿ ಭೂಮಿ ಖರೀದಿಗೆ ಅವಕಾಶ ಮಾಡಿಕೊಡುವ ಸರ್ಕಾರದ ನಿರ್ಧಾರ ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಹಿಂದೂಗಳು ಮತ್ತು ಅನ್ಯರಾಜ್ಯದ ವ್ಯಕ್ತಿಗಳನ್ನೇ ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿದ್ದಾರೆ ಎನ್ನಲಾಗಿದೆ.