Asianet Suvarna News Asianet Suvarna News

ಗಣಿ ತೆರಿಗೆ ಸಂಗ್ರಹ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ, ರಾಜ್ಯಕ್ಕೆ ಮಾತ್ರ: ಸುಪ್ರೀಂಕೋರ್ಟ್‌ ತೀರ್ಪು

‘ಖನಿಜಗಳ ಮೇಲಿನ ರಾಯಧನವು (ರಾಯಲ್ಟಿ) ತೆರಿಗೆ ಅಲ್ಲ. ಗಣಿಗಳು ಹಾಗೂ ಖನಿಜ ಹೊಂದಿರುವ ಭೂಮಿಗಳ ಮೇಲೆ ತೆರಿಗೆ ಹೇರುವ ಶಾಸನಾತ್ಮಕ ಅಧಿಕಾರವನ್ನು ರಾಜ್ಯಗಳು ಮಾತ್ರ ಹೊಂದಿವೆ’ ಎಂದು ಸುಪ್ರೀಂಕೋರ್ಟ್‌ 8:1 ಬಹುಮತದ ತೀರ್ಪು ನೀಡಿದೆ. 

Power to collect mining tax does not belong to central govt only to state Supreme Court judgement gvd
Author
First Published Jul 26, 2024, 4:28 AM IST | Last Updated Jul 26, 2024, 8:52 AM IST

ನವದೆಹಲಿ (ಜು.26): ‘ಖನಿಜಗಳ ಮೇಲಿನ ರಾಯಧನವು (ರಾಯಲ್ಟಿ) ತೆರಿಗೆ ಅಲ್ಲ. ಗಣಿಗಳು ಹಾಗೂ ಖನಿಜ ಹೊಂದಿರುವ ಭೂಮಿಗಳ ಮೇಲೆ ತೆರಿಗೆ ಹೇರುವ ಶಾಸನಾತ್ಮಕ ಅಧಿಕಾರವನ್ನು ರಾಜ್ಯಗಳು ಮಾತ್ರ ಹೊಂದಿವೆ’ ಎಂದು ಸುಪ್ರೀಂಕೋರ್ಟ್‌ 8:1 ಬಹುಮತದ ತೀರ್ಪು ನೀಡಿದೆ. 9 ಸದಸ್ಯ ಬಲದ ಸಾಂವಿಧಾನಿಕ ಪೀಠದ ಈ ತೀರ್ಪಿನಿಂದಾಗಿ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಜಾರ್ಖಂಡ್‌ ಹಾಗೂ ಒಡಿಶಾದಂತಹ ಖನಿಜ ಸಂಪತ್ತಿನ ರಾಜ್ಯಗಳಿಗೆ ಈ ತೀರ್ಪು ಮತ್ತಷ್ಟು ಆದಾಯದ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

‘ಖನಿಜಗಳ ಮೇಲಿನ ರಾಯಧನ ಎಂಬುದು ತೆರಿಗೆಯೇ? ಖನಿಜಗಳನ್ನು ಹೊರತೆಗೆಯುವುದಕ್ಕೆ ತೆರಿಗೆ ಹೇರುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆಯೇ? ಅಥವಾ ರಾಜ್ಯಗಳೂ ಅದರಲ್ಲಿ ಅಧಿಕಾರ ಹೊಂದಿವೆಯೇ? ಅಥವಾ ತಮ್ಮ ವ್ಯಾಪ್ತಿಯಲ್ಲಿ ಖನಿಜ ಹೊಂದಿರುವ ಭೂಮಿಗಳ ಮೇಲೆ ತೆರಿಗೆ ಹೇರುವ ಅಧಿಕಾರ ರಾಜ್ಯಗಳಿಗೆ ಇದೆಯೇ?’ ಎಂಬುದು ಬಹಳ ಬಿಕ್ಕಟ್ಟಿನ ವಿಷಯವಾಗಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹಾಗೂ ಇತರೆ ಏಳು ನ್ಯಾಯಮೂರ್ತಿಗಳು, 

ಪ್ರಕೃತಿ, ಚಾಮುಂಡಿದೇವಿ ಕಾಂಗ್ರೆಸ್‌ ಸರ್ಕಾರದ ಪರವಿದೆ: ಸಿಎಂ ಸಿದ್ದರಾಮಯ್ಯ

‘ಸಂವಿಧಾನದ 2ನೇ ಪಟ್ಟಿಯಲ್ಲಿರುವ 50ನೇ ನಮೂದಿನ ಪ್ರಕಾರ ಖನಿಜ ಹಕ್ಕಿನ ಮೇಲೆ ತೆರಿಗೆ ಹೇರುವ ಅಧಿಕಾರ ಸಂಸತ್ತಿಗೆ ಇಲ್ಲ. ಖನಿಜಗಳ ಮೇಲಿನ ರಾಯಧನ ಎಂಬುದು ತೆರಿಗೆಯಲ್ಲ’ ಎಂದು ಬಹುಮತದ ತೀರ್ಪು ನೀಡಿದರು. ಇದಕ್ಕೆ ಭಿನ್ನ ತೀರ್ಪು ನೀಡಿದ ಕನ್ನಡಿಗ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ‘ಗಣಿ ಹಾಗೂ ಖನಿಜಯುಕ್ತ ಜಾಗಗಳ ಮೇಲೆ ತೆರಿಗೆ ಹೇರುವ ಅಧಿಕಾರ ರಾಜ್ಯಗಳಿಗೆ ಇಲ್ಲ’ ಎಂದು ಹೇಳಿದರು. ಆದರೆ ತೀರ್ಪು 8:1 ಆಗಿರುವುದರಿಂದ ಬಹುಮತದ ತೀರ್ಪೇ ಜಾರಿಗೆ ಬರಲಿದೆ. 1989ರಲ್ಲಿ ಸುಪ್ರೀಂಕೋರ್ಟ್‌ನ ಸಪ್ತಸದಸ್ಯ ಪೀಠವು ‘ರಾಯಧನ ಎಂಬುದು ತೆರಿಗೆ’ ಎಂದು ಹೇಳಿತ್ತು. ‘ಅದು ಸರಿಯಲ್ಲ’ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

ಏನಿದು ಪ್ರಕರಣ?: ಇಂಡಿಯಾ ಸಿಮೆಂಟ್‌ ಕಂಪನಿ ತಮಿಳುನಾಡಿನಲ್ಲಿ ಗಣಿ ಗುತ್ತಿಗೆಯನ್ನು ಪಡೆದುಕೊಂಡಿತ್ತು. ರಾಜ್ಯ ಸರ್ಕಾರಕ್ಕೆ ರಾಯಧನವನ್ನೂ ಪಾವತಿಸುತ್ತಿತ್ತು. ರಾಯಧನದ ಮೇಲೆ ತಮಿಳುನಾಡು ಸರ್ಕಾರ ಸೆಸ್‌ ವಿಧಿಸಿತ್ತು. ಇದು ಕೋರ್ಟ್‌ ಮೆಟ್ಟಿಲೇರಿತ್ತು. 1989ರಲ್ಲಿ ಸುಪ್ರೀಂಕೋರ್ಟ್‌ನ ಸಪ್ತಸದಸ್ಯ ಪೀಠ ಇಂಡಿಯಾ ಸಿಮೆಂಟ್‌ ಪರ ತೀರ್ಪು ನೀಡಿತ್ತು. ‘ರಾಜ್ಯಗಳು ರಾಯಧನವನ್ನು ಸಂಗ್ರಹಿಸಬಹುದು. ಆದರೆ ಗಣಿಗಾರಿಕೆ ಹಾಗೂ ಖನಿಜ ಅಭಿವೃದ್ಧಿಯ ಮೇಲೆ ಮತ್ತಷ್ಟು ತೆರಿಗೆ ಹೇರುವಂತಿಲ್ಲ. ರಾಯಧನ ಎಂಬುದು ತೆರಿಗೆ’ ಎಂದು ಹೇಳಿತ್ತು. ಈ ಮೂಲಕ ರಾಜ್ಯಗಳು ಸಂಗ್ರಹಿಸುವ ಗಣಿಗಾರಿಕೆ ತೆರಿಗೆಗೆ ನಿರ್ಬಂಧ ಹೇರಿತ್ತು.

ಆದರೆ 2004ರಲ್ಲಿ ಸುಪ್ರೀಂಕೋರ್ಟ್‌ನ ಪಂಚಸದಸ್ಯ ಪೀಠ ಮತ್ತೊಂದು ಪ್ರಕರಣದ ವಿಚಾರಣೆ ವೇಳೆ, ‘ರಾಯಧನ ಎಂಬುದು ತೆರಿಗೆ ಅಲ್ಲ. 1989ರ ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ಮುದ್ರಣ ದೋಷವಾಗಿದೆ. ರಾಯಧನದ ಮೇಲೆ ವಿಧಿಸಲಾಗುವ ಸೆಸ್‌ ಎಂಬುದು ತೆರಿಗೆ’ ಎಂದು ಅಭಿಪ್ರಾಯ ಪಟ್ಟಿತ್ತು. ಅದಾದ ಬಳಿಕ ಸುಪ್ರೀಂಕೋರ್ಟ್‌ನಲ್ಲಿ 80ಕ್ಕೂ ಅರ್ಜಿಗಳು ವಿವಿಧ ಸಮಯದಲ್ಲಿ ಸಲ್ಲಿಕೆಯಾಗಿದ್ದವು. ರಾಜ್ಯಗಳಿಗೆ ತೆರಿಗೆ ಅಧಿಕಾರವೇ ಇಲ್ಲ ಎಂದು ಖಾಸಗಿ ಹಾಗೂ ಸರ್ಕಾರಿ ಕಂಪನಿಗಳು ವಾದಿಸಿದ್ದವು. ಇಂಡಿಯಾ ಸಿಮೆಂಟ್‌ ಪ್ರಕರಣವನ್ನು ಸಪ್ತ ಸದಸ್ಯ ಪ್ರಕರಣ ವಿಚಾರಣೆ ನಡೆಸಿದ್ದ ಹಿನ್ನೆಲೆಯಲ್ಲಿ 9 ಸದಸ್ಯ ಬಲದ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಯಿತ್ತು. ಫೆಬ್ರವರಿಯಿಂದ ವಿಚಾರಣೆ ನಡೆದು ಈಗ ತೀರ್ಪು ಬಂದಿದೆ.

ಚನ್ನಪಟ್ಟಣದ ಎನ್‌ಡಿಎ ಮೈತ್ರಿಯಲ್ಲಿ ಒಡಕು: ಉಪಚುನಾವಣೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ

ಕೇಂದ್ರದಿಂದ ಸಹಸ್ರಾರು ಕೋಟಿ ವಾಪಸ್‌ ಕೊಡಿಸಿ: ‘ಗಣಿಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳಿಗೆ ಮಾತ್ರ ಇದೆ’ ಎಂಬ ಸುಪ್ರೀಂಕೋರ್ಟ್‌ ತೀರ್ಪಿನ ಬೆನ್ನಲ್ಲೇ ಈವರೆಗೂ ಕೇಂದ್ರ ಸರ್ಕಾರ ಗಣಿ ಮತ್ತು ಖನಿಜಗಳ ಮೇಲೆ ವಿಧಿಸಿರುವ ಸಹಸ್ರಾರು ಕೋಟಿ ರು. ಹಣವನ್ನು ವಸೂಲಿ ಮಾಡಿ ತಮಗೆ ಹಂಚಬೇಕು ಎಂದು ಜಾರ್ಖಂಡ್‌ ಹಾಗೂ ಒಡಿಶಾದಂತಹ ರಾಜ್ಯಗಳು ನ್ಯಾಯಾಲಯಕ್ಕೆ ಮನವಿ ಮಾಡಿವೆ. ತೀರ್ಪು ಪೂರ್ವಾನ್ವಯವಾಗುವಂತೆ ಕೋರ್ಟ್‌ ಆದೇಶಿಸಬೇಕು. ರಾಜ್ಯಗಳಿಗೆ ತೆರಿಗೆ ಹಣ ವಾಪಸ್‌ ಕೊಡಿಸಬೇಕು ಎಂದು ಕೋರಿವೆ. ಆದರೆ ತೀರ್ಪು ಇನ್ನು ಮುಂದೆ ಜಾರಿಗೆ ಬರುವಂತೆ ಆದೇಶಿಸಬೇಕು ಎಂದು ಕೇಂದ್ರ ವಾದಿಸಿದೆ. ಈ ಸಂಬಂಧ ಲಿಖಿತ ಹೇಳಿಕೆ ಸಲ್ಲಿಸಿದರೆ, ಜು.31ರಂದು ನಿರ್ಧಾರ ಕೈಗೊಳ್ಳುವುದಾಗಿ ನ್ಯಾಯಾಲಯ ಹೇಳಿದೆ.

Latest Videos
Follow Us:
Download App:
  • android
  • ios