2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಮೈತ್ರಿ ಮಾಡಿಕೊಂಡಿರುವ ಇಂಡಿಯಾ ಒಕ್ಕೂಟ ಇದೀಗ ಒಡೆದು ಚೂರಾಗುತ್ತಿದೆ. ಪಶ್ಚಿಮ ಬಂಗಾಳದ ಟಿಎಂಸಿ ಯಾವುದೇ ಮೈತ್ರಿ ಇಲ್ಲ, ಏಕಾಂಗಿ ಹೋರಾಟ ಮಾಡುವುದಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಕೂಡ ಇದೇ ರೀತಿ ಘೋಷಣೆ ಮಾಡಿದೆ. ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ, ಏಕಾಂಗಿ ಹೋರಾಟ ಮಾಡುವುದಾಗಿ ಮುಖ್ಯಮಂತ್ರಿ ಮಾನ್ ಹೇಳಿದ್ದಾರೆ. 

ಚಂಡಿಘಡ(ಜ.24) ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಕಳೆದೊಂದು ವರ್ಷದಿಂದ ಇಂಡಿಯಾ ಒಕ್ಕೂಟ ಮೈತ್ರಿ ಮಾಡಿಕೊಂಡಿರುವ ವಿಪಕ್ಷಗಳು ಬಿಜೆಪಿ ಸೋಲಿಸಲು ಸತತ ಸಭೆಗಳನ್ನು ನಡೆಸಿದೆ. ಬಿಜೆಪಿ ಸೋಲಿಸಲು ತಮ್ಮ ವೈರತ್ವ ಬದಿಗಿಟ್ಟು ಒಗ್ಗಟ್ಟಿನ ಮಂತ್ರ ಪಠಿಸಿತ್ತು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಮನಸ್ತಾಪ ಹೆಚ್ಚಾಗಿದೆ. ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷ ತೃಣಮೂಲ ಕಾಂಗ್ರೆಸ್ ಈಗಾಗಲೇ ಮೈತ್ರಿ ಮುರಿದುಕೊಂಡು ಏಕಾಂಗಿ ಹೋರಾಟದ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಮೈತ್ರಿ ಮಾಡಿಕೊಳ್ಳಲ್ಲ, ಏಕಾಂಗಿಯಾಗಿ ಹೋರಾಟ ಮಾಡಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಮಮತಾ ಬ್ಯಾನರ್ಜಿ ಘೋಷಣೆ ಬೆನ್ನಲ್ಲೇ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಭಗವಂತ್ ಮಾನ್, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ. ಇಂಡಿಯಾ ಒಕ್ಕೂಟದ ಮೈತ್ರಿಯೊಂದಿಗೆ ಪಂಜಾಬ್‌ನಲ್ಲಿ ಆಪ್ ಅಖಾಡಕ್ಕಿಳಿಯುತ್ತಿಲ್ಲ. ಇಂಡಿಯಾ ಒಕ್ಕೂಟ ಮೈತ್ರಿ ಪಂಜಾಬ್‌ನಲ್ಲಿ ಇಲ್ಲ ಎಂದು ಭಗವಂತ್ ಮಾನ್ ಸ್ಪಷ್ಟಪಡಿಸಿದ್ದಾರೆ.

ಲೋಕಸಮರಕ್ಕೂ ಮುನ್ನ ಮೈತ್ರಿ ಠುಸ್, ಬಂಗಾಳದಲ್ಲಿ ಏಕಾಂಗಿ ಹೋರಾಟ ಘೋಷಿಸಿದ ಮಮತಾ!

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಈಗಾಗಲೇ ಅಧಿಕೃತ ಘೋಷಣೆ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲಿದೆ. ಇಲ್ಲಿ ಇಂಡಿಯಾ ಒಕ್ಕೂಟದ ಯಾವುದೇ ಮೈತ್ರಿ ಇಲ್ಲ. ಬಿಜೆಪಿಯನ್ನು ಟಿಎಂಸಿ ಏಕಾಂಗಿಯಾಗಿ ಸೋಲಿಸಿದೆ. ಈ ಬಾರಿಯೂ ಇದೇ ರೀತಿ ಸೋಲಿಸುವ ವಿಶ್ವಾಸವಿದೆ. ಹೀಗಾಗಿ ಬಂಗಾಳದಲ್ಲಿ ಮೈತ್ರಿ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇತ್ತ ಟಿಎಂಸಿ ಇತರ ರಾಜ್ಯಗಳಲ್ಲೂ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯುವುದಿಲ್ಲ. ಟಿಎಂಸಿ ಏಕಾಂಗಿಯಾಗಿ ಹೋರಾಟ ಮಾಡಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Scroll to load tweet…

ಮಮತಾ ಬ್ಯಾನರ್ಜಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಲು ತಡಬಡಾಯಿಸಿದ್ದಾರೆ. ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಬಿಜೆಪಿ ಸೋಲಿಸಲು ಸಜ್ಜಾಗಿದ್ದಾರೆ. ಮಮತಾ ಬ್ಯಾನರ್ಜಿ ಜೊತೆ ನಾವು ಚರ್ಚೆ ಮಾಡುತ್ತೇವೆ. ಅತೀ ದೊಡ್ಡ ಪಯಣದಲ್ಲಿ ಸ್ಪೀಡ್ ಬ್ರೇಕ್ ಸಹಜ. ಆದರೆ ಯಾವುದೇ ಮನಸ್ತಾಪವಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. 

ಲೋಕಸಭೆಗೆ ಬಿಎಸ್‌ಪಿ ಏಕಾಂಗಿ ಸ್ಪರ್ಧೆ: ‘ಇಂಡಿಯಾ’ ಒಕ್ಕೂಟಕ್ಕೆ ಮಾಯಾವತಿ ಶಾಕ್

ಎರಡು ಪ್ರಮುಖ ಪಕ್ಷಗಳು ನಿರ್ಧಾರ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿ ಒಕ್ಕೂಟವನ್ನು ಒಡೆದಿದೆ. ಲೋಕಸಭಾ ಚುನಾವಣೆಗೂ ಮೊದಲೇ ಇಂಡಿಯಾ ಒಕ್ಕೂಟ ಅಲುಗಾಡುತ್ತಿದೆ. ಇದೀಗ ಕಾಂಗ್ರೆಸ್ ನಂಬಿ ಮೈತ್ರಿ ಮಾಡಿಕೊಂಡ ಪಕ್ಷಗಳಿಗೆ ಆತಂಕ ಶುರುವಾಗಿದೆ. ಅತ್ತ ಸ್ಪರ್ಧಿಸಲು ಸ್ಥಾನಗಳೂ ಇಲ್ಲ, ಇತ್ತ ಮೈತ್ರಿ ಇಲ್ಲದಂತಾಗುವ ಆತಂಕ ಶುರುವಾಗಿದೆ.