ವಾಝೆ ಎಸೆದಿದ್ದ ಕಂಪ್ಯೂಟರ್, ನಂಬರ್ಪ್ಲೇಟ್ ನದಿಯಲ್ಲಿ ಪತ್ತೆ!
ವಾಝೆ ಎಸೆದಿದ್ದ ಕಂಪ್ಯೂಟರ್, ನಂಬರ್ಪ್ಲೇಟ್ ನದಿಯಲ್ಲಿ ಪತ್ತೆ| ಹಿರೇನ್ ಹತ್ಯೆ ಪ್ರಕರಣದಲ್ಲಿ ವಾಝೆ ಕೈವಾಡದ ಬಗ್ಗೆ ಮತ್ತಷ್ಟು ಸಾಕ್ಷ್ಯ
ಮುಂಬೈ(ಮಾ.29): ಮನ್ಸುಖ್ ಹಿರೇನ್ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಸಾಕ್ಷ್ಯಗಳಾದ, ಕಳವಾದ ಕಾರಿನ ನಂಬರ್ಪ್ಲೇಟ್, ಮಹತ್ವದ ದಾಖಲೆಗಳು ಇದೆ ಎನ್ನಲಾದ ಕಂಪ್ಯೂಟರ್ ಸಿಪಿಯು, ಲ್ಯಾಪ್ಟಾಪ್, ಡಿಜಿಟಲ್ ವಿಡಿಯೋ ರೆಕಾರ್ಡರ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಎನ್ಐಎ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ, ಸಚಿನ್ ವಾಝೆಯನ್ನು ಭಾನುವಾರ ಕರೆದೊಯ್ದು ಸ್ಥಳ ಮಹಜರು ನಡೆಸಿದ ವೇಳೆ, ಮುಂಬೈನ ಮಿಥಿ ನದಿಯಲ್ಲಿ ಎಸೆಯಲಾಗಿದ್ದ ಮೇಲ್ಕಂಡ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಳುಗು ತಜ್ಞರ ನೆರವು ಪಡೆದುಕೊಂಡು ನದಿಯಿಂದ ಲ್ಯಾಪ್ಟಾಪ್, ಕಂಪ್ಯೂಟರ್, ನಂಬರ್ಪ್ಲೇಟ್ ಹೊರ ತೆಗೆಯಲಾಗಿದೆ.
ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಇಡಲು ಹಿರೇನ್ ಕಾರನ್ನು ಬಳಸಲಾಗಿತ್ತು. ಘಟನೆ ನಡೆದ ಕೆಲ ದಿನಗಳಲೇ ಹಿರೇನ್ ನಿಗೂಢವಾಗಿ ಸಾವನ್ನಪ್ಪಿದ್ದರು. ಪ್ರಾಥಮಿಕ ತನಿಖೆ ವೇಳೆ ಈ ಸಾವಿನಲ್ಲಿ ವಾಝೆ ಕೈವಾಡ ಬೆಳಕಿಗೆ ಬಂದಿತ್ತು.