ಭಾರತ-ಪಾಕ್ ಲಕ್ಷ್ಮಣ ರೇಖೆಯಲ್ಲಿ ಮಾರಾಮಾರಿ, 5 ಉಗ್ರರು ಫಿನೀಶ್!
ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಅತ್ತ ಪಾಕಿಸ್ತಾನದಲ್ಲಿ ಕೊರೋನಾ ತಾಂಡವವಾಡುತ್ತಿದೆ. ದೇಶದ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಕೈಕಟ್ಟಿ ಕುಳಿತಿದೆ. ಆದರೂ ತನ್ನ ನರಿ ಬುದ್ದಿ ಮಾತ್ರ ಬಿಡುತ್ತಿಲ್ಲ. ಎಲ್ಲರೂ ಕೊರೋನಾ ಆತಂಕದಲ್ಲಿರುವಾಗ ಭಾರತದೊಳಗೆ ನುಸುಳಿದ ಪಾಕಿಸ್ತಾನ ಬೆಂಬಲಿತ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರ(ಏ.06): ಇಡೀ ವಿಶ್ವವೇ ತುರ್ತು ಪರಿಸ್ಥಿತಿಯಲ್ಲಿದೆ. ಕೊರೋನಾ ಮಾಹಾಮಾರಿಯಿಂದ ಕಂಗಾಲಾಗಿದೆ. ಅದರಲ್ಲೂ ಪಾಕಿಸ್ತಾನದಲ್ಲಿ ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಇಷ್ಟಾದರೂ ಪಾಕಿಸ್ತಾನ ಎಂದಿನ ಬುದ್ದಿ ಬಿಟ್ಟಿಲ್ಲ. ಭಾರತದೊಳೆಗೆ ಉಗ್ರರನ್ನು ಛೂ ಬಿಡುವ ಖಯಾಲಿ ಮುಂದುವರಿಸಿದೆ. ಕೊರೋನಾ ಹೆಮ್ಮಾರಿ ನಡುವೆ ಜಮ್ಮ ಮತ್ತು ಕಾಶ್ಮೀರದ ಗಡಿಯೊಳಗೆ ಪ್ರವೇಶಿಸಿದ ಪಾಕಿಸ್ತಾನ ಬೆಂಬಲಿತ ಐವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಉಗ್ರರಿಂದ ದೇಶ ರಕ್ಷಿಸುವುದರ ಜತೆಗೆ ಕೊರೋನಾ ವಿರುದ್ಧ ಹೋರಾಟಕ್ಕಿಳಿದ ಯೋಧರು
ಭಾರತದ ಗಡಿಯೊಳಕ್ಕೆ ಉಗ್ರರು ನುಸುಳಿದ್ದಾರೆ ಅನ್ನೋ ಮಾಹಿತಿ ಪಡೆದ ಭಾರತೀಯ ಸೇನೆ ವಿಶೇಷ ಯೋಧರ ಪಾರಾ ಎಸ್ಎಫ್ ತಂಡವನ್ನು ಗಡಿ ನಿಯಂತ್ರಣ ರೇಖೆಗೆ ರವಾನಿಸಿತು. ಹೆಲಿಕಾಪ್ಟರ್ ಮೂಲಕ ಯೋಧರ ತಂಡ ಬಂದಿಳಿದಿದೆ. ಬಳಿಕ ಹಿಮದ ಮೇಲಿನ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿ ಯೋಧರ ತಂಡ ಹಿಂಬಾಲಿಸಿದೆ. ಉಗ್ರರ ಹೆಜ್ಜೆ ಗುರುತು ನೀರಿನ ತೊರೆಯಲ್ಲಿ ಅಂತ್ಯವಾಯಿತು. ಈ ವೇಳೆ ಯೋಧರ ತಂಡ ಎರಡು ಗುಂಪುಗಳಾಗಿ ಉಗ್ರರು ಅಡಗಿಡ್ಡ ತಾಣವನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿದೆ. ಈ ವೇಳೆ ಪಾಕ್ ಬೆಂಬಲಿತ ಉಗ್ರರು ಗುಂಡಿನ ಕಾಳಗ ಆರಂಭಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಐವರು ಉಗ್ರರನ್ನು ಸೇನೆ ಫೀನಿಶ್ ಮಾಡಿದೆ. ಆದರೆ ಈ ಕಾಳಗದಲ್ಲಿ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದಾರೆ. ಮೂವರು ಸ್ಥಳದಲ್ಲೇ ಹುತಾತ್ಮರಾಗಿದ್ದರೆ, ಇನ್ನಬ್ಬರನ್ನು ಆಸ್ಪತ್ರೆ ಸಾಗಿಸುವ ಮದ್ಯದಲ್ಲಿ ಹುತಾತ್ಮರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಯೋಧರನ್ನು ಆರ್ಮಿ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಹೆಚ್ಚುವರಿ ಸೇನೆಯನ್ನು ನಿಯೋಜಿಸಲಾಗಿದ್ದು, ಸರ್ಚ್ ಆಪರೇಶನ್ ಮುಂದುವರಿದಿದೆ.
ಪಾಕಿಸ್ತಾನದಲ್ಲಿ ಕೊರೋನಾ ಸೋಂಕಿತರನ್ನು ಭಾರತದ ಗಡಿ ಪ್ರದೇಶಕ್ಕೆ ತಂದು ಬಿಡುತ್ತಿರುವ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಯಾಗಿತ್ತು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಹಾಗೂ ಸಿಂಧ್ ಪ್ರಾಂತ್ಯದಲ್ಲಿನ ಕೊರೋನಾ ಸೋಂಕಿತರನ್ನು ಪಾಕಿಸ್ತಾನ ಸೇನೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ರವಾನಿಸುತ್ತಿದೆ. ಇಲ್ಲಿನ ಬಲೂಚಿಸ್ತಾನ ಸೇರಿದಂತೆ ಇತರ ಪ್ರದೇಶಗಳಲ್ಲಿ ಯಾವುದೇ ಸೌಲಭ್ಯವಿಲ್ಲದ ವಾರ್ಡ್ ಸೃಷ್ಟಿಸಿ ಸೋಂಕಿತರನ್ನು ರವಾನಿಸುತ್ತಿದೆ. ಈ ಕುರಿತು ಬಲೂಚಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಭಾರತದ ಜೊತೆಗೆ ಹಂಚಿಕೊಂಡಿರುವ ಗಡಿ ಪ್ರದೇಶದಲ್ಲಿನ ಗ್ರಾಮಗಳಿಗೆ ಪಾಕಿಸ್ತಾನ ಸೇನೆ ಕೊರೋನಾ ಸೋಂಕಿತರನ್ನು ತಳ್ಳುತ್ತಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.