ದೆಹಲಿ ಚುನಾವಣೆ ಅಂದ್ರೆ ಭಾರತ-ಪಾಕ್ ಯುದ್ಧ, ಟ್ವಿಟರ್ಗೆ ಸೂಚನೆ ನೀಡಿದ ಆಯೋಗ!
ನವದೆಹಲಿಯಲ್ಲಿ ಚುನಾವಣಾ ಕಾವು/ ಬಿಜೆಪಿ ನಾಯಕನ ವಿವಾದಾತ್ಮಕ ಟ್ವೀಟ್/ ಟ್ವೀಟ್ ತೆಗೆದು ಹಾಕಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ/ ದೆಹಲಿ ಚುನಾವಣೆಯನ್ನು ಭಾರತ -ಪಾಕಿಸ್ತಾನದ ನಡುವಣ ಯುದ್ಧ ಎಂದು ಕರೆದ ಕಪಿಲ್ ಮಿಶ್ರಾ
ನವದೆಹಲಿ[ಜ. 24] ರಾಷ್ಟ್ರ ರಾಜಧಾನಿ ದೆಹಲಿಗೆ ಚುನಾವಣೆ ಎದುರಾಗಿರುವ ಹೊತ್ತಿನಲ್ಲಿ ಬಿಜೆಪಿ ನಾಯಕರೊಬ್ಬರ ಟ್ವೀಟ್ ವಿವಾದದ ಕಿಡಿ ಹೊತ್ತಿಸಿದೆ. ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ಟ್ವೀಟ್ ದೊಡ್ಡ ಸುದ್ದಿ ಮಾಡುತ್ತಿದೆ.
ಫೆಬ್ರವರಿ 8 ರಂದು ನಡೆಯಲಿರುವ ದೆಹಲಿ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಣ ಸ್ಪರ್ಧೆ ಎಂದು ಕರೆದಿರುವುದಕ್ಕೆ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.
ಚುನಾವಣಾ ಆಯೋಗ ಮಿಶ್ರಾ ಅವರಿಗೆ ಟ್ವೀಟ್ ಕುರಿತಂತೆ ಶೋಕಾಸ್ ನೋಟಿಸ್ ಸಹ ನೀಡಿದೆ. ಅಲ್ಲದೇ ದೆಹಲಿ ಚುನಾವಣಾ ಆಯೋಗದ ಆಯುಕ್ತರು ಈ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಆದರೆ ಶೋಕಾಸ್ ನೋಟಿಸ್ ಗೆ ಉತ್ತರ ನೀಡಡಿರುವ ಶರ್ಮಾ ನನ್ನ ಕಮೆಂಟ್ ಅನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ ಎಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ಅವರ ವಿವಾದಾತ್ಮಕ ಟ್ವೀಟ್ ಅನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗ ಟ್ವಿಟರ್ ಗೂ ಸೂಚಿಸಿದೆ.ದೆಹಲಿ ಮುಖ್ಯ ಚುನಾವಣಾಧಿಕಾರಿಗಳು ಮಾಡೆಲ್ ಟೌನ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಪಿಲ್ ಮಿಶ್ರಾಗೆ ಶೋಕಾಸ್ ನೋಟಿಸ್ ನೀಡಿದೆ.
ದೆಹಲಿಯಲ್ಲಿ ಚುನಾವಣಾ ಕಾವು ಏರುತ್ತಿದೆ, ದೆಹಲಿ ಸಿಎಂ ಕೇಜ್ರಿವಾಲ್ ಗಂಟೆಗಟ್ಟಲೇ ಕಾದು ನಾಮಪತ್ರ ಸಲ್ಲಿಕೆ ಮಾಡಿದ್ದರು. ದೆಹಲಿಯ ಮಾಡೆಲ್ ಟೌನ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವ ಮಿಶ್ರಾ ಈ ಹಿಂದೆ ಅರವಿಂದ್ ಕೇಜ್ರಿವಾಲ್ ಆಪ್ತರಾಗಿದ್ದರು. ಕೇಜ್ರಿವಾಲ್ ಅವರ ವಿರುದ್ಧ ಬಹಿರಂಗವಾಗಿ ಭ್ರಷ್ಟಚಾರ ಆರೋಪ ಮಾಡುವ ಮೂಲಕ ಎಎಪಿಯಿಂದ ಹೊರ ಹೋಗಿದ್ದರು. ಮಿಶ್ರಾ ಅವರ ನಾಮಪತ್ರವನ್ನು ರದ್ದು ಮಾಡುವಂತೆ ಎಎಪಿ ಚುನಾವಣಾ ಆಯೋಗಕ್ಕೆ ಕೋರಿದೆ.