ವಕೀಲರಿಗೆ ಕೈಮುಗಿದು ಕ್ಷಮೆ ಕೇಳಿದ ಸುಪ್ರೀಂ ನ್ಯಾಯಾಧೀಶ!
ವಕೀಲರಿಗೆ ಕೈಮುಗಿದು ಕ್ಷಮೆ ಕೇಳಿದ ಸುಪ್ರೀಂ ನ್ಯಾಯಾಧೀಶ| ನ್ಯಾಯಾಂಗ ನಿಂದನೆ ಬೆದರಿಕೆಯೊಡ್ಡಿದ್ದಕ್ಕೆ ವಕೀಲರ ಆಕ್ಷೇಪ
ನವದೆಹಲಿ[ಡಿ.06]: ಪ್ರಕರಣವೊಂದರ ವಿಚಾರಣೆ ವೇಳೆ ವಕೀಲರ ವಿರುದ್ಧವೇ ನ್ಯಾಯಾಂಗ ನಿಂದನೆ ಕೇಸಿನ ಎಚ್ಚರಿಕೆ ನೀಡಿದ್ದ ಸುಪ್ರೀಂಕೋರ್ಟ್ನ ಹಿರಿಯ ನ್ಯಾಯಮೂರ್ತಿ ಅರುಣ್ ಮಿಶ್ರಾ, ತಮ್ಮ ನಡವಳಿಕೆ ಕುರಿತು ವಕೀಲರ ಮುಂದೆ ಕೈಮುಗಿದು ಕ್ಷಮೆ ಯಾಚಿಸಿದ ಅಪರೂಪದ ಘಟನೆ ಗುರುವಾರ ನಡೆದಿದೆ.
ಜಮೀನು ಪರಭಾರೆಯ ಪ್ರಕರಣವೊಂದನ್ನು ನ್ಯಾಯಮೂರ್ತಿ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ. ಈ ಕುರಿತು ಮಂಗಳವಾರ ವಿಚಾರಣೆ ವೇಳೆ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರಿಗೆ ನ್ಯಾ. ಅರುಣ್ ಮಿಶ್ರಾ ಅವರು ನ್ಯಾಯಾಂಗ ನಿಂದನೆಯ ಎಚ್ಚರಿಕೆ ನೀಡಿದ್ದರು.
ಗೋಪಾಲ್ ಈ ವಿಚಾರವನ್ನು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಹಾಗೂ ಹಿರಿಯ ವಕೀಲರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ಮುಕುಲ್ ರೋಹಟಗಿ, ಅಭಿಷೇಕ್ ಮನುಸಿಂಘ್ವಿ, ಸುಪ್ರೀಂ ಬಾರ್ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಖನ್ನಾ ಅವರು, ಈ ವಿಚಾರವನ್ನು ಮಿಶ್ರಾ ಹಾಗೂ ನ್ಯಾ. ಎಂ.ಆರ್.ಶಾ ಅವರ ಗಮನಕ್ಕೆ ತಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ತಮಗೆ ಬಾರ್ ಅಸೋಸಿಯೇಷನ್ ಮೇಲೆ ಅಪಾರ ಗೌರವವಿದೆ. ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಕೈಮುಗಿದು ಕ್ಷಮೆ ಯಾಚಿಸುವುದಾಗಿ ತಿಳಿಸಿದ್ದಾರೆ.