Asianet Suvarna News Asianet Suvarna News

ಗಾಯಾಳುವನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ರವಾನೆ; ಆಂಬುಲೆನ್ಸ್‌ ನಂಬಿಕೊಂಡ್ರೆ ಸಾವೇ ಗತಿ

Accident Victim taken to Hospital in JCB: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ಸೇರಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್‌ ಬರದ ಹಿನ್ನೆಲೆ ಅನಿವಾರ್ಯವಾಗಿ ಜೆಸಿಬಿಯಲ್ಲಿ ಕರೆದೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ. 

accident victim taken to hospital in jcb machine in madhya pradesh
Author
First Published Sep 14, 2022, 11:15 AM IST

ನವದೆಹಲಿ: ಮಧ್ಯಪ್ರದೇಶದ ಕಾಂತಿ ಜಿಲ್ಲೆಯಲ್ಲಿ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ಕರೆದೊಯ್ದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ವೈರಲ್‌ ಆಗಿದೆ. ಆಂಬುಲೆನ್ಸ್‌ ನಂಬಿಕೊಂಡರೆ ಸಾವೇ ಗತಿ ಎಂದು ನೆಟ್ಟಿಗರು ಸರ್ಕಾರದ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಜೆಸಿಬಿ ಮಾಲೀಕ ಅಪಘಾತ ಸಂತ್ರಸ್ಥನನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಬೇರೆ ಊರಿನಿಂದ ಆಂಬುಲೆನ್ಸ್‌ ಬರಬೇಕಾಗಿದ್ದರಿಂದ ಹೆಚ್ಚು ಸಮಯ ಹಿಡಿಯುತ್ತದೆ ಎಂಬ ಕಾರಣಕ್ಕೆ ಜೆಸಿಬಿಯಲ್ಲೇ ಕರೆದೊಯ್ಯುವ ನಿರ್ಧಾರ ಮಾಡಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಆರೋಗ್ಯಾಧಿಕಾರಿ ಪ್ರದೀಪ್‌ ಮುಧಿಯಾ, "ಕಾಂತಿ ಜಿಲ್ಲೆಯ ಬರಿ ಎಂಬಲ್ಲಿ ಬೈಕ್‌ ಅಪಘಾತವಾಗಿದೆ. ನಂತರ 108 ಹೆಕ್ಪ್‌ಲೈನ್‌ಗೆ ಸ್ಥಳೀಯರು ಕರೆ ಮಾಡಿದ್ದಾರೆ. ಆ ಸಮಯದಲ್ಲಿ ಆಂಬುಲೆನ್ಸ್‌ ಆ ಸ್ಥಳದಲ್ಲಿ ಆಂಬುಲೆನ್ಸ್‌ ಇರಲಿಲ್ಲ. ಆಂಬುಲೆನ್ಸ್‌ ಸೇವೆ ನೀಡುತ್ತಿರುವ ಏಜೆನ್ಸ್‌ ಕೂಡಾ ಬದಲಾಗಿದೆ. ಬೇರೆ ನಗರದಿಂದ ಸ್ಥಳಕ್ಕೆ ಆಂಬುಲೆಮನ್ಸ್‌ ಕಳಿಸಲಾಗಿತ್ತಾದರೂ ಸ್ಥಳ ತಲುಪುವುದು ವಿಳಂಬವಾಗಿದೆ. ಹೆಚ್ಚುವರಿ ಆಂಬುಲೆನ್ಸ್‌ಗಾಗಿ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ," ಎಂದು ಹೇಳಿದ್ಧಾರೆ. 

ಇದನ್ನೂ ಓದಿ: Marta Temido: ಭಾರತ ಮೂಲದ ಗರ್ಭಿಣಿ ಮೃತಪಟ್ಟಿದ್ದಕ್ಕೆ ಪೋರ್ಚುಗಲ್ ಆರೋಗ್ಯ ಸಚಿವೆ ರಾಜೀನಾಮೆ

ಸ್ಥಳೀಯ ಜನಪದ್‌ ಪಂಚಾಯತ್‌ನ ಸದಸ್ಯ ಮತ್ತು ಜೆಸಿಬಿಯ ಮಾಲೀಕ ಪುಷ್ಪೇಂದ್ರ ವಿಶ್ವಕರ್ಮ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ಜೊತೆ ಮಾತನಾಡಿದ್ದು, "ಅಪಘಾತಕ್ಕೊಳಗಾದ ವ್ಯಕ್ತಿಯ ಕಾಲು ಮುರಿದಿತ್ತು. ಆಂಬುಲೆನ್ಸ್‌ ಸೇವೆ ಲಭ್ಯವಾಗಲಿಲ್ಲ. ಮೂರ್ನಾಲ್ಕು ಆಟೋ ಚಾಲಕರು ಸಹಾಯ ಮಾಡಲು ಹಿಂದೇಟು ಹಾಕಿದರು. ಸರಿಯಾದ ಸಮಯಕ್ಕೆ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ನನ್ನ ಜೆಸಿಬಿಯಲ್ಲದೇ ಬೇರಾವ ಸವಲತ್ತೂ ಇರಲಿಲ್ಲ. ಅದಕ್ಕಾಗಿಯೇ ಜೆಸಿಬಿಯಲ್ಲಿ ಮಲಗಿಸಿಕೊಂಡು ಕರೆದೊಯ್ದೆ," ಎಂದು ಹೇಳಿದ್ದಾರೆ. ಪುಷ್ಪೇಂದ್ರ ವಿಶ್ವಕರ್ಮ ಅವರ ಅಂಗಡಿಯ ಮುಂದೆ ಈ ಅಪಘಾತ ಸಂಭವಿಸಿದೆ. 

ಈ ರೀತಿಯ ಘಟನೆ ನಡೆಯುತ್ತಿರುವುದು ಇದು ಮೊದಲೇನಲ್ಲ. ದೇಶದ ಹಲವು ಕಡೆ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೂ ಆರೋಗ್ಯ ಇಲಾಖೆಗಳು ತಪ್ಪನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವುದಿಲ್ಲ. ಕಳೆದ ತಿಂಗಳು ವೈರಲ್‌ ಆಗಿದ್ದ ವಿಡಿಯೋ ಒಂದರಲ್ಲಿ ಗರ್ಭಿಣಿ ಮಹಿಳೆಯನ್ನು ಜೆಸಿಬಿ ಮೂಲಕ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ಕಂಡು ಬಂದಿತ್ತು. ಇದೇ ಮಧ್ಯಪ್ರದೇಶದ ನೀಮಚ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಭಾರೀ ಮಳೆಯಿಂದ ಪ್ರವಾಹ ಸೃಷ್ಟಿಯಾದ ಹಿನ್ನೆಲೆ ಆಂಬುಲೆನ್ಸ್‌ ಸ್ಥಳಕ್ಕೆ ಬರಲು ತಡವಾಗಿತ್ತು. 

ಇದನ್ನೂ ಓದಿ: ಸರ್ಕಾರದ ವೈಫಲ್ಯಕ್ಕೆ ಮತ್ತೊಂದು ಬಲಿ: ಚರಂಡಿಗೆ ಬಿದ್ದು ಸಾವನ್ನಪ್ಪಿದ ಯುವತಿ!

ಗರ್ಭಿಣಿ ಮೃತಪಟ್ಟಿದ್ದಕ್ಕೆ ರಾಜೀನಾಮೆ ನೀಡಿದ ಪೂರ್ಚುಗಲ್‌ ಸಚಿವಿಂದ ಕಲಿಯಬೇಕು:
ಭಾರತ ಮೂಲದ ಗರ್ಭಿಣಿ ಮೃತಪಟ್ಟಿದ್ದಕ್ಕೆ ಪೂರ್ಚುಗಲ್‌ನ ಆರೋಗ್ಯ ಸಚಿವೆ ಡಾ ಮಾರ್ತಾ ಟೆಮಿಡೋ (Portugal Health Minister Dr Martha Temido) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಗರ್ಭಿಣಿ ಪ್ರವಾಸಿಯೊಬ್ಬರಿಗೆ ಸಂಪೂರ್ಣ ಹೆರಿಗೆ ವಾರ್ಡ್‌ನಲ್ಲಿ ಅವಕಾಶ ನೀಡದ ಕಾರಣದಿಂದ ಮಹಿಳೆ ಮೃತಪಟ್ಟಿದ್ದರು. ಈ ಪ್ರಕರಣದ ವರದಿಗಳು ಹೊರಬಂದ ಕೆಲವೇ ಗಂಟೆಗಳಲ್ಲಿ ಘಟನೆಯ ಜವಾಬ್ದಾರಿ ಹೊತ್ತು ಮಾರ್ತಾ ರಾಜೀನಾಮೆ ನೀಡಿದ್ದರು. ಕೇವಲ ಒಂದು ಘಟನೆಗೆ ದೇಶದ ಆರೋಗ್ಯ ಸಚಿವರೇ ರಾಜೀನಾಮೆ ನೀಡಿರುವುದು ಅನುಕರಣೀಯ. ಆದರೆ ಭಾರತದಲ್ಲಿ ಮಾತ್ರ ಮನುಷ್ಯರ ಸಾವಿಗೆ ಕವಡೆ ಕಿಮ್ಮತ್ತೂ ಇಲ್ಲ. ನಿಮಿಷವೊಂದಕ್ಕೆ ಹಲವಾರು ಜನ ಸರ್ಕಾರದ ವೈಫಲ್ಯದಿಂದ ಸಾವನ್ನಪ್ಪುತ್ತಿದ್ದರೂ ಸರ್ಕಾರಗಳು ಹೊಣೆ ಹೊತ್ತುಕೊಳ್ಳುವುದಿರಲಿ ತಪ್ಪನ್ನು ತಿದ್ದಿಕೊಳ್ಳುತ್ತಲೂ ಇಲ್ಲ. 

Follow Us:
Download App:
  • android
  • ios