Asianet Suvarna News Asianet Suvarna News

Uttara Kannada: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸೂರ್ವೆಯ ಕರಬಂಧಿ ಚಳುವಳಿ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕು ತನ್ನದೇ ಕೊಡುಗೆ ನೀಡಿದೆ. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದ ಅಂಕೋಲಾ, ಹಲವಾರು ಹೋರಾಟ, ಚಳುವಳಿಗಳಿಗೆ ಸಾಕ್ಷಿಯಾಗಿತ್ತು.

Independence Day Special On Karwar Slat Satyagraha gvd
Author
Bangalore, First Published Aug 13, 2022, 11:31 PM IST

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಆ.13): ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕು ತನ್ನದೇ ಕೊಡುಗೆ ನೀಡಿದೆ. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದ ಅಂಕೋಲಾ, ಹಲವಾರು ಹೋರಾಟ, ಚಳುವಳಿಗಳಿಗೆ ಸಾಕ್ಷಿಯಾಗಿತ್ತು. ಈ ಹೋರಾಟಗಳ ಪೈಕಿ ಇಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಹಾಗೂ ಕರಬಂಧಿ ಚಳುವಳಿ ಪ್ರಮುಖವಾಗಿದ್ದು, ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರು, ಸ್ಮಾರಕಗಳ ಮೂಲಕ ಇತಿಹಾಸದ ಶೌರ್ಯಗಾಥೆಗಳು ನೆನಪುಗಳ ಪುಟಗಳಿಂದ ಇಂದಿಗೂ ಕೇಳಿ ಬರುತ್ತಿದೆ. ಈ ಕುರಿತ ಡಿಟೈಲ್ಡ್ ಮಾಹಿತಿ ಇಲ್ಲಿದೆ ನೋಡಿ.

ಬ್ರಿಟಿಷರು ಭಾರತಕ್ಕೆ ಪ್ರವೇಶ ಮಾಡಿದ ಬಳಿಕ ದೇಶ ತತ್ತರಿಸಿದಲ್ಲದೇ, ಇಂಗ್ಲೀಷರು ಭಾರತೀಯರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ದರು. ಇವರ ದಾಸ್ಯದ ಸಂಕೋಲೆಯಿಂದ ಮುಕ್ತವಾಗಬೇಕು, ಭಾರತೀಯರೆಲ್ಲರೂ ಸ್ವತಂತ್ರವಾಗಿ ಜೀವಿಸುವಂತಾಗಬೇಕೆಂದು ಹಾತೊರೆಯುತ್ತಿದ್ದ ಹಲವು ಪ್ರಮುಖರ ನಡುವೆ ಕಾಂಗ್ರೆಸ್ಸಿನ ಮುಖ್ಯ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದವರು ಮಹಾತ್ಮ ಗಾಂಧೀಜಿ. ಅವರು ರೂಪಿಸಿದ ಅಸಹಕಾರ ನೀತಿಗೆ ಕಾಂಗ್ರೆಸ್‌ನ ವಿಶೇಷ ಅಧಿವೇಶನ ಅನುಮೋದನೆ ನೀಡಿತ್ತು. ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ಆರಂಭಿಸುವ ನಿರ್ಣಯದ ಕಹಳೆ ಕೊಲ್ಕತ್ತಾದಲ್ಲಿ ಮೊಳಗಿತ್ತಾದರೂ, ಅದಾಗಲೇ ಗಾಂಧೀಜಿಯವರ ನೀತಿಗೆ ಅಂಕೋಲಾದ ಜನರು ಮಾರು ಹೋಗಿದ್ದರು. 

Uttara Kannada; ಸಾವಿರಾರು ವಿದ್ಯಾರ್ಥಿಗಳಿಂದ ತ್ರಿವರ್ಣ ಧ್ವಜ ಅಭಿಯಾನ

ಅಲ್ಲದೇ, ಉಪ್ಪಿನ ತೆರಿಗೆಯ ವಿರುದ್ಧ ನಾಗರಿಕರು ಅಸಹಕಾರ ಚಳುವಳಿಗೆ ಸಾಕ್ಷಿಯಾದರು. ಗಾಂಧಿಯವರು ತಮ್ಮ ಸಬರಮತಿ ಆಶ್ರಮದಿಂದ ಸ್ವಯಂ ಸೇವಕರ ಬ್ಯಾಂಡ್‌ನೊಂದಿಗೆ ಬರಿಗಾಲಿನಲ್ಲಿ ಮೆರವಣಿಗೆ ನಡೆಸಿ, ಸೂರತ್ ಜಿಲ್ಲೆಯ ತಪತಿ ನದಿಯ ದಕ್ಷಿಣಕ್ಕೆ ಅಹಮದಾಬಾದ್‌ನಿಂದ ದಂಡಿ ಕರಾವಳಿಯಲ್ಲಿ ಉಪ್ಪು ಉತ್ಪಾದಿಸಿ, ಬ್ರಿಟಿಷರಿಗೆ ಸೆಡ್ಡು ಹೊಡೆಯಲು ಮುಂದಾದರು. ಗಾಂಧೀಜಿಯವರ ಅಸಹಕಾರ ಚಳುವಳಿಯ ಭಾಗವಾದ ಈ ಉಪ್ಪಿನ ಸತ್ಯಾಗ್ರಹವನ್ನು ಕರ್ನಾಟಕದಲ್ಲಿ ನಡೆಸಲು ಅವರ ಅನುಯಾಯಿಗಳು ಕರಾವಳಿ ತಾಲೂಕಾದ ಅಂಕೋಲಾವನ್ನು ಗುರುತಿಸಿದ್ದರು. 

1930ರ ಏಪ್ರಿಲ್‌ನಲ್ಲಿ ಅಂಕೋಲಾದ ಪೂಜಗೇರಿ ಗ್ರಾಮಕ್ಕೆ ಉಪ್ಪಿನ ಸತ್ಯಾಗ್ರಹದ ಮೆರವಣಿಗೆ ಹೊರಟಿತು. ಅಂಕೋಲಾ ಪಟ್ಟಣದಿಂದ 3 ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ 3,000ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಸ್ಥಳೀಯ ಮುಖಂಡ ಭಾಸ್ಗೋಡ ರಾಮ ನಾಯಕರು ನಾಡವರ ಸಮುದಾಯದ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಮಣ್ಣಿನ ಮಡಕೆಗಳಲ್ಲಿ ಸಮುದ್ರದ ನೀರನ್ನು ಸಂಗ್ರಹಿಸಿ, ತಾಲೂಕು ಕಚೇರಿಯ ಮುಂಭಾಗದ ಬಯಲು ಜಾಗದಲ್ಲಿ ಉಪ್ಪನ್ನು ಸಿದ್ಧಪಡಿಸಿದರು. ಅದನ್ನು ಹರಾಜು ಹಾಕಿದ ಸಂದರ್ಭ ರೇವು ಹೊನ್ನಪ್ಪ ನಾಯಕ್ ಎನ್ನುವವರು ಖರೀದಿಸಿದ್ದರು. 

ಈ ಸತ್ಯಾಗ್ರಹದಿಂದ ಹಲವು ಭಾರತೀಯ ಹೋರಾಟಗಾರರು ಬ್ರಿಟೀಷರಿಂದ ಬಂಧಿಸಲ್ಪಟ್ಟಿದ್ದರು. ಅಂಕೋಲಾ ಉಪ್ಪಿನ ಸತ್ಯಾಗ್ರಹಕ್ಕೆ ಮಾತ್ರವಲ್ಲದೇ, ಜಂಗಲ್ ಸತ್ಯಾಗ್ರಹ, ಹುಲುಬನ್ನಿ ಸತ್ಯಾಗ್ರಹಕ್ಕೂ ಸಾಕ್ಷಿಯಾಗಿದೆ. ಇಲ್ಲಿ ನಡೆದ ಕರ ನಿರಾಕರಣೆ ಚಳುವಳಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಪರಿಣಮಿಸಿತ್ತು. ಅಂಕೋಲಾದ ಸೂರ್ವೆ ಗ್ರಾಮ ಈ ಕರ ನಿರಾಕರಣೆಯ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಇಂದಿಗೂ ಈ ಗ್ರಾಮವನ್ನು ಕರಬಂಧಿಯ ನಾಡೆಂದೇ ಗುರುತಿಸಲಾಗುತ್ತದೆ. ಸರ್ಕಾರಕ್ಕೆ ತೆರಿಗೆ ಪಾವತಿ ನಿರಾಕರಿಸಲು ಸೂರ್ವೆಯ 101 ವರ್ಷ ಪ್ರಾಯದ ವೆಂಕಣ್ಣ ನಾಯಕರ ಮನೆಯ ಪಕ್ಕದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. 

ಆದರೆ, ಈ ಚಳುವಳಿಯಿಂದಾಗಿ ಮನೆಮಠಗಳನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಕೂಡಾ ಎದುರಾಗಿತ್ತು. ಬ್ರಿಟಿಷರು ತೀವ್ರವಾಗಿ ಹೋರಾಟಗಾರರನ್ನು ಧಮನಿಸುವ ಕ್ರಮಕ್ಕೆ ಮುಂದಾಗಬಹುದು ಎಂಬ ಎಚ್ಚರಿಕೆಯ ಮಾತುಗಳು ಕೂಡಾ ಸಭೆಯಲ್ಲಿ ಚರ್ಚೆಯಾಗಿದ್ದವು. ಇದ್ಯಾವುದಕ್ಕೂ ಹಿಂಜರಿಯದೆ, ಸ್ವಾತಂತ್ರ್ಯಂತ್ರ್ಯವೊಂದೇ ಅಂತಿಮ ಎಂದು ನಿರ್ಧರಿಸಿದ್ದ ಸೂರ್ವೆಯ ಕುಟುಂಬಗಳು, ಬ್ರಿಟೀಷರ ಸರ್ಕಾರಕ್ಕೆ ತೆರಿಗೆ ಪಾವತಿಯನ್ನು ನಿಲ್ಲಿಸಿಬಿಟ್ಟಿದ್ದವು. ಅಲ್ಲದೇ, ಅಗಸೂರು, ಅವರ್ಸಾ, ಬಾಸ್ಗೋಡು, ಬೇಲಿಕೇರಿ, ಭಾವಿಕೇರಿ, ಬೋಳೆ, ಗುಂಡಬಾಳ, ಹಿಚ್ಕಡ್, ಹೊಸಗದ್ದೆ, ಹಿಲ್ಲೂರು, ಜುಗ, ಕಣಗಿಲ್, ಕುದ್ರಗಿ, ಮೊಗಟಾ, ಸಗಡಗೇರಿ, ಶೆಟಗೇರಿ, ಶಿರಗುಂಜಿ, ವಂದಿಗೆ, ವಾಸರೆ, ಉಳುವರೆ ಇನ್ನೂ ಮುಂತಾದ ಗ್ರಾಮಗಳ ಗ್ರಾಮಸ್ಥರು ಈ ಕರ ನಿರಾಕರಣೆ ಅಭಿಯಾನದಲ್ಲಿ ಮನಃಪೂರ್ವಕವಾಗಿ ಪಾಲ್ಗೊಂಡಿದ್ದರು. 

Paresh Mesta Murder Case: ಪ್ರಕರಣದ ಆರೋಪಿಗೆ ವಕ್ಫ್ ಬೋರ್ಡ್ ಸ್ಥಾನ!

ಇದಕ್ಕಾಗಿ ಅನೇಕರನ್ನು ಬ್ರಿಟಿಷರು ಜೈಲಿಗಟ್ಟಿದರು, ಮನೆ- ಜಮೀನುಗಳನ್ನು ಜಪ್ತಿ ಮಾಡಿಕೊಂಡರು. ತಾವು ಕೂಡ ನಾಸಿಕ್‌ನ ಸೆಂಟ್ರಲ್ ಜೈಲ್‌ನಲ್ಲಿ ಖೈದಿಯಾಗಿ ಜೈಲು ಅನುಭವಿಸಬೇಕಾಯಿತು ಎಂದು ನೆನೆಯುತ್ತಾರೆ 101 ವರ್ಷದ‌ ವೆಂಕಣ್ಣ ನಾಯಕರು. ಅಂದಿನ ಹೋರಾಟಗಳನ್ನು, ಬ್ರಿಟಿಷರ ದಬ್ಬಾಳಿಕೆಗಳನ್ನು ಇಂದಿಗೂ ನೆನಪಿಸಿಕೊಳ್ಳುವ ವೆಂಕಣ್ಣ ನಾಯಕರು, ಗಾಂಧೀಜಿಯವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಇಂದಿಗೂ ಬೇಸರಿಸುತ್ತಾರೆ. ವೆಂಕಣ್ಣ ನಾಯಕರಂತೆ ಸೂರ್ವೆಯ ಅನೇಕ ಕುಟುಂಬದ ಯುವಕರು ಅಂದು ಅಸಹಕಾರ, ಕರಬಂಧಿ ಚಳುವಳಿಯಲ್ಲಿ ಪಾಲ್ಗೊಂಡು ಜೈಲು ಸೇರಿದ್ದರು. 

ಅಂದು ನಡೆಸಲಾಗಿದ್ದ ಈ ಕರ ನಿರಾಕರಣೆ ಚಳುವಳಿಯಿಂದಾಗಿ 500 ಎಕರೆ ಜಮೀನು, 54 ಸಾವಿರ ರೂಪಾಯಿಯಷ್ಟು ಬೆಲೆ ಬಾಳುವ ಮನೆಗಳು, 55 ಸಾವಿರ ರೂಪಾಯಿಯಷ್ಟು ಮೌಲ್ಯದ ಚಿನ್ನಾಭರಣ, ಇತರ ಗೃಹೋಪಯೋಗಿ ವಸ್ತುಗಳನ್ನು ಅಂಕೋಲಿಗರು ಕಳೆದುಕೊಂಡಿದ್ದರು. ಒಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಅಂಕೋಲಾ ತನ್ನದೇ ಕೊಡುಗೆ ನೀಡಿದ್ದು, ಇಲ್ಲಿನ ಜನರ ಹೋರಾಟ, ತ್ಯಾಗ ಇಂದಿಗೂ ಇತಿಹಾಸದ ಪುಟದಲ್ಲಿ ಅಚ್ಚೊತ್ತಿದೆ.

Follow Us:
Download App:
  • android
  • ios