Asianet Suvarna News Asianet Suvarna News

ಒಂದಲ್ಲ..ಎರಡಲ್ಲ, ವ್ಯಕ್ತಿಯ ದೇಹದಿಂದ ಬರೋಬ್ಬರಿ 206 ಕಿಡ್ನಿ ಸ್ಟೋನ್‌ ಹೊರತೆಗೆದ ವೈದ್ಯರು !

ಹೈದರಾಬಾದ್‌ನಲ್ಲಿ (Hyderabad) 56 ವರ್ಷದ ವ್ಯಕ್ತಿಯ ದೇಹದಿಂದ 206 ಕಿಡ್ನಿ ಸ್ಟೋನ್ (Kidney stone) ತೆಗೆಯಲಾಗಿದೆ. ರೋಗಿಯು ಸ್ವಲ್ಪ ಸಮಯದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ವೈದ್ಯರನ್ನು (Doctor) ಸಂಪರ್ಕಿಸಿದ್ದರು. ಹಾಗಿದ್ರೆ ಮೂತ್ರಪಿಂಡದ ಕಲ್ಲಿನ ಲಕ್ಷಣಗಳು ಯಾವುವು ಮತ್ತು ಅದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ತಿಳಿಯೋಣ.

Telangana Doctors Remove 206 Kidney Stones From 56 Year Old Man Vin
Author
Bengaluru, First Published May 20, 2022, 2:46 PM IST

ಕಿಡ್ನಿ ಸ್ಟೋನ್ (Kidney stone) ಯಾರಿಗಾದರೂ ಬರಬಹುದು. ಆಹಾರ ಪದ್ಧತಿಯಲ್ಲಿ ಎಚ್ಚರಿಕೆ ವಹಿಸದಿದ್ದರೆ ಈ ಆರೋಗ್ಯ ಸಮಸ್ಯೆ (Health problem) ಎದುರಿಸಬೇಕಾದೀತು. ಇತ್ತೀಚೆಗೆ, ಹೈದರಾಬಾದ್‌ನ ವೈದ್ಯರ (Doctors) ತಂಡವು 56 ವರ್ಷದ ರೋಗಿಯೊಬ್ಬರಿಗೆ (Patient) ಶಸ್ತ್ರಚಿಕಿತ್ಸೆ ನಡೆಸಿ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿತು. ಈ ಶಸ್ತ್ರಚಿಕಿತ್ಸೆ ಸುಮಾರು ಒಂದು ಗಂಟೆಗಳ ಕಾಲ ನಡೆಯಿತು. ಹೈದರಾಬಾದ್‌ನ 'ಅವೇರ್ ಗ್ಲೆನೀಗಲ್ ಗ್ಲೋಬಲ್ ಆಸ್ಪತ್ರೆ' ವೈದ್ಯರು ಈ ಆಪರೇಷನ್ ಮಾಡಿದ್ದಾರೆ. 

ನಲ್ಗೊಂಡ ನಿವಾಸಿ ವೀರಮಲ್ಲ ರಾಮಲಕ್ಷ್ಮಯ್ಯ ಎಂಬುವವರ ಕಿಡ್ನಿಯಲ್ಲಿದ್ದ 206 ಕಲ್ಲುಗಳನ್ನು ಕೀಹೋಲ್ ಸರ್ಜರಿ ಅಂದರೆ ಲೇಸರ್ ಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ವೀರಮಲ್ಲನಿಗೆ ಬಹಳ ದಿನಗಳಿಂದ ಹೊಟ್ಟೆನೋವು (Stomach pain) ಇತ್ತು. ನೋವು ಬಂದಾಗ ಸ್ಥಳೀಯ ವೈದ್ಯರ ಸಲಹೆ ಪಡೆದು ಔಷಧಿ (Medicine) ಸೇವಿಸುತ್ತಿದ್ದರು.ಕೆಲವು ಕಾಲ ನೋವು ವಾಸಿಯಾಗಿ ಮತ್ತೆ ಶುರುವಾಯಿತು. ಕ್ರಮೇಣ ಅವರ ಸ್ಥಿತಿ ಹದಗೆಡತೊಡಗಿತು. ಕೆಲಸ ಮಾಡಲು ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ಅವರು ಶಸ್ತ್ರಚಿಕಿತ್ಸೆಗೆ (Operation) ಒಳಗಾಗಿದ್ದರು.

Kidney Problem: ಕಿಡ್ನಿ ಸಮಸ್ಯೆ ಇರೋರಿಗೆ ಬಿಸಿ ನೀರು ಬೆಸ್ಟ್ ಮನೆ ಮದ್ದು

ಹೈದರಾಬಾದ್‌ನ ವೈದ್ಯರು ಒಂದು ಗಂಟೆಯ ಕೀಹೋಲ್ ಶಸ್ತ್ರಚಿಕಿತ್ಸೆಯ ನಂತರ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿದ್ದಾರೆ. ನಲ್ಗೊಂಡ ನಿವಾಸಿಯಾಗಿರುವ ರೋಗಿಯು ಆರು ತಿಂಗಳಿನಿಂದ ಎಡ ಸೊಂಟದಲ್ಲಿ ತೀವ್ರವಾದ ನೋವಿನಿಂದ ಬಳಲುತ್ತಿದ್ದರು, ಈ ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಇದು ಮತ್ತಷ್ಟು ಉಲ್ಬಣಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೇಸಿಗೆ (Summer)ಯಲ್ಲಿ ಹೆಚ್ಚಿನ ತಾಪಮಾನವು ನಿರ್ಜಲೀಕರಣಕ್ಕೆ (Dehydration) ಕಾರಣವಾಗಬಹುದು ಮತ್ತು ಜನರಲ್ಲಿ ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾಗಬಹುದು ಎಂದು ವೈದ್ಯರು ಗಮನಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ, ಹೈಡ್ರೇಟೆಡ್ ಆಗಿರಲು ಜನರು ಹೆಚ್ಚು ನೀರು (Water) ಮತ್ತು ತೆಂಗಿನ ನೀರನ್ನು ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಜನರು ಬಿಸಿಲಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸುವುದು ಅಥವಾ ಕಡಿಮೆ ಮಾಡುವುದು ಮುಖ್ಯವಾಗಿದೆ ಮತ್ತು ನಿರ್ಜಲೀಕರಣವನ್ನು ಮತ್ತಷ್ಟು ಹೆಚ್ಚಿಸುವ ಸೋಡಾ ಪಾನೀಯಗಳನ್ನು ಸೇವಿಸಬೇಡಿ ಎಂದು ಅವರು ಹೇಳಿದರು.

ಬಿಯರ್ ಕುಡಿಯೋದ್ರಿಂದ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಕಡಿಮೆಯಾಗುತ್ತಾ ?

ಮೂತ್ರಪಿಂಡದಲ್ಲಿ ಕಲ್ಲು ಹೇಗೆ ರೂಪುಗೊಳ್ಳುತ್ತದೆ ?
ಮೂತ್ರಪಿಂಡದಲ್ಲಿ ಕಲ್ಲಿನ ರಚನೆಗೆ ಕಾರಣವೇನು ? ಎಂಬುದಕ್ಕೆ ವೈದ್ಯರು ಉತ್ತರ ನೀಡುತ್ತಾರೆ. ದೇಹದಲ್ಲಿ ನೀರಿನ ಕೊರತೆಯಿಂದಾಗಿ, ಕಲ್ಲುಗಳು ರೂಪುಗೊಳ್ಳುತ್ತವೆ. ವಾಸ್ತವವಾಗಿ, ಮೂತ್ರದ ಅಂಶವಾಗಿರುವ ಯೂರಿಕ್ ಆಮ್ಲವನ್ನು ದುರ್ಬಲಗೊಳಿಸಲು ಸಾಕಷ್ಟು ನೀರು ಬೇಕಾಗುತ್ತದೆ. ಇಲ್ಲದಿದ್ದರೆ, ಮೂತ್ರವು ಹೆಚ್ಚು ಆಮ್ಲೀಯವಾಗುತ್ತದೆ. ಮೂತ್ರಪಿಂಡದ ಕಲ್ಲುಗಳ ರಚನೆಗೆ ಇದು ಮುಖ್ಯ ಕಾರಣವಾಗಿದೆ.

ಇದಲ್ಲದೆ, ವಿಟಮಿನ್ ಡಿ ಅಥವಾ ಕ್ಯಾಲ್ಸಿಯಂ ಅನ್ನು ದೀರ್ಘಕಾಲದವರೆಗೆ ಸೇವಿಸಿದರೆ, ನಂತರ ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವು ಹೆಚ್ಚಾಗುತ್ತದೆ ಮತ್ತು ಇದು ಕಲ್ಲುಗಳ ರಚನೆಗೆ ಕಾರಣವಾಗಬಹುದು. ಸ್ಥೂಲಕಾಯತೆ, ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು, ಅಧಿಕ ರಕ್ತದೊತ್ತಡ ಮತ್ತು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕಡಿಮೆಯಾಗುವುದು ಸಹ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಲು ಕಾರಣವಾಗಬಹುದು.

ಕಿಡ್ನಿ ಸ್ಟೋನ್‌ನ ಲಕ್ಷಣಗಳು ಹೀಗಿವೆ: 
ಮೂತ್ರನಾಳದ ಸುತ್ತ ನೋವು
ಮೂತ್ರದಲ್ಲಿ ರಕ್ತ
ವಾಂತಿ ಮತ್ತು ವಾಕರಿಕೆ
ಮೂತ್ರಕೋಶದಲ್ಲಿ ಬಿಳಿ ರಕ್ತ ಕಣಗಳು ಅಥವಾ ಕೀವು ಇರುವುದು
ಮೂತ್ರದ ಪ್ರಮಾಣದಲ್ಲಿ ಇಳಿಕೆ
ಮೂತ್ರ ವಿಸರ್ಜಿಸುವಾಗ ಉರಿಯುವುದು
ಮೂತ್ರ ವಿಸರ್ಜಿಸಲು ಆಗಾಗ ಪ್ರಚೋದನೆ
ಜ್ವರ ಅಥವಾ ಶೀತ

ಮೂತ್ರಪಿಂಡದಲ್ಲಿ ಕಲ್ಲುಗಳಾಗದಿರಲು ಏನು ಮಾಡಬಹುದು ?
ಹೆಚ್ಚು ನೀರು ಕುಡಿಯಿರಿ. ಎಳನೀರನ್ನು ಹೆಚ್ಚು ಸೇವಿಸಿ. ಘನ ಆಹಾರಕ್ಕಿಂತ ದ್ರವಾಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಿ.
ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಆಕ್ಸಲೇಟ್ ಆಹಾರಗಳಾದ ಚಾಕೊಲೇಟ್, ಬೀಜಗಳು, ಪಾಲಕ್, ಸ್ಟ್ರಾಬೆರಿಗಳು, ಚಹಾ ಮತ್ತು ಗೋಧಿ ಹೊಟ್ಟುಗಳ ಆಹಾರವನ್ನು ಮಿತಗೊಳಿಸಿ. ಪ್ರೋಟೀನ್ ಬಳಕೆಯನ್ನು ಕಡಿಮೆ ಮಾಡಿ. ಇದು ಹೆಚ್ಚು ಆಮ್ಲೀಯ ವಸ್ತುವನ್ನು ಹೊಂದಿದೆ.

Follow Us:
Download App:
  • android
  • ios