ಭಾರತದಲ್ಲಿ ವಾಟ್ಸಾಪ್‌ ಸೇವೆ ಸ್ಥಗಿತ, ಐಟಿ ಸಚಿವ ವೈಷ್ಣವ್‌ ಸ್ಪಷ್ಟನೆ

ಮಾಹಿತಿ ತಂತ್ರಜ್ಞಾನದ ಕಾಯ್ದೆ ಅಡಿಯಲ್ಲಿ ಭಾರತದ ನಿಯಮ ಒಪ್ಪಲ್ಲ ಎಂಬ ಕಾರಣ ನೀಡಿ ವಾಟ್ಸಾಪ್‌ ತನ್ನ ಸೇವೆಗಳನ್ನು ಸ್ಥಗಿತಗೊಳಿಸುತ್ತದೆಯೇ’ ಎಂದು ಕೇಳಿದ ಪ್ರಶ್ನೆಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌  ಉತ್ತರ ನೀಡಿದ್ದಾರೆ.

IT Minister Ashwini Vaishnaw confirm that WhatsApp and Meta have not notified shutting down services in India gow

ನವದೆಹಲಿ (ಜು.29): ಭಾರತದಲ್ಲಿ ತನ್ನ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ವಾಟ್ಸಾಪ್‌ ಆಗಲಿ ಅಥವಾ ಮೂಲ ಸಂಸ್ಥೆ ಮೆಟಾ ಸರ್ಕಾರಕ್ಕೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲವೆಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಕಳೆದ ವಾರ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸಂಸದ ವಿವೇಕ ತಂಖಾ ಅವರು, ‘ಮಾಹಿತಿ ತಂತ್ರಜ್ಞಾನದ ಕಾಯ್ದೆ ಅಡಿಯಲ್ಲಿ ಭಾರತದ ನಿಯಮ ಒಪ್ಪಲ್ಲ ಎಂಬ ಕಾರಣ ನೀಡಿ ವಾಟ್ಸಾಪ್‌ ತನ್ನ ಸೇವೆಗಳನ್ನು ಸ್ಥಗಿತಗೊಳಿಸುತ್ತದೆಯೇ’ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವೈಷ್ಣವ್‌ ಈ ಬಗ್ಗೆ ಸರ್ಕಾರಕ್ಕೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲವೆಂದು ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ, ಸಾಮಾಜಿಕ ಮಾಧ್ಯಮಗಳು ಗೂಢಲಿಪೀಕರಣ ಹೊಂದಿದ್ದರೂ, ಸಂದೇಶಗಳನ್ನು ತುರ್ತು ಸಂದರ್ಭದಲ್ಲಿ ತಮಗೆ ತೋರಿಸಬೇಕು ಎಂದು ಸರ್ಕಾರ ಹೇಳಿತ್ತು. ಆದರೆ ಗೂಢಲಿಪೀಕರಣಕ್ಕೆ ಭಂಗ ಬಂದರೆ ಭಾರತದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ವಾಟ್ಸಾಪ್‌ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು.

ಕಳೆದ ಎಪ್ರಿಲ್‌ನಲ್ಲಿ ಎಚ್ಚರಿಕೆ ಕೊಟ್ಟಿದ್ದ ವಾಟ್ಸಾಪ್:
‘2021ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನವಾದ ಮಾಹಿತಿ ತಂತ್ರಜ್ಞಾನ ಕಾಯ್ದೆ ಪಾಲನೆ ಕಡ್ಡಾಯ ಮಾಡಿದರೆ ನಾವು ಭಾರತಕ್ಕೆ ವಿದಾಯ ಹೇಳಬೇಕಾಗುತ್ತದೆ’ ಎಂದು ಅಮೆರಿಕದ ಮೆಟಾ ಒಡೆತನದ ವಾಟ್ಸಾಪ್‌ ಸ್ಪಷ್ಟಪಡಿಸಿ  ಕಳೆದ ಎಪ್ರಿಲ್ ನಲ್ಲಿ  ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು.

ಸಾಮಾಜಿಕ ಮಾಧ್ಯಮಗಳು ಐಟಿ ನಿಯಮ ಪಾಲನೆ ಮಾಡುತ್ತಿಲ್ಲ ಎಂಬ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ನಡೆಸುತ್ತಿದೆ. ಈ ವೇಳೆ ವಾಟ್ಸಾಪ್‌ ಪರ ವಾದ ಮಂಡಿಸಿದ ಕಂಪನಿ ವಕೀಲರು, ‘ಜನರು ವಾಟ್ಸಾಪ್‌ನ ಸಂದೇಶ ಸೇವೆ ಬಳಕೆ ಮಾಡುತ್ತಿರುವುದೇ, ವ್ಯಕ್ತಿಯೊಬ್ಬ ರವಾನಿಸಿದ ಸಂದೇಶ ಮತ್ತೊಬ್ಬನ ಮೊಬೈಲ್‌ಗೆ ತಲುಪುವವರೆಗೂ ಗೂಢಲಿಪಿಯಲ್ಲಿ ಇರುತ್ತದೆ. ಅದನ್ನು ಯಾರೂ ಓದಲು ಸಾಧ್ಯವಿಲ್ಲ ಎಂಬ ಭರವಸೆಯ ಕಾರಣ. ಆದರೆ ಇದೀಗ ಅಂಥ ಸಂದೇಶಗಳನ್ನೇ ಓದಲು ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದರೆ ನಾವು ಭಾರತ ಬಿಡುವುದು ಅನಿವಾರ್ಯವಾಗಲಿದೆ ಎಂದಿದ್ದರು.

2021ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಐಟಿ ಕಾಯ್ದೆ ಅನ್ವಯ, ವಾಟ್ಸಾಪ್‌, ಟ್ವೀಟರ್‌, ಫೇಸ್‌ಬುಕ್‌, ಇನ್ಸ್ಟಾಗ್ರಾಂ ಮೊದಲಾದ ಜಾಲತಾಣಗಳು, ಸರ್ಕಾರ ಬಯಸಿದ ವೇಳೆ ನಿರ್ದಿಷ್ಟ ಸಂದೇಶ, ಫೋಟೋ ಮೊದಲ ಬಾರಿಗೆ ಸೃಷ್ಟಿಸಿದ, ರವಾನಿಸಿದ ವ್ಯಕ್ತಿ ಯಾರೆಂಬ ಮಾಹಿತಿ ಹಂಚಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಲಾಗಿತ್ತು. 

ವಾಟ್ಸಾಪ್‌ನಲ್ಲಿ ಹರಿದಾಡುವ ಸಂದೇಶಗಳು ಕೋಮುಗಲಭೆಗೂ ಕಾರಣವಾಗುವ ಕಾರಣ ಇಂಥ ಕಾಯ್ದೆ ಅನಿವಾರ್ಯ ಎಂದು ಕೇಂದ್ರ ಸರ್ಕಾರ ಹೇಳಿತ್ತು.ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಾಟ್ಸಾಪ್‌, ಭಾರತದಲ್ಲಿ 40 ಕೋಟಿ ಸಕ್ರಿಯ ವಾಟ್ಸಾಪ್‌ ಬಳಕೆದಾರರಿದ್ದಾರೆ. ಅವರು ತಾವು ಕಳುಹಿಸುವ ಸಂದೇಶ ಎನ್‌ಕ್ರಿಪ್ಟೆಡ್‌ (ಗೂಢಲಿಪಿ) ಆಗಿರುತ್ತದೆ.

ವ್ಯಕ್ತಿಯೊಬ್ಬ ಅದನ್ನು ಕಳುಹಿಸಿದ ಬಳಿಕ ಅದು ಯಾರಿಗೆ ತಲುಪಬೇಕೋ ಆತನಿಗೆ ತಲುಪುವವರೆಗೂ ಗೂಢಲಿಪಿಯಲ್ಲಿರುತ್ತದೆ. ಯಾರೂ ಅದನ್ನು ಓದಲು ಸಾಧ್ಯವಿಲ್ಲ ಎಂಬ ಭರವಸೆಯೇ ಅವರು ಈ ಪ್ರಮಾಣದಲ್ಲಿ ಬಳಸಲು ಕಾರಣ. ಆದರೆ ಇಂಥ ಸಂದೇಶವನ್ನು ನಾವು ಓದಿ ಸರ್ಕಾರ ಬಯಸಿದಾಗ ನೀಡಬೇಕು ಎಂದಾದಲ್ಲಿ ಗ್ರಾಹಕರ ಭರವಸೆಗೆ ಧಕ್ಕೆ ಉಂಟಾಗುತ್ತದೆ. ಇಂಥ ಪ್ರಯತ್ನ ಬಳಕೆದಾರನ ಖಾಸಗಿತನಕ್ಕೆ ಧಕ್ಕೆ ತರುತ್ತದೆ. ಜೊತೆಗೆ ಕೋಟ್ಯಂತರ ಜನರು ರವಾನಿಸುವ ಕೋಟ್ಯಂತರ ಸಂದೇಶಗಳ ಇಡೀ ಸರಣಿಯನ್ನೇ ನಾವು ಸಂಗ್ರಹಿಸಬೇಕಾಗುತ್ತದೆ. ಹೀಗಾಗಿ ಭಾರತದಲ್ಲಿ ನಾವು ಸಂದೇಶ ರವಾನೆಯ ಸೇವೆಯನ್ನೇ ರದ್ದುಪಡಿಸಬೇಕಾಗುತ್ತದೆ’ ಎಂದು ಕೋರ್ಟಲ್ಲಿ ವಾದ ಮಂಡಿಸಿತ್ತು.

Latest Videos
Follow Us:
Download App:
  • android
  • ios