ಸಬ್ ಜೂನಿಯರ್ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಸಬ್ ಜೂನಿಯರ್ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್ಎಫ್ಎ) ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಣಿಪುರ ವಿರುದ್ಧ ಫೈನಲ್ ಪಂದ್ಯದಲ್ಲಿ ರಾಜ್ಯ ತಂಡ 5-1 ಗೋಲುಗಳಲ್ಲಿ ಭರ್ಜರಿ ಗೆಲುವು ಸಾಧಿಸಿತು.
ಟೂರ್ನಿಯುದ್ದಕ್ಕೂ ಅಜೇಯವಾಗಿದ್ದ ಆತಿಥೇಯ ತಂಡ ಫೈನಲ್ನಲ್ಲೂ ಪ್ರಾಬಲ್ಯ ಸಾಧಿಸಿತು. ಸಿಎಚ್ ಸಾಕಿಬ್ ಹ್ಯಾಟ್ರಿಕ್ ಗೋಲು ಬಾರಿಸಿದರೆ, ರಿಶಾನ್ ಚೌಧರಿ ಹಾಗೂ ಅರವಿಂದ್ರಿಯನ್ ತಲಾ 1 ಗೋಲು ದಾಖಲಿಸಿದರು. ಕೆಎಸ್ಎಫ್ಎ ಅಧ್ಯಕ್ಷ, ಶಾಸಕ ಎನ್.ಎ.ಹ್ಯಾರಿಸ್ ಸೇರಿದಂತೆ ಪ್ರಮುಖರು ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು.
ಪುಟ್ಟಯ್ಯ ಸ್ಮರಣಾರ್ಥ ಕಪ್ ಫುಟ್ಬಾಲ್ ಇಂದು ಆರಂಭ
ಬೆಂಗಳೂರು: ಬೆಂಗಳೂರು ನಗರ ಫುಟ್ಬಾಲ್ ಸಂಸ್ಥೆ ಆಯೋಜಿಸುವ ಸಿ.ಪುಟಯ್ಯ ಸ್ಮರಣಾರ್ಥ ಫುಟ್ಬಾಲ್ ಟೂರ್ನಿ ಸೋಮವಾರ ಆರಂಭಗೊಳ್ಳಲಿದೆ. ನಗರದ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಟೂರ್ನಿಯಲ್ಲಿ ಬೆಂಗಳೂರು ಎಫ್ಸಿ, ಕೊಡಗು ಎಫ್ಸಿ, ಎಫ್ಸಿ ರಿಯಲ್ ಬೆಂಗಳೂರು, ಪರಿಕ್ರಮ ಎಫ್ಸಿ, ಕಿಕ್ಸ್ಟಾರ್ಟ್ ಎಫ್ಸಿ, ಎಫ್ಸಿ ಬೆಂಗಳೂರು ಯುನೈಟೆಡ್ ಸೇರಿದಂತೆ ಒಟ್ಟು 13 ತಂಗಳು ಪಾಲ್ಗೊಳ್ಳಲಿವೆ. ಟೂರ್ನಿ ಅ.6ರಂದು ಕೊನೆಗೊಳ್ಳಲಿದೆ.
ಐಎಸ್ಎಲ್: ಕೇರಳಕ್ಕೆ ಜಯ
ಕೊಚ್ಚಿ: 11ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಮೊದಲ ಗೆಲುವು ದಾಖಲಿಸಿದೆ. ಭಾನುವಾರ ಈಸ್ಟ್ ಬೆಂಗಾಲ್ ವಿರುದ್ಧ ಕೇರಳ 2-1 ಗೋಲುಗಳಲ್ಲಿ ಗೆಲುವು ಸಾಧಿಸಿತು. ಈಸ್ಟ್ ಬೆಂಗಾಲ್ ಸತತ 2ನೇ ಸೋಲನುಭವಿಸಿತು.
ಪೋಲೆಂಡ್ ಬ್ಯಾಡ್ಮಿಂಟನ್: ಅನ್ಮೋಲ್ ಚಾಂಪಿಯನ್
ಲ್ಯುಬ್ಲಿನ್(ಪೋಲೆಂಡ್): ಭಾರತದ ಯುವ ಶಟ್ಲರ್ ಅನ್ಮೋಲ್ ಖರ್ಬ್ ಪೋಲೆಂಡ್ ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ 17 ವರ್ಷದ ಅನ್ಮೋಲ್, ಸ್ವಿಜರ್ಲೆಂಡ್ನ ಮಿಲೆನಾ ಶ್ನಿಡೆರ್ ವಿರುದ್ಧ 21-12, 21-8 ಗೇಮ್ಗಳಲ್ಲಿ ಗೆಲುವು ಸಾಧಿಸಿದರು.
ಅವರು ಟೂರ್ನಿಯಲ್ಲಿ ಒಂದೂ ಗೇಮ್ ಕಳೆದುಕೊಳ್ಳದೆ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅನ್ಮೋಲ್ ಇತ್ತೀಚೆಗಷ್ಟೇ ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್ಶಿಪ್ನಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು.
