Asianet Suvarna News Asianet Suvarna News

ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿ: ಫುಟ್ಬಾಲ್‌: ದೋಹಾದಲ್ಲಿ ಭಾರತಕ್ಕೆ ದ್ರೋಹಾ! ಮೋಸ ಮಾಡಿ ಗೆದ್ದ ಕತಾರ್

37ನೇ ನಿಮಿಷದಲ್ಲಿ ಚಾಂಗ್ಟೆ ಆಕರ್ಷಕ ಗೋಲು ಬಾರಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ಒದಗಿಸಿದರು. ಮೊದಲಾರ್ಧವನ್ನು ಬಲಿಷ್ಠವಾಗಿ ಮುಕ್ತಾಯಗೊಳಿಸಿದ ಭಾರತ, ದ್ವಿತೀಯಾರ್ಧದಲ್ಲೂ ಉತ್ತಮ ಆಟ ಪ್ರದರ್ಶಿಸಿತು.

Heartbreak for Blue Tigers after controversial exit from FIFA World Cup 2026 qualification race kvn
Author
First Published Jun 12, 2024, 9:48 AM IST

ದೋಹಾ: ಏಷ್ಯನ್‌ ಚಾಂಪಿಯನ್‌ ಕತಾರ್‌ ಮಾಡಿದ ಮೋಸದಿಂದಾಗಿ 1-2 ಗೋಲುಗಳಿಂದ ಸೋತ ಭಾರತ, 2026ರ ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯಿಂದ ಹೊರಬಿದ್ದಿದೆ. ಅರ್ಹತಾ ಟೂರ್ನಿಯ 2ನೇ ಹಂತದ ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತ ಗೆದ್ದು, ಇದೇ ಮೊದಲ ಬಾರಿಗೆ 3ನೇ ಸುತ್ತಿಗೇರುವ ನಿರೀಕ್ಷೆಯಲ್ಲಿತ್ತು. ಆದರೆ, ಪಂದ್ಯದ 75ನೇ ನಿಮಿಷದಲ್ಲಿ ಕತಾರ್‌ ಮಾಡಿದ ಮೋಸ, ಭಾರತಕ್ಕೆ ಆಘಾತ ಉಂಟು ಮಾಡಿತು.

37ನೇ ನಿಮಿಷದಲ್ಲಿ ಚಾಂಗ್ಟೆ ಆಕರ್ಷಕ ಗೋಲು ಬಾರಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ಒದಗಿಸಿದರು. ಮೊದಲಾರ್ಧವನ್ನು ಬಲಿಷ್ಠವಾಗಿ ಮುಕ್ತಾಯಗೊಳಿಸಿದ ಭಾರತ, ದ್ವಿತೀಯಾರ್ಧದಲ್ಲೂ ಉತ್ತಮ ಆಟ ಪ್ರದರ್ಶಿಸಿತು. ಆದರೆ 75ನೇ ನಿಮಿಷದಲ್ಲಿ ಕತಾರ್‌ ಗೋಲು ಗಳಿಸುವ ಯತ್ನ ನಡೆಸಿತು. ಚೆಂಡು ಗೋಲು ಪೆಟ್ಟಿಗೆಯ ಪಕ್ಕದಲ್ಲಿದ್ದ ಗೆರೆಯನ್ನು ದಾಟಿ ಹೊರಕ್ಕೆ ಹೋಗಿತ್ತು. ಈ ಕಾರಣಕ್ಕೆ ಭಾರತದ ಗೋಲ್‌ ಕೀಪರ್‌, ನಾಯಕ ಗುರ್‌ಪ್ರೀತ್‌ ಸಂಧು ನಿರಾಳರಾದರು. ಆದರೆ ಅಲ್‌-ಹಸನ್‌ ಚೆಂಡನ್ನು ಒಳಕ್ಕೆ ಎಳೆದುಕೊಂಡು ಗೋಲು ಪೆಟ್ಟಿಗೆಯ ಮುಂದಿದ್ದ ಯೂಸುಫ್‌ ಅಯೆಮ್‌ಗೆ ಪಾಸ್‌ ಮಾಡಿದರು. ಯೂಸುಫ್‌ ಚೆಂಡನ್ನು ಗೋಲು ಪೆಟ್ಟಿಗೆಯ ಒಳಕ್ಕೆ ಸೇರಿಸಿ ಸಂಭ್ರಮಿಸಲು ಆರಂಭಿಸಿದರು.

T20 World Cup 2024: ಪಾಕಿಸ್ತಾನಕ್ಕೆ ಕೊನೆಗೂ ಒಲಿದ ಗೆಲುವು

ಭಾರತೀಯ ಆಟಗಾರರು ಗೋಲು ನೀಡದಂತೆ ಪ್ರತಿಭಟನೆ ನಡೆಸಿದರೂ, ರೆಫ್ರಿಗಳು ಕೇಳಲಿಲ್ಲ. ಈ ಘಟನೆ ಭಾರತೀಯರನ್ನು ಕಂಗೆಡಿಸಿತು. 85ನೇ ನಿಮಿಷದಲ್ಲಿ ಕತಾರ್‌ ಮತ್ತೊಂದು ಗೋಲು ಬಾರಿಸಿ, ಗೆಲುವು ತನ್ನದಾಗಿಸಿಕೊಂಡಿತು. ಈ ಪಂದ್ಯಕ್ಕೂ ಮೊದಲೇ 3ನೇ ಸುತ್ತಿಗೆ ಪ್ರವೇಶಿಸಿದ್ದ ಕತಾರ್‌, ಈ ರೀತಿ ಮೋಸದಿಂದ ಗೆದ್ದಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ಇನ್ನು ಮತ್ತೊಂದು ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 1-0 ಗೋಲಿನಿಂದ ಗೆದ್ದ ಕುವೈತ್‌, ‘ಎ’ ಗುಂಪಿನಿಂದ 2ನೇ ತಂಡವಾಗಿ ಅರ್ಹತಾ ಟೂರ್ನಿಯ 3ನೇ ಸುತ್ತಿಗೇರಿತು. ಇದೇ ವೇಳೆ, ಈ ಸೋಲಿನಿಂದಾಗಿ ಭಾರತ 2027ರ ಎಎಫ್‌ಸಿ ಏಷ್ಯನ್‌ ಕಪ್‌ಗೆ ನೇರ ಅರ್ಹತೆ ಪಡೆಯಲು ವಿಫಲವಾಯಿತು.

2025ರ ಕಿರಿಯರ ಹಾಕಿ ವಿಶ್ವಕಪ್‌ಗೆ ಭಾರತ ಆತಿಥ್ಯ

ಲುಸ್ಸಾನೆ (ಸ್ವಿಜರ್‌ಲೆಂಡ್‌): ಮುಂದಿನ ವರ್ಷ ಕಿರಿಯ ಪುರುಷರ ಹಾಕಿ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಲಿದೆ. 2025ರ ಡಿಸೆಂಬರ್‌ನಲ್ಲಿ ಪಂದ್ಯಾವಳಿ ನಡೆಯಲಿದ್ದು, ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ 24 ತಂಡಗಳು ಸೆಣಸಲಿವೆ. ಭಾರತ 4ನೇ ಬಾರಿಗೆ ಟೂರ್ನಿಗೆ ಆತಿಥ್ಯ ನೀಡಲಿದೆ. 2013ರಲ್ಲಿ ನವದೆಹಲಿ 2016ರಲ್ಲಿ ಲಖನೌ, 2021ರಲ್ಲಿ ಭುವನೇಶ್ವರದಲ್ಲಿ ಪಂದ್ಯಾವಳಿ ನಡೆದಿತ್ತು. 2016ರಲ್ಲಿ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 2025ರ ಟೂರ್ನಿ ಯಾವ ನಗರದಲ್ಲಿ ನಡೆಯಲಿದೆ ಎನ್ನುವುದು ಇನ್ನಷ್ಟೇ ಘೋಷಣೆಯಾಗಬೇಕಿದೆ.

ಭಾರತ ಫುಟ್ಬಾಲ್ ಟೀಂಗೆ ಗುರ್‌ಪ್ರೀತ್ ಸಿಂಗ್ ಸಂಧು ನಾಯಕ

ನಂ.1 ಸ್ಥಾನ ಕಳೆದುಕೊಂಡ ಸ್ವಾತಿಕ್‌-ಚಿರಾಗ್‌ ಶೆಟ್ಟಿ

ನವದೆಹಲಿ: ಭಾರತದ ತಾರಾ ಶಟ್ಲರ್‌ಗಳಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ, ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌ನ ಪುರುಷರ ಡಬಲ್ಸ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ಕಳೆದ ವಾರ ಇಂಡೋನೇಷ್ಯಾ ಓಪನ್‌ನಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಭಾರತೀಯ ಜೋಡಿಗೆ ಅಗ್ರಸ್ಥಾನ ಕೈತಪ್ಪಿದ್ದು, 3ನೇ ಸ್ಥಾನಕ್ಕೆ ಕುಸಿದಿದೆ. ಚೀನಾದ ಲಿಯಾಂಗ್‌ ವೀ ಕೆಂಗ್‌ ಹಾಗೂ ವಾಂಗ್‌ ಚಾಂಗ್‌ ನಂ.1 ಸ್ಥಾನಕ್ಕೇರಿದ್ದು, ಡೆನ್ಮಾರ್ಕ್‌ನ ಕಿಮ್‌ ಆ್ಯಸ್ಟ್ರುಪ್‌ ಹಾಗೂ ಆ್ಯಂಡರ್ಸ್‌ ರಾಸ್ಮೂಸೆನ್‌ 2ನೇ ಸ್ಥಾನಕ್ಕೇರಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್‌ ಹಾಗೂ ಲಕ್ಷ್ಯ ಸೇನ್‌ ಕ್ರಮವಾಗಿ 10 ಹಾಗೂ 14ನೇ ಸ್ಥಾನ ಕಾಯ್ದುಕೊಂಡಿದ್ದು, ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು 10ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇಂದು ಬೆಂಗಳೂರಲ್ಲಿ ಇಂಡಿಯನ್‌ ಗ್ರ್ಯಾನ್‌ಪ್ರಿ ಅಥ್ಲೆಟಿಕ್ಸ್‌ ಕೂಟ

ಬೆಂಗಳೂರು: ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್‌ ಹಾಗೂ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಬುಧವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಇಂಡಿಯನ್‌ ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌-3 ಚಾಂಪಿಯನ್‌ಶಿಪ್‌ ಆಯೋಜಿಸಿವೆ. ಭಾರತದ ಅಗ್ರ ಅಥ್ಲೀಟ್‌ಗಳಾದ ಮಣಿಕಂಠ, ಎಂ.ಆರ್‌.ಪೂವಮ್ಮ, ಹಿಮಾ ದಾಸ್‌, ಅಭಿನಯ ಶೆಟ್ಟಿ ಸೇರಿ ಹಲವು ರಾಜ್ಯಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಸ್ಪರ್ಧೆಗಳು ಆರಂಭಗೊಳ್ಳಲಿವೆ. ಜಾವೆಲಿನ್‌ ಥ್ರೋ, ಹೈಜಂಪ್‌, ಲಾಂಗ್‌ ಜಂಪ್‌, 100 ಮೀ., 200 ಮೀ. ಓಟಗಳು ಪ್ರಮುಖ ಆಕರ್ಷಣೆ ಎನಿಸಿವೆ.
 

Latest Videos
Follow Us:
Download App:
  • android
  • ios