Asianet Suvarna News Asianet Suvarna News

ಯಾದಗಿರಿಯಲ್ಲಿ ಸಂಭ್ರಮದ ಎಳ್ಳ ಅಮವಾಸ್ಯೆ 'ಚೆರಗ ಚೆಲ್ಲಿದ' ರೈತರು

ರೈತರ ಜೀವ ಭೂಮಿ ತಾಯಿ. ಈ ಭೂಮಿ ತಾಯಿಯನ್ನು ರೈತರು ಆರಾಧಿಸುತ್ತಾರೆ. ಅದು ವಿಶೇಷವಾಗಿ ಈ ಎಳ್ಳ ಅಮವಾಸ್ಯೆ ರೈತಾಪಿ ವರ್ಗಕ್ಕೆ ಹಬ್ಬವಿದ್ದಂತೆ. ಇದನ್ನು ಯಾದಗಿರಿ ಜಿಲ್ಲೆಯಾದ್ಯಂತ ರೈತರು ಸಂಭ್ರಮದಿಂದ ಆಚರಣೆ ಮಾಡಿದರು.

Yellu Amavasya celebrated in yadagiri gow
Author
First Published Dec 23, 2022, 5:51 PM IST

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಡಿ.23): ರೈತರ ಜೀವ ಭೂಮಿ ತಾಯಿ. ಈ ಭೂಮಿ ತಾಯಿಯನ್ನು ರೈತರು ಆರಾಧಿಸುತ್ತಾರೆ. ಅದು ವಿಶೇಷವಾಗಿ ಈ ಎಳ್ಳ ಅಮವಾಸ್ಯೆ ರೈತಾಪಿ ವರ್ಗಕ್ಕೆ ಹಬ್ಬವಿದ್ದಂತೆ. ಇದನ್ನು ಯಾದಗಿರಿ ಜಿಲ್ಲೆಯಾದ್ಯಂತ ರೈತರು ಸಂಭ್ರಮದಿಂದ ಆಚರಣೆ ಮಾಡಿದರು. ಈಡೀ ರೈತರ ಕುಟುಂಬ ಸಮೇತರಾಗಿ ಎತ್ತಿನಗಾಡಿಯಲ್ಲಿ ವಿಶೇಷ ತಿಂಡಿ, ತಿನಿಸುಗಳೊಂದಿಗೆ ತಮ್ಮ ಜಮೀನುಗಳಿಗೆ ತೆರಳಿ ತಮ್ಮ ಜಮೀನಿನ ಸುತ್ತ ಸಪ್ಪನೆಯ ಹೋಳಿಗೆ-ಅನ್ನ ಮಿಶ್ರಿತ ಪದಾರ್ಥವನ್ನು ಭೂಮಿ ತಾಯಿಗೆ ನೈವೈಧ್ಯ ಅರ್ಪಿಸುತ್ತಿರುವುದು ಮಾತ್ರ ಬಹಳ ವಿಶೇಷ.

ರೈತರ ಹಬ್ಬದ ಎಳ್ಳ ಅಮಾವಾಸ್ಯೆ 'ಚೆರಗ ಚೆಲ್ಲುವ' ಸಂಭ್ರಮ 
ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ ಹಬ್ಬವನ್ನು ಬಹಳಷ್ಟು ವಿಶೇಷ ಹಾಗೂ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಚೆರಗ ಚೆಲ್ಲುವುದನ್ನು ಇಂದು ಯಾದಗಿರಿ ಜಿಲ್ಲೆಯ ರೈತರು ಸಂಭ್ರಮದಿಂದ ಆಚರಿಸಿದರು. ಸುರಪುರ, ಶಹಾಪುರ, ಹುಣಸಗಿ, ಗುರಮಠಕಲ್ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯ ರೈತರು ಎತ್ತಿನಗಾಡಿ, ಟ್ರ್ಯಾಕ್ಟರ್ ನ್ನು ಅಲಂಕಾರ ಮಾಡಿಕೊಂಡು ತಮ್ಮ ಜೋಳದ ಜಮೀನುಗಳಿಗೆ ತೆರಳುತ್ತಾರೆ. ತಾವು ತಯಾರಿಸಿದ ವಿಶೇಷ ತಿಂಡಿ-ತಿನಿಸುಗಳನ್ನು ಜೋಳ ಬಿತ್ತಿದ ಹೊಲಕ್ಕೆ ಹೋಗಿ ವಿಶೇಷ ನೈವೈದ್ಯವನ್ನುದೊಂದಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಜೊಳದ ಹೊಲದ ಮಧ್ಯೆ ತಮ್ಮ ಅಡುಗೆಯನ್ನು 'ಚರಗ' ಚೆಲ್ಲುತ್ತಾರೆ. ರೈತರ ಜೀವನಾಡಿ ಭೂತಾಯಿಗೆ ನಮಿಸಿ, ಫಸಲು ಚೆನ್ನಾಗಿ ಬರಲು ಎಂದು ಪ್ರಾರ್ಥಿಸುತ್ತಾರೆ.

ಮಳೆ ಇಲ್ಲದೇ ಬೆಳೆ ಜೋಳಕ್ಕೆ ರೈತರ ನಮನ
ಕೇವಲ ಒಂದೇ ಮಳೆಗೆ ಬೆಳೆ ಬೆಳೆಯುವುದು ಈ ಜೋಳದ ಬೆಳೆ. ಈ ಚಳಿಗಾಲದ ವಿಪರೀತ ಚಳಿಗೆ ಬೆಳೆದು ರೈತರಿಗೆ ಫಸಲು ನೀಡುತ್ತದೆ. ಈ ಬೆಳೆಯಿಂದ ರೈತರಿಗೆ ಕಡಿಮೆ ಖರ್ಚಿನಲ್ಲಿ ಬೆಳೆ ಬೆಳೆಯಬಹುದಾಗಿದೆ. ಇದು ರೈತರ ಆರ್ಥಿಕ ಪರಿಸ್ಥಿತಿ ಹೆಚ್ಚು ಮಾಡುತ್ತದೆ. ಜೊತೆಗೆ ತಮ್ಮ ರೈತರ ಜೊತೆಗಾರ ಎತ್ತುಗಳಿಗೆ ತಿನ್ನಲು ಸಪ್ಪೆಯನ್ನು ಕೂಡ ಈ ಜೋಳದಿಂದ ಬರುತ್ತದೆ. ಈ ಜೋಳದಿಂದ ಹಲವು ರೀತಿಯ ಅನೂಕೂಲಗಳಾಗುತ್ತವೆ. ಹಾಗಾಗಿ ಈ ಜೋಳವನ್ನು ಈ ಉತ್ತರ ಕರ್ನಾಟಕ ಭಾಗದ ರೈತರು ಆರಾಧಿಸುತ್ತಾರೆ. ರೈತರು ಇದೇ ಜೋಳದ ಹೊಲದಲ್ಲಿ ಒಂದು ದಿನ ಕುಟುಂಬ ಸಮೇತರಾಗಿ ವಾಸ್ತವ್ಯ ಹೂಡುತ್ತಾರೆ. ಗೋಲಾಕಾರದಲ್ಲಿ ಕುಳಿತು ವಿಶೇಷ ಭೋಜನ ಸವಿಯುತ್ತಾರೆ. ತಮ್ಮ ಮಕ್ಕಳು, ಬೀಗರು, ಬಂಧು ಬಳಗದೊಂದಿಗೆ ಇಲ್ಲಿ ಸೇರಿರುತ್ತಾರೆ.  ಇದು ರೈತಾಪಿ ವರ್ಗದ ಜನರಲ್ಲಿ ಉತ್ಸಾಹ ಹೆಚ್ಚು ಮಾಡುತ್ತದೆ.

ಬೆಳಗಾವಿ: ಕೊಕಟನೂರ ಯಲ್ಲಮ್ಮದೇವಿ ಜಾತ್ರೆ, ಹರಕೆ ತೀರಿಸಿದ ಭಕ್ತರು

ಪ್ರಕೃತಿ ಮಾತೆಗೆ 'ರೈತರ ಚರಗ' ವೇ ನೈವೈಧ್ಯ ನಮನ: ವಿಶ್ವನಾಥ ಬಾಕ್ಲಿ
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ರೈತ ವಿಶ್ವನಾಥ ಬಾಕ್ಲಿ ಮಾತಾನಾಡಿ, ಎಳ್ಳ ಅಮಾವಸ್ಯೆ ಇದು ವರ್ಷಕ್ಕೊಮ್ಮೆ ಬರುವ ರೈತರ ಹಬ್ಬವಾಗಿದೆ. ಇದನ್ನು ನಮ್ಮ ಹಿರಿಯರು ಮೊದಲಿನಿಂದಲೂ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಒಕ್ಕಲುತನ ಮಾಡುವವರಿಗೆ ಇದು ಸಂಭ್ರಮದ ಕ್ಷಣವಾಗಿದೆ. ನಮ್ಮ ಮನೆಯಲ್ಲಿ ನಿನ್ನೆ ಮನೆಯನ್ನು ತೊಳೆದು, ರೈತ ಮಹಿಳೆಯರು ಇವತ್ತು ಬೆಳಗಿನ ಜಾವ 2 ಗಂಟೆಗೆ ಎದ್ದು ಅಡುಗೆ, ತಿಂಡಿ-ತಿನಿಸುಗಳನ್ನು ರೆಡಿ ಮಾಡಿಕೊಳ್ತಾರೆ. ಮಳೆ ಇಲ್ಲದ ಬೆಳೆ ಅಂದ್ರೆ ಅದು ಬಿಳಿ ಜೋಳ. ಬಿಳಿ ಜೋಳವನ್ನು ಅಕ್ಟೋಬರ್ ತಿಂಗಳಲ್ಲಿ ಬಿತ್ತಲಾಗುತ್ತದೆ. ಪಾಂಡವರು-ಕೌರವರು ಬೆಳೆದ ಬೆಳೆ ಈ ಬಿಳಿ ಜೋಳ. ಇವತ್ತು ನಾವು ನಂಬಿದ ಭೂಮಿ ತಾಯಿಗೆ ಚೆರಗ ಚೆಲ್ಲುವ ಮೂಲಕ ನೈವೈದ್ಯ ಅರ್ಪಿಸುತ್ತೇವೆ. ಹುಂಡಿ, ಹಿಂಡಿ ಪಲ್ಯಾ, ಕಾಯಿಪಲ್ಯಾ, ಹೋಳಿಗೆ, ಅನ್ನ-ಸಾಂಬಾರು ಅನ್ನು ಮುದ್ದೆ ಮಾಡಿ ಈಡೀ ಜೋಳದ ಹೊಲದ ತುಂಬಾ ಚೆರಗ ಚೆಲ್ಲುತ್ತೇವೆ. ನಮ್ಮ ಕುಟುಂಬದ ಎಲ್ಲಾ ಸದಸ್ಯರು ಸೇರಿ ನಮ್ಮ ಜಮೀನಿನಲ್ಲೆ ವಿವಿಧ ಬಗೆಯ ಊಟ, ತಿಂಡಿ-ತಿನಿಸುಗಳನ್ನು ಸವೆಯಲಾಗುತ್ತದೆ. ಹೋಳಿಗೆ, ಅನ್ನ-ಸಾಂಬಾರು, ಬದನೆಕಾಯಿಯನ್ನು ಕುಟುಂಬಸ್ಥರೆಲ್ಲರೂ ಊಟ ಸವಿದು ಮನೆಗೆ ಹೋಗುತ್ತೆವೆ ಎಂದರು.

ಎಳ್ಳಮವಾಸ್ಯೆ ಪ್ರಯುಕ್ತ ಲಕ್ಷಾಂತರ ಜನರಿಂದ ಕಡಲ ತೀರಗಳಲ್ಲಿ ಸಮುದ್ರ ಸ್ನಾನ

ರೈತರ ಸುಗ್ಗಿಯ ಸಂಭ್ರಮವೇ ಈ 'ಚೆರಗ ಚೆಲ್ಲುವುದು': ಉಮೇಶ್ ಮುದ್ನಾಳ
ರೈತ ಹಾಗೂ ರೈತ ಮಹಿಳೆ ಒಂದು ಎತ್ತಿನಗಾಡಿಯಲ್ಲಿ ಕುಟುಂಬದೊಂದಿಗೆ ವೈವಿಧ್ಯಮಯ ಖಾದ್ಯದೊಂದಿಗೆ ಒಂದು ಪುಟ್ಟಿಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಹೋಗಿ ಪ್ರಕೃತಿ ಮಾತೆಗೆ ನೈವೈದ್ಯ ಸಲ್ಲಿಸುವುದೇ 'ಚೆರಗ' ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ಮುದ್ನಾಳ ವಿವರಿಸಿದರು.

Follow Us:
Download App:
  • android
  • ios