ಅರ್ಧ ಗಂಟೆ ರೇಸ್, ಚಿತ್ರವಿಡೀ ಜೋಷ್ ‘ಪಂಚತಂತ್ರ!’
ನಿರ್ದೇಶಕ ಯೋಗರಾಜ್ ಭಟ್ಟರು, ಸಿನಿಪ್ರೇಕ್ಷಕರಿಗೆ ‘ಪಂಚತಂತ್ರ’ದ ನೀತಿ ಕತೆ ಹೇಳಲು ರೆಡಿ ಆಗಿದ್ದಾರೆ. ಮಾರ್ಚ್ 29ಕ್ಕೆ ಭಟ್ಟರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಪಂಚತಂತ್ರ’ ಬಿಡುಗಡೆ ಆಗುತ್ತಿದೆ.
ಹೊಸಬರ ಜತೆಗೆ ಸೇರಿ ಹೊಸದೊಂದು ಕತೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲು ಹೊರಟಿದ್ದ ಭಟ್ಟರು ಆ ಚಿತ್ರಕ್ಕೆ ‘ಪಂಚತಂತ್ರ’ ಅಂತ ಟೈಟಲ್ ಇಟ್ಟಿದ್ದೇ ಇಂಟೆರೆಸ್ಟಿಂಗ್ ಆಗಿದೆ.
ಕತೆ ಜತೆಗೆ ಹಾಡುಗಳು ಚೆನ್ನಾಗಿರಬೇಕು, ಮೇಕಿಂಗ್ ಅದ್ಭುತವಾಗಿರಬೇಕು ಅಂತೆಲ್ಲ ತಲೆ ಕೆಡಿಸಿಕೊಂಡು ಪಕ್ಕಾ ಮನರಂಜನೆಯ ಸಿನಿಮಾ ನೀಡುವ ವಿಶ್ವಾಸದಲ್ಲಿದ್ದಾರೆ. ಹಾಗೆ ತಲೆ ಕೆಡಿಸಿಕೊಂಡು ಚಿತ್ರಕ್ಕೆ ಜೋಡಿಸಿದ್ದು ವಾಕ್ಸ್ ವೋಗನ್ ಕಾರ್ ರೇಸ್. ಬೆಂಗಳೂರು ಟು ಮೈಸೂರಿನ ನಡುವೆ ಶೂಟ್ ಆದ ಆ ಕಾರ್ ರೇಸ್ ಈ ಚಿತ್ರದ ಹೈಲೈಟ್. ಆ ಕತೆ ಏನು ಅಂತ ಹೇಳುವುದಕ್ಕೂ ಮುಂಚೆ ಭಟ್ಟರು ಚಿತ್ರದ ಟ್ರೇಲರ್ ತೋರಿಸಿದರು. ಆನಂತರ ಕಾರ್ ರೇಸ್ ಗೇಮ್ಗೆ ಚಾಲನೆ ಕೊಟ್ಟರು. ಅವರೆಡನ್ನು ಅಲ್ಲಿ ನೆರವೇರಿಸಿಕೊಟ್ಟವರು ರಾಕಿಂಗ್ ಸ್ಟಾರ್ ಯಶ್. ಅದಕ್ಕೂ ಮುಂಚೆ ಚಿತ್ರ ತಂಡದೊಂದಿಗೆ ಕುಳಿತು ಭಟ್ಟರ ಸಿನಿಮಾ ಮತ್ತು ಅವರೊಂದಿನ ಒಡನಾಟವನ್ನು ಹೇಳಿಕೊಂಡರು ಯಶ್.
‘ಟ್ರೇಲರ್ ನೋಡಿದ್ದೇನೆ. ಅದ್ಭುತವಾಗಿ ಬಂದಿದೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎನ್ನುವ ವಿಶ್ವಾಸವಿದೆ’ಎಂದರು ಯಶ್. ಚಿತ್ರದ ವಿಶೇಷತೆ ಹೇಳಿಕೊಳ್ಳಲು ಚಿತ್ರದ ನಾಯಕ ವಿಹಾನ್ ಗೌಡ, ನಾಯಕಿ ಸೋನಲ್, ಪೋಷಕ ಪಾತ್ರದಲ್ಲಿ ಅಭಿನಯಿಸಿದ ಕರಿಸುಬ್ಬು, ಛಾಯಾಗ್ರಹಕ ಸುಜ್ಞಾನ್ ಅವರೊಂದಿಗೆ ನಿರ್ದೇಶಕ ಯೋಗರಾಜ್ ಭಟ್ ಹಾಜರಿದ್ದರು.
ನೆಗೆಟಿವ್ ಕಮೆಂಟ್ಗೆ ಡೊಂಟ್ ಕೇರ್: ಪಂಚತಂತ್ರ ನಟಿ!
‘ ಪಂಚತಂತ್ರದ ಕತೆಯ ಸ್ಫೂರ್ತಿಯಿಂದ ಈ ಚಿತ್ರದ ಕತೆ ಬರೆದೆ. ಇಲ್ಲಿರುವ ವಾಕ್ಸ್ವೋಗನ್ ಕಾರ್ ರೇಸ್ ಆಮೆ ಮತ್ತು ಮೊಲದ ಕತೆಗೆ ಪೂರಕವಾದದ್ದು. ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಒಂದೊಳ್ಳೆ ಸಿನಿಮಾ ಮಾಡಿರುವ ಖುಷಿ ನಮಗಿದೆ. ಅಂತಿಮವಾಗಿ ಅದು ಪ್ರೇಕ್ಷಕರಿಗೆ ಹಿಡಿಸಬೇಕು’ ಅಂತ ಯೋಗರಾಜ್ ಭಟ್ ಹೇಳಿದರೆ, ನಾಯಕ ನಟ ವಿಹಾನ್ ಗೌಡ , ಎಂಟ್ರಿಯಲ್ಲೇ ಯೋಗರಾಜ್ ಭಟ್ ನಿರ್ದೇಶನಲ್ಲಿ ಬೆಳ್ಳಿತೆರೆಗೆ ಬರುತ್ತಿರುವುದು ಖುಷಿ ಆಗುತ್ತಿದೆ. ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದೇನೆ ಎನ್ನುವ ನಂಬಿಕೆಯಿದೆ ಎಂದರು. ಅದೇ ಮಾತುಗಳನ್ನು ನಾಯಕಿ ಸೋನಲ್ ಪುನರುಚ್ಚರಿಸಿದರು. ಕರಿ ಸುಬ್ಬು ಹಾಗೂ ಛಾಯಾಗ್ರಾಹಕ ಸುಜ್ಞಾನ್ ಮೂರ್ತಿ ಕಾರ್ ರೇಸ್ ಕತೆ ಹೇಳಿದರು. ‘ಚಿತ್ರದಲ್ಲಿ ಸುಮಾರು ೨೫ ನಿಮಿಷಗಳಷ್ಟು ಅವಧಿಯಲ್ಲಿ ಕಾರ್ ರೇಸ್ ಬರುತ್ತದೆ. ಇದು ಬೆಂಗಳೂರು ಟು ಮೈಸೂರು ನಡುವೆ ಸಾಗುವ ರೇಸ್. ಇದೇ ಮೊದಲ ಬಾರಿಗೆ ವಾಕ್ಸವೋಗನ್ ಕಂಪನಿ ಕಡೆಯಿಂದಲೇ ಅಂತಾರಾಷ್ಟ್ರೀಯ ಮಟ್ಟದ ರೇಸರ್ ಮನೀಶ್ ಮತ್ತು ಚಂದನ್ ಈ ರೇಸ್ನಲ್ಲಿ ಭಾಗಿಯಾಗಿದ್ದರು’ ಎಂದರು.