ಬೆಂಗಳೂರು-ಮೈಸೂರು ರಸ್ತೇಲಿ ಡಾರ್ಲಿಂಗ್ ಕೃಷ್ಣ ಕಾರ್ ಓಡಿಸುವಾಗ ಹೊಳೆದ 'ವಜ್ರ'
ಮದರಂಗಿ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್' ಚಿತ್ರ ತೆರೆಗೆ/ ಚಿತ್ರದ ಕತೆ ಹೊಳೆದಿದ್ದೆ ಒಂದು ವಿಚಿತ್ರ ಸನ್ನಿವೇಶದಲ್ಲಿ/ ದಾರಿ ಮಧ್ಯೆ ಹೊಳೆದ ಕತೆ ಇಂದು ಸಿನಿಮಾ
ಮದರಂಗಿ ಕೃಷ್ಣ ನಾಯಕ ನಟನಾಗಿ ಜನರ ಮನಸ್ಸನ್ನು ತಲುಪಿದ್ದಾಯಿತು. ಸ್ವತಃ ಅವರೇ ಮೊದಲ ಬಾರಿ ಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ 'ಲವ್ ಮಾಕ್ಟೇಲ್' ಇಂದು ಬಿಡುಗಡೆ ಆಗಿದೆ. ಅದರೆ ಇದು ಶುರುವಾಗಿದ್ದು ಹೇಗೆ?ಇಲ್ಲಿದೆ ಲವ್ ಮಾಕ್ಟೇಲ್ ಹಿಂದಿನ ಕಥೆ..!
ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ, ಜಾಕಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, 'ಹುಡುಗರು' ಸಿನಿಮಾದಲ್ಲಿ ಸಹನಟರಾಗಿ ಗುರುತಿಸಿಕೊಂಡು 'ಕೃಷ್ಣ ರುಕ್ಕು' ಧಾರಾವಾಹಿ ಮೂಲಕ ಹೆಸರು ಗಳಿಸಿ, 'ಮದರಂಗಿ' ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಗಟ್ಟಿ ನೆಲೆಯೂರಿದರು. ಅದರೆ ಅದಾದ ನಂತರ ಹಲವು ಚಿತ್ರಗಳ ಸೋಲು ಅವರನ್ನು ಹತಾಶರನ್ನಾಗಿ ಮಾಡಿದ್ದೂ ಇದೆ. ಮುಂದೇನು ಅನ್ನೋ ಪ್ರಶ್ನೆ ಅವರನ್ನು ಕಾಡಿದ್ದು ಇದೆ..! ಇಂತಹ ಹತಾಶೆಯ ಸಂದರ್ಭದಲ್ಲಿ ನಡೆದ ಘಟನೆ ಇಲ್ಲಿದೆ.
ಒಂದು ವರ್ಷದ ಹಿಂದೆ ಕೃಷ್ಣ ಕಾರಿನಲ್ಲಿ ಮೈಸೂರು ಬೆಂಗಳೂರಿಗೆ ಆಗಮಿಸುತ್ತಿದ್ದರು. ಬಿಡದಿಯಲ್ಲಿ ತಟ್ಟೆ ಇಡ್ಲಿ ತಿನ್ನುವ ಅಭ್ಯಾಸ. ಹೀಗೆ ಇಡ್ಲಿ ತಿನ್ನಬೇಕಾದರೆ ಥಟ್ಟನೆ ಒಂದು ಕಥೆ ಎಳೆ ಹೊಳೆಯಿತಂತೆ! ಚೆನ್ನಾಗಿದೆ ಅನ್ಸುತ್ತೆ! ತಕ್ಷಣವೇ ಫ್ರೆಂಡ್ ಮಿಲನಾ ನಾಗರಾಜ್ ಅವರಿಗೆ ಫೋನ್ ಮಾಡಿ ನನಗೆ ಏನೋ ಒಂದು ಹೊಳೆದಿದೆ ಬರ್ಕೊಳಿ ಅಂತ ಹೇಳಿದ್ದಾರೆ. ಮಿಲನಾಗೂ ಇಂಟರೆಸ್ಟಿಂಗ್ ಅನ್ನಿಸಿದೆ..!
ಬೆಂಗಳೂರಿಗೆ ಮರಳಿದವರೇ ಬರೆಯಲು ಕೂತಿದಾರೆ. ಒಂದು ತಿಂಗಳ ಅವಧಿಯಲ್ಲಿ ಕಥೆ ರೆಡಿಯಾಗಿದೆ! ಹೀಗೆ ಮಾರ್ಗ ಮಧ್ಯೆ ಹೊಳೆದ ಒಂದು ಒನ್ಲೈನ್ ಸ್ಟೋರಿಯೇ ಈಗ 'ಲವ್ ಮಾಕ್ಟೇಲ್' ಆಗಿ ತೆರೆಗೆ ಬಂದಿದೆ.
ಇದೇ ವೇಳೆ ಪುನಿತ್ ರಾಜ್ ಕುಮಾರ್ ಅಭಿನಯದ 'ಹುಡುಗರು' ಸಿನಿಮಾದಲ್ಲಿ ಚಾನ್ಸ್ ಸಿಕ್ಕ ಬಗ್ಗೆ, ಅವರು ಅನುಭವಿಸಿದ ಕಷ್ಟಗಳು, ಅವರ ಬಾಲ್ಯದ ಲವ್ ಸ್ಟೋರಿ ಇನ್ನೂ ಅನೇಕ ಕುತೂಹಲಕಾರಿ ವಿಷಯಗಳನ್ನು ಇದೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.