ಕೆಲವು ನಟರು ಬಿಲ್ಡಪ್ಗಾಗಿ ತಾವೇ ಶಾಟ್ ತೆಗೆಸಿಕೊಳ್ಳುತ್ತಾರೆ!
ರಂಗನಾಯಕ ಟೀಸರ್ ಬಿಡುಗಡೆ ಸಂದರ್ಭ ನಿರ್ದೇಶಕರ ಪರ ಹೇಳಿಕೆ ನೀಡಿದ ಜಗ್ಗೇಶ್
‘ಕಲಾವಿದರಿಗೆ ಬೀಳುವ ಒಂದೊಂದು ಚಪ್ಪಾಳೆಯ ಹಿಂದೆಯೂ ಒಬ್ಬ ನಿರ್ದೇಶಕನಿರುತ್ತಾನೆ. ಅವನಿಗೆ ಸಂಪೂರ್ಣ ಸ್ವತಂತ್ರ ನೀಡಿದರೆ ಅವನು ಇಡೀ ಸಿನಿಮಾ ಗೆಲ್ಲಿಸುತ್ತಾನೆ. ಕಲಾವಿದರನ್ನು ಮೇಲೆತ್ತುತ್ತಾನೆ. ಆದರೆ ಇಂದು ಕೆಲವು ನಟರು ತಮ್ಮ ತಮ್ಮ ಬಿಲ್ಡಪ್ಗಳಿಗಾಗಿ ತಾವೇ ಶಾಟ್ಗಳನ್ನು ತೆಗೆಸಿಕೊಳ್ಳುತ್ತಾರೆ. ನಿರ್ದೇಶನದಲ್ಲಿ ಮೂಗು ತೂರಿಸುತ್ತಾರೆ. ದಯಮಾಡಿ ಈ ರೀತಿ ಮಾಡದೇ ನಿರ್ದೇಶಕನಿಗೆ ಸ್ವತಂತ್ರ ನೀಡಿ’ ಇದು ಜಗ್ಗೇಶ್ ಕಲಾವಿದರಿಗೆ ಮಾಡಿಕೊಂಡ ಮನವಿ.
10 ವರ್ಷದ ನಂತರ ಒಂದಾದ ಜಗ್ಗೇಶ್-ಗುರು; ಬರಲಿದೆ ‘ರಂಗನಾಯಕ’
ಗುರುಪ್ರಸಾದ್ ಮತ್ತು ಜಗ್ಗೇಶ್ ಮೂರನೇ ಬಾರಿಗೆ ಒಂದಾಗಿ ‘ರಂಗನಾಯಕ’ ಚಿತ್ರ ಮಾಡುತ್ತಿದ್ದು, ವಿಜಯದಶಮಿಯಂದು ಟೀಸರ್ ಬಿಡುಗಡೆ ಮಾಡಿಕೊಂಡಿತು ಚಿತ್ರತಂಡ. ಈ ವೇಳೆ ಮಾತನಾಡಿದ ಜಗ್ಗೇಶ್ ‘ಡಾ. ರಾಜ್ ಕುಮಾರ್ ಅವರು ಯಾವಾಗಲೂ ನಿರ್ದೇಶಕರಿಗೆ ಬೆಲೆ ಕೊಡಿ. ಅವರು ಹೇಳಿದ್ದನ್ನು ಕಲಾವಿದರು ಮಾಡಬೇಕು ಎನ್ನುತ್ತಿದ್ದರು. ಅದೇ ರೀತಿ ನಾವುಗಳು ನಿರ್ದೇಶಕರು ಹೇಳಿದ ಹಾಗೆ ನಟಿಸಬೇಕು. ಅವನು ನಮ್ಮನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾನೆ.
ಅದೇ ನಂಬಿಕೆ ಮೇಲೆ ಎಲ್ಲಾ ವಿರಸಗಳನ್ನೂ ಮರೆತು ಗುರುಪ್ರಸಾದ್ ಜೊತೆಗೆ ಒಂದಾಗಿದ್ದೇನೆ. ಅವರು ಅರ್ಧ ಪಳಗಿದ ಆನೆ ರೀತಿ. ಪೂರ್ತಿ ಪಳಗಿದರೆ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಮಾಡುತ್ತಾರೆ. ‘ಮಠ’, ‘ಎದ್ದೇಳು ಮಂಜುನಾಥ’ ರೀತಿಯೇ ಒಳ್ಳೆಯ ಚಿತ್ರವನ್ನು ನಾವು ಕೊಡುತ್ತೇವೆ’ ಎಂದು ಹೇಳಿಕೊಂಡರು.