'ಅಪನಗದೀಕರಣ ವೇಳೆ ಮೋದಿ ಸಚಿವರನ್ನು ಕೂಡಿ ಹಾಕಿದ್ದರು'
ಅಪನಗದೀಕರಣ ವೇಳೆ ಮೋದಿ ಸಚಿವರನ್ನು ಕೂಡಿ ಹಾಕಿದ್ದರು ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ನವದೆಹಲಿ[ಮೇ.18]: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಅಪನಗದೀಕರಣ ನಿರ್ಧಾರ ಕುರಿತು ಘೋಷಣೆ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ದರ್ಜೆ ಸಚಿವರನ್ನು 7 ರೇಸ್ಕೋರ್ಸ್ ರಸ್ತೆಯ ನಿವಾಸದಲ್ಲಿ ಕೂಡಿ ಹಾಕಿದ್ದರು. ಇದು ನಿಜ ಎಂದು ಹೇಳಿದ್ದಾರೆ. ಅಲ್ಲದೆ ನನಗೂ ಎಸ್ಪಿಜಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದನ್ನು ಅವರೇ ಹೇಳಿದ್ದಾರೆ ಎಂದು ಹಿಮಾಚಲಪ್ರದೇಶದಲ್ಲಿ ನಡೆದ ಚುನಾವಣಾ ರಾರಯಲಿಯೊಂದರಲ್ಲಿ ತಿಳಿಸಿದ್ದಾರೆ.
ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಪ್ರಧಾನಿ ಮೋದಿ ತಮ್ಮ ಸಹೋದ್ಯೋಗಿ ಕ್ಯಾಬಿನೆಟ್ ಸಚಿವರನ್ನು ತಮ್ಮ ಮನೆಯಲ್ಲಿ ಕೂಡಿಟ್ಟಿದ್ದರು ಎಂದು ಹೊಸ ಆರೋಪ ಮಾಡಿದ್ದಾರೆ. ಈ ಕುರಿತು ಹಿಮಾಚಲ ಪ್ರದೇಶದಲ್ಲಿ ರಾರಯಲಿಯಲ್ಲಿ ಮಾತನಾಡಿದ ಅವರು ಅಮಾನ್ಯೀಕರಣದ ಘೋಷಣೆ ವೇಳೆ ಮೋದಿ ಅವರ ಸರ್ಕಾರಿ ನಿವಾಸವಾದ 7 ರೇಸ್ಕೋರ್ಸ್ ರಸ್ತೆಯಲ್ಲಿ ಎಲ್ಲ ಕ್ಯಾಬಿನೆಟ್ ಸಚಿವರನ್ನು ಕೂಡಿ ಹಾಕಲಾಗಿತ್ತು. ನಮ್ಮ ಮನೆಗೂ ಎಸ್ಪಿಜಿ ಭದ್ರತೆ ಹಾಕಲಾಗಿತ್ತು. ಈ ವಿಷಯ ಎಸ್ಪಿಜಿ ಸಿಬ್ಬಂದಿಗಳಿಂದಲೇ ತಿಳಿಯಿತು ಎಂದಿದ್ದಾರೆ.
ಪ್ರಧಾನಿ ಮೋದಿ ತಮ್ಮದೇ ಆದ ಭ್ರಮಾ ಜಗತ್ತಿನಲ್ಲಿದ್ದಾರೆ. ಬಾಲಾಕೋಟ್ ಏರ್ಸ್ಟೆ್ರೖಕ್ ವೇಳೆ ಮಳೆ ಮೋಡಗಳಿಂದ ನಮಗೆ ಅನುಕೂಲವಾಗಲಿದೆ. ಪಾಕ್ ರಾಡಾರ್ ಕಣ್ಣಿಗೆ ಕಾಣದಂತೆ ಕಾರ್ಯಚರಣೆಗೆ ಇದು ಸಹಾಯ ಮಾಡಲಿದೆ ಎಂದು ಹೇಳಿಕೆ ನೀಡಿರುವ ಪ್ರಧಾನಿಗಳ ಜ್ಞಾನವನ್ನು ಇದು ತಿಳಿಸಿಕೊಡುತ್ತದೆ. ಜನರ ಸಮಸ್ಯೆಗಳನ್ನು ಆಲಿಸದ ಅವರ ಮಾತನ್ನು ಯಾರು ಕೇಳುತ್ತಾರೆ ಎಂದು ಕುಟುಕಿದರು. ನಮ್ಮ ‘ನ್ಯಾಯ್’ ಯೋಜನೆ ಅನುಷ್ಠಾನ ನಿಶ್ಚಿತ. ಕಳೆದ ಐದು ವರ್ಷಗಳ ಅವಧಿಯನ್ನು ಬಿಜೆಪಿ ವ್ಯರ್ಥವಾಗಿ ಕಳೆದು ದೇಶದ ಜನರಿಗೆ ಮೋಸವೆಸಗಿದೆ ಎಂದು ದೂರಿದರು.
ಹಿಮಾಚಲ ಪ್ರದೇಶದ ಎಲ್ಲ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಮೇ.19ರಂದು 7ನೇ ಹಂತದಲ್ಲಿ ಚುನಾವಣೆ ನಡೆಯಲಿದೆ, ಮೇ.23ರಂದು ಫಲಿತಾಂಶ ತಿಳಿಯಲಿದೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.