ಬ್ಯಾಲೆಟ್ ಶೀಟ್ನಲ್ಲಿ ನಿಖಿಲ್ ಹೆಸರೇಕೆ ಫಸ್ಟ್?: ಕೊನೆಗೂ ಬಾಯ್ಬಿಟ್ಟ ಡಿಸಿ!
ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ರಣ ಕಣವಾಗಿದೆ. ಸುಮಲತಾ ಎಂಟ್ರಿ ಬಳಿಕ ಮಂಡ್ಯ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದ್ದು, ನಿಖಿಲ್ ಹಾಗೂ ಸುಮಲತಾ ನಡುವೆ ಗೆಲುವಿಗಾಗಿ ಭಾರೀ ಪೈಪೋಟಿ ಆರಂಭವಾಗಿದೆ. ಸದ್ಯ ನಿಖಿಲ್ ಕುಮಾರಸ್ವಾಮಿಗೆ ಬ್ಯಾಲೆಟ್ ಶೀಟ್ ನಲ್ಲಿ ಮೊದಲ ಸ್ಥಾನ ನೀಡಿರುವ ವಿಚಾರ ಭಾರೀ ವಿವಾದ ಸೃಷ್ಟಿಸಿದ್ದು, ಮಂಡ್ಯ ಡಿಸಿ ಇದಕ್ಕೇನು ಕಾರಣ ಎಂಬುವುದನ್ನು ಬಹಿರಂಗಪಡಿಸಿದ್ದಾರೆ
ಮಂಡ್ಯ[ಏ.01]: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ 1ನೇ ಕ್ರಮಸಂಖ್ಯೆ ನೀಡಿರುವ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡುತ್ತಾ, ಕನ್ನಡ ವರ್ಣಮಾಲೆ ಪ್ರಕಾರ ನಿಖಿಲ್ ಕುಮಾರಸ್ವಾಮಿಗೆ 1ನೇ ಸ್ಥಾನ ನೀಡಲಾಗಿದೆ ಎಂದು ತಿಳಿಸಿದೆ.
ಕನ್ನಡ ವರ್ಣಮಾಲೆ ಪ್ರಕಾರವೇ ಅಭ್ಯರ್ಥಿಗಳಿಗೆ ಕ್ರಮಸಂಖ್ಯೆ ನೀಡಲಾಗುತ್ತದೆ. ಆರಂಭದಲ್ಲಿ ರಾಷ್ಟ್ರೀಯ/ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳಿಗೆ ಕ್ರಮಸಂಖ್ಯೆ ನೀಡಲಾಗುತ್ತದೆ. ಕನ್ನಡ ವರ್ಣಮಾಲೆಯಲ್ಲಿ ಇ ಕಾರ ಪದವಾದ ‘ನಿ’ ಅಕ್ಷರ ಮೊದಲು ಬರುತ್ತದೆ. ಅನುಸ್ವಾರ ಪದವಾದ ‘ನಂ’ ಅಕ್ಷರ ಕೊನೆಯಲ್ಲಿ ಬರುತ್ತದೆ. ಹೀಗಾಗಿಯೇ ಜೆಡಿಎಸ್ ಅಭ್ಯರ್ಥಿ ನಿಖಿಲ್ಗೆ 1, ಬಿಎಸ್ಪಿ ಅಭ್ಯರ್ಥಿ ನಂಜುಂಡಸ್ವಾಮಿಗೆ 2ನೇ ಕ್ರಮಸಂಖ್ಯೆ ನೀಡಲಾಗಿದೆ ಎಂದಿದ್ದಾರೆ.
ಯಾವುದೇ ಇನಿಷಿಯಲ್ ಇಲ್ಲದ ಸುಮಲತಾ ಹೆಸರನ್ನು ಆದ್ಯತಾ ಪಟ್ಟಿಯಲ್ಲಿ ಮೊದಲಿಗೆ ತರಲಾಗಿದೆ. ನಂತರ ಎ.ಸುಮಲತಾ, ಬಳಿಕ ಎಂ.ಸುಮಲತಾ, ತದನಂತರ ಪಿ. ಸುಮಲತಾಗೆ ಸ್ಥಾನ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ. ನಿಖಿಲ್ಗೆ 1ನೇ ಕ್ರಮಸಂಖ್ಯೆ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...