ಕಾಂಗ್ರೆಸ್ ನಿಂದ ಸುಮಲತಾಗೆ ಸಿಗುತ್ತಿದೆ ಬೆಂಬಲ !
ಲೋಕಸಭಾ ಚುನಾವಣೆ ಹವಾ ಜೋರಾಗುತ್ತಿದೆ. ಮಂಡ್ಯ ಅಭ್ಯರ್ಥಿ ಸುಮಲತಾ ಪ್ರಚಾರವೂ ಕಾವೇರುತ್ತಿದ್ದು, ಇದೇ ವೇಳೆ ಸುಮಲತಾ ಕಾಂಗ್ರೆಸ್ ಬೆಂಬಲ ಬಗ್ಗೆ ಮಾತಾಡಿದ್ದಾರೆ.
ಮದ್ದೂರು: ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ನನ್ನೊಂದಿಗೆ ಬರುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದವರಿಗೆ ಮುಜಗರವಾಗುತ್ತಿದೆಯೋ, ಬೇಜಾರಾಗುತ್ತಿದೆಯೋ ಅಥವಾ ನಾವು ತಪ್ಪು ಮಾಡಿದೆವು ಎನ್ನುವ ಭಾವನೆ ಮೂಡಿದೆಯೋ ಎನ್ನುವುದು ಗೊತ್ತಿಲ್ಲ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಮದ್ದೂರಿನ ವಿವಿಧೆಡೆ ಬುಧವಾರ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಯಾವುದನ್ನೂ ನಿರ್ಧಾರ ಮಾಡಿಲ್ಲ. ಹೀಗಾಗಿಯೇ ಅವರು ನೋವಿನಲ್ಲಿದ್ದಾರೆ. ನಾವೇನು ಯಾರನ್ನೂ ಬಲವಂತದಿಂದ ಪ್ರಚಾರಕ್ಕೆ ಕರೆತರುತ್ತಿಲ್ಲ. ಅವರೇ ಪ್ರೀತಿ-ವಿಶ್ವಾಸದಿಂದ ಬರುತ್ತಿದ್ದಾರೆ. ನನ್ನನ್ನು ಬೆಂಬಲಿಸಲು ಕಾರ್ಯಕರ್ತರು ನಿರ್ಧಾರ ಮಾಡಿದ್ದಾರೆ ಎಂದರು.
ಅಂಬರೀಷ್ ಯಾವತ್ತಿಗೂ ಪಕ್ಷಾತೀತವಾಗಿದ್ದರು. ಅವರನ್ನು ಎಲ್ಲಾ ಪಕ್ಷದವರೂ ಪ್ರೀತಿಸುತ್ತಿದ್ದರು. ಇದೇ ಕಾರಣಕ್ಕಾಗಿಯೇ ಪ್ರಚಾರದಲ್ಲಿ ಎಲ್ಲ ಪಕ್ಷದಲ್ಲಿರುವ ಅವರ ಅಭಿಮಾನಿಗಳು ಒಂದು ಕೈಯ್ಯಲ್ಲಿ ಕಾಂಗ್ರೆಸ್ ಬಾವುಟ, ಇನ್ನೊಂದು ಕೈಯ್ಯಲ್ಲಿ ಬಿಜೆಪಿ ಬಾವುಟ ಹಿಡಿದುಕೊಂಡು ಬರುತ್ತಿದ್ದಾರೆ. ಜೆಡಿಎಸ್ನವರನ್ನು ಒಳಗೊಂಡು ಎಲ್ಲಾ ಪಕ್ಷದವರು ತಮಗೆ ಓಟು ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗದೆ, ಕಿರೀಟ ಮಾರಾಟ ಮಾಡಿಲ್ಲ:
ಅಭಿಮಾನಿಗಳು ನೀಡಿರುವ ಬೆಳ್ಳಿಗದೆ, ಚಿನ್ನದ ಕಿರೀಟಗಳನ್ನು ಮಾರಾಟ ಮಾಡಿ ಆ ಹಣದಿಂದ ಸುಮಲತಾ ಆಭರಣ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ದಾನಶೂರ ಕರ್ಣನ ಮನೆ. ಅಂಬರೀಷ್ ಅಭಿಮಾನದಿಂದ ಬಂದ ಚಿನ್ನದ ಕಿರೀಟ, ಬೆಳ್ಳಿಗದೆಗಳನ್ನು ಮಾರಾಟ ಮಾಡುವಷ್ಟುದರಿದ್ರ ನನಗಂತೂ ಬಂದಿಲ್ಲ ಎಂದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...