ಮತ ಎಣಿಕೆ : ಬೆಂಗಳೂರಿನ ಸಂಚಾರ ಮಾರ್ಗದಲ್ಲಿ ಬದಲಾವಣೆ
ಲೋಕಸಭಾ ಚುಣಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 23 ರಂದು ಹಲವು ಸಂಚಾರ ಮಾರ್ಗಗಳ ಬದಲಾವಣೆ ಮಾಡಲಾಗುತ್ತಿದೆ.
ಬೆಂಗಳೂರು : ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ನಗರದ ಮೂರು ಮತ ಎಣಿಕೆ ಕೇಂದ್ರ ಬಳಿ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸಲಿದ್ದಾರೆ. ಈ ಕಾರಣಕ್ಕೆ ಮತ ಎಣಿಕೆ ಕೇಂದ್ರ ಸುತ್ತಮುತ್ತ ಸಂಚಾರ ವ್ಯವಸ್ಥೆ ಬದಲಾಯಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.
ಮೌಂಟ್ ಕಾರ್ಮೆಲ್ ಕಾಲೇಜು ಕೇಂದ್ರ (ಬೆಂಗಳೂರು ಕೇಂದ್ರ ಕ್ಷೇತ್ರ): ಹಳೆ ಹೈಗ್ರೌಂಡ್ಸ್ ಜಂಕ್ಷನ್ನಿಂದ ವಸಂತ ನಗರ ಕೆಳ ಸೇತುವೆ, ಎಂ.ವಿ.ಜಯರಾಮ್ ರಸ್ತೆ, ರೇಸ್ ಕೋರ್ಸ್ ರಸ್ತೆಯ ಎರಡು ಬದಿ, ಟಿ.ಚೌಡಯ್ಯ, ವಿಂಡ್ಸನ್ ಮ್ಯಾನರ್ ಹಾಗೂ ಕನ್ನಿಂಗ್ ಹ್ಯಾಮ್ ರಸ್ತೆ ಲಿ.ಮೆರಿಡಿಯನ್ ಹೋಟೆಲ್ ಕಡೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಸೇಂಟ್ ಜೋಸೆಫ್ ಇಂಡಿಯನ್ ಶಾಲೆ (ಬೆಂಗಳೂರು ಉತ್ತರ ಕ್ಷೇತ್ರ): ಮಲ್ಯ ಆಸ್ಪತ್ರೆ, ಆರ್ಆರ್ಎಂಆರ್ ರಸ್ತೆ, ಕಸ್ತೂರ ಬಾ ರಸ್ತೆ ಹಾಗೂ ವಿಠ್ಠಲ್ ಮಲ್ಯ ರಸ್ತೆ ಕಡೆಯಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ.
ಎಸ್ಎಸ್ಎಂಆರ್ವಿ ಕಾಲೇಜು (ಜಯನಗರ) (ಬೆಂಗಳೂರು ದಕ್ಷಿಣ ಕ್ಷೇತ್ರ):
ಜಯನಗರ ಸಾರ್ವಜನಿಕ ಆಸ್ಪತ್ರೆ ಸಮೀಪದ 26ನೇ ಮುಖ್ಯರಸ್ತೆ ವೈಶಾಲಿ ಜಂಕ್ಷನ್, ಜಯನಗರದ ಟಿ ಬ್ಲಾಕ್ನ 36ನೇ ಅಡ್ಡರಸ್ತೆ, ಜಯನಗರ 46ನೇ ಅಡ್ಡರಸ್ತೆಯಿಂದ ತಿಲಕನಗರ ಮುಖ್ಯರಸ್ತೆ ಸೇರಿದಂತೆ ಎಸ್ಎಸ್ಎಂಆರ್ವಿ ಕಾಲೇಜು ಸುತ್ತಮುತ್ತ ವಾಹನ ನಿಲುಗಡೆ ನಿರ್ಬಂಧಿಲಾಗಿದೆ.
ಇಲ್ಲಿ ವಾಹನ ನಿಲುಗಡೆಗೆ ಅವಕಾಶ : ವಿಕಾಸಸೌಧ ವಾಹನ ನಿಲುಗಡೆ ಪ್ರದೇಶ, ಕಂಠೀರವ ಕ್ರೀಡಾಂಗಣ, ಜಯನಗರದ ಟಿ ಬ್ಲಾಕ್ನ ಕಾರ್ಮೆಲ್ ಕಾನ್ವೆಂಟ್ ಗ್ರೌಂಡ್, ರಾಜಭವನ ಜಂಕ್ಷನ್ನಿಂದ ಟಿ.ಚೌಡಯ್ಯ ರಸ್ತೆ ರಸ್ತೆ, ವಸಂತ ನಗರ 8ನೇ ಮುಖ್ಯರಸ್ತೆಯ ಒಂದು ಬದಿ, ವಸಂತ ನಗರದ ಕೆಳ ಸೇತುವೆ ಸಮೀಪದ ಮುಖ್ಯ ಅರಮನೆ ರಸ್ತೆಯ ವಾಹನ ನಿಲುಗಡೆ ಪ್ರದೇಶ, ಜಯನಗರ ಟಿ ಬ್ಲಾಕ್ನ ಮೇವಾ ಕಾಲೇಜು ಹಾಗೂ ಕೆಎಸ್ಆರ್ಟಿಸಿ ಮೈದಾನದಲ್ಲಿ ವಾಹನ ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.