Asianet Suvarna News Asianet Suvarna News

ಎನ್ಇಪಿ 2020 ಅನುಷ್ಠಾನ: ಉನ್ನತ ಶಿಕ್ಷಣ ಸಚಿವರಿಂದ ಕಾಮನ್ ವೆಲ್ತ್ ಶಿಕ್ಷಣ ತಜ್ಞರ ಮುಂದೆ ಅನಾವರಣ

ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ-2020) ಅಳವಡಿಕೆಯಲ್ಲಿ ಹೇಗೆ  ಇಡೀ ಭಾರತದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ವಿವಿಧ ದೇಶಗಳ ಶೈಕ್ಷಣಿಕ ಹಿತಾಸಕ್ತಿದಾರರ ಮುಂದೆ ಗುರುವಾರ ಎಳೆಎಳೆಯಾಗಿ ಅನಾವರಣಗೊಳಿಸಿದರು.

Unveiling Of Nep 2020 Implementation At Commonwealth Education Specialists By Minister Of Higher Education gvd
Author
Bangalore, First Published May 20, 2022, 12:36 AM IST | Last Updated May 20, 2022, 12:36 AM IST

ಲಂಡನ್ (ಮೇ.19): ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ-2020) ಅಳವಡಿಕೆಯಲ್ಲಿ ಹೇಗೆ  ಇಡೀ ಭಾರತದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr Cn Ashwath Narayan) ಅವರು ವಿವಿಧ ದೇಶಗಳ ಶೈಕ್ಷಣಿಕ ಹಿತಾಸಕ್ತಿದಾರರ ಮುಂದೆ ಗುರುವಾರ ಎಳೆ ಎಳೆಯಾಗಿ ಅನಾವರಣಗೊಳಿಸಿದರು. ಇಲ್ಲಿನ ಥೇಮ್ಸ್ ನದಿ ದಂಡೆಯಲ್ಲಿರುವ ‘ಪಾರ್ಕ್ ಪ್ಲಾಜಾ ಲಂಡನ್ ರಿವರ್ ಬ್ಯಾಂಕ್’ ಹೋಟೆಲ್ ನಲ್ಲಿ ನಡೆದ ಕಾಮನ್‌ವೆಲ್ತ್ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗಿಸುವ ಮೂಲಕ ಸದೃಢ ಸಮಾಜ ನಿರ್ಮಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಮಾರ್ಗದರ್ಶನದಲ್ಲಿ ಹಲವಾರು ಉಪಕ್ರಮಗಳಿಗೆ ಚಾಲನೆ ಕೊಡಲಾಗಿದೆ ಎಂದು ವಿವರಿಸಿದರು.

‘ಇಂಟರ್ ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟ್ ಕಾರ್ಪೊರೇಷನ್’ ಸಂಸ್ಥೆ ಹಾಗೂ ‘ಬ್ರಿಡ್ಜ್ ಇಂಡಿಯಾ’ ಜೊತೆ ಸೇರಿ ಈ ಸಮಾವೇಶ ಏರ್ಪಡಿಸಿದ್ದವು. ಆಧುನಿಕ ವಿದ್ಯಮಾನಗಳಿಗೆ ತೆರೆದುಕೊಂಡ ಹಾಗೂ ಅದೇ ವೇಳೆ ಭಾರತೀಯ ಪರಂಪರೆಯಲ್ಲಿ ಬೇರುಬಿಟ್ಟ ಶಿಕ್ಷಣವನ್ನು ಯುವ ಜನಾಂಗಕ್ಕೆ ಕೊಡಬೇಕೆನ್ನುವುದು ಎನ್ಇಪಿ ಆಶಯವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿರುವ ವಿಶ್ವಾತ್ಮಕ ದೃಷ್ಟಿಯ ಭವಿಷ್ಯದ ಪೀಳಿಗೆಯನ್ನು ಸೃಷ್ಟಿಸಲಿದೆ ಎಂದು ಸಚಿವರು ಪ್ರತಿಪಾದಿಸಿದರು.

BJP core committee ಬಿಜೆಪಿ ಕೋರ್‌ ಕಮಿಟಿಯಲ್ಲಿ ಅಶ್ವತ್ಥ್, ಡಿವಿ ಸದಾನಂದ ಗೌಡ‌ ಗರಂ!

ಎನ್ಇಪಿಯನ್ನು ಪರಿಣಾಮಕಾರಿಯಾಗಿ ಅಳವಡಿಸಲು ಹೆಚ್ಚಿನ ಸಂಪನ್ಮೂಲ ಅಗತ್ಯವಿದೆ ಎಂಬುದು ನಿಜ. ಆದರೆ ಹಾಗೆಂದ ಮಾತ್ರಕ್ಕೆ ಈಗಿರುವ ಸಂಪನ್ಮೂಲದಲ್ಲಿ ಏನನ್ನೂ ಮಾಡಲಾಗುವುದಿಲ್ಲ ಎಂಬ ಭಾವನೆ ಸರಿಯಲ್ಲ. ಈಗಿರುವ ಸಂಪನ್ಮೂಲವನ್ನೇ ಪುನರ್ ಸಂಯೋಜನೆ ಮಾಡುವ ಮೂಲಕ ಹಾಗೂ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಎನ್.ಇ.ಪಿ. ಆಶಯಕ್ಕೆ ತಕ್ಕಂತೆ ಬೋಧನೆ-ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಿದೆ ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

ವಿದ್ಯಾರ್ಥಿ ಹಂತದಲ್ಲೇ ಕೌಶಲಗಳ ಕಲಿಕೆ, ಉದ್ಯಮಶೀಲತೆ, ಪ್ರಾಯೋಗಿಕ ಕಲಿಕೆ ಇತ್ಯಾದಿಗಳು ಒತ್ತು ಕೊಡಲಾಗುತ್ತಿದೆ. ಸಂಶೋಧಕರು, ಉದ್ದಿಮೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಒಟ್ಟಾಗಿ ಕಲೆತು ಪರಸ್ಪರರ ಅಗತ್ಯಗಳಿಗೆ ಅನುಗುಣವಾದ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಕ್ರಮವನ್ನು ರೂಪಿಸಲು ಗಮನ ಕೇಂದ್ರೀಕರಿಸಲಾಗಿದೆ. ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯ ಕೊಡುವುದರಿಂದ ಹಿಡಿದು ಜಾಗತಿಕ ಸ್ಪರ್ಧಾತ್ಮಕತೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವವರೆಗೆ ಎಲ್ಲಾ ಅಂಶಗಳನ್ನೂ ಪರಿಗಣಿಸಿ ಹೊಸ ಶಿಕ್ಷಣ ಕ್ರಮವನ್ನು ಕಟ್ಟಲಾಗುತ್ತಿದೆ ಎಂದು ಸಚಿವರು ಹೇಳಿದರು.

ಯುನೈಟೆಡ್ ಕಿಂಗ್ ಡಮ್ (ಯುಕೆ), ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸೇರಿದಂತೆ ವಿವಿಧ ಕಾಮನ್ ವೆಲ್ತ್ ದೇಶಗಳ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರು, ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎನ್ಇಪಿ ಅಳವಡಿಕೆಗೆ ಸಂಬಂಧಿಸಿದಂತೆ ಸಭಿಕರು ಕೇಳಿದ ಪ್ರಶ್ನೆಗಳಿಗೆ ಸಚಿವರು ವಿವರಣೆಗಳನ್ನು ಕೊಟ್ಟರು.

Karnataka Politics: ನನ್ನನ್ನು ಮುಟ್ಟಿದ ಡಿಕೆಶಿಗೆ ಅಯ್ಯೋಪಾಪ ಎನ್ನುವ ಸ್ಥಿತಿ: ಅಶ್ವತ್ಥ

ಇದೇ ಸಂದರ್ಭದಲ್ಲಿ ಸಚಿವರು ನವೆಂಬರ್ ತಿಂಗಳಲ್ಲಿ ನಡೆಯುವ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಬರುವಂತೆ ಪ್ರತಿನಿಧಿಗಳಿಗೆ‌ ಆಹ್ವಾನ‌ ನೀಡಿದರು. ಅಂತರರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶನ ಟಾಮ್ ಜೋಸೆಫ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು. ಇದೇ 22 ರಿಂದ ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಇಲ್ಲಿ ನಡೆಯಲಿರುವ ವಿಶ್ವ ಶಿಕ್ಷಣ ಸಮಾವೇಶ ನಡೆಯಲಿದ್ದು ಅದರಲ್ಲಿ ಕೂಡ ಸಚಿವರು ಭಾಗವಹಿಸಲಿದ್ದಾರೆ.

Latest Videos
Follow Us:
Download App:
  • android
  • ios