ರಂಗೋಲಿ ಕಲೆಯನ್ನೇ ಉಸಿರಾಗಿಸಿ ,ಅದರಲ್ಲೇ ಸಂಶೋಧನೆ ನಡೆಸಿ ತಮ್ಮ ಹೆಸರಿನ ಮುಂದೆ "ಡಾ."ಎಂಬ ವಿಶೇಷ ತಂದುಕೊಂಡಿದ್ದಾರೆ. ಏನಿದು ವಿಶೇಷ? ಯಾರು, ಏನು? ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಉಡುಪಿ, (ಜುಲೈ.14): ಯಾವುದೇ ಕಲೆಗೆ ಪದವಿಯ ಗರಿ ಸಿಕ್ಕಿದಾಗ, ಕಲಾವಿದನ ಕೀರ್ತಿ ಮತ್ತಷ್ಟು ಬೆಳಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು ತಮ್ಮ ಕ್ಷೇತ್ರದಲ್ಲಿ ಪಿ ಎಚ್ ಡಿ ಮಾಡುವ ಮೂಲಕ, ತಮ್ಮ ಮತ್ತು ತಾವು ಪ್ರತಿನಿಧಿಸುವ ಕಲೆಯ ಹಿರಿಮೆಯನ್ನು ಸಾರುತ್ತಾ ಬಂದಿದ್ದಾರೆ. ಉಡುಪಿಯಲ್ಲೊಬ್ಬ ಅಪರೂಪದ ಕಲಾವಿದೆ ತೀರಾ ಅಪರೂಪ ಎನ್ನಬಹುದಾದ ಕ್ಷೇತ್ರದಲ್ಲಿ ಪಿಎಚ್ ಡಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಹುತೇಕ ಎಲ್ಲರ ಮನೆ ಮುಂದೆಯೂ ರಂಗೋಲಿ ಕಾಣಸಿಗುತ್ತದೆ. ಪ್ರತಿಯೊಂದು ಮನೆಯ ಅಂಗಳದಲ್ಲಿ ರಂಗೋಲಿ ಹಾಕುವ ಮಹಿಳೆಯೂ ರಂಗೋಲಿ‌ ಕಲಾವಿದೆಯೇ.ಆದರೆ ರಂಗವಲ್ಲಿಯನ್ನು ಕೇವಲ ಕಲೆಯಾಗಿ ಮಾತ್ರವಲ್ಲ , ಜೀವನದ ಭಾಗವಾಗಿ ಸ್ವೀಕರಿಸಿ ,ಅದರಲ್ಲೇ ಅಧ್ಯಯನ ಮಾಡಿ ಅದನ್ನೇ ಉಸಿರಾಗಿಸಿಕೊಂಡವರು ಡಾ.ಭಾರತಿ ಮರವಂತೆ. 

ಹೌದು...ರಾಜ್ಯದ ಬೆರಳೆಣಿಕೆಯಷ್ಟು ಮಂದಿ ರಂಗೋಲಿ ಕಲೆಯಲ್ಲಿ ಡಾಕ್ಟರೇಟ್ ಸಾಧನೆ ಮಾಡಿದ್ದಾರೆ.ಅವರಲ್ಲಿ ಭಾರತಿ ಮರವಂತೆ ಕೂಡ ಒಬ್ವರು. ಅಂಗಳದ ಮೇಲೆ ಹಾಕುವ ರಂಗವಲ್ಲಿಯ ಕೀರ್ತಿ ಈ ಮೂಲಕ ಮುಗಿಲೆತ್ತರಕ್ಕೆ ಏರಿದಂತಾಗಿದೆ.

ಸದ್ಯ ಹಾವೇರಿಯಲ್ಲಿ ಉಪನ್ಯಾಸಕ ವೃತ್ತಿ ಮಾಡುತ್ತಿರುವ ಡಾ.ಭಾರತಿ ಮರವಂತೆ ,ರಂಗೋಲಿಯಲ್ಲಿ ಹತ್ತಾರು ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡವರು. ರಂಗೋಲಿ ಮತ್ತು ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಡಾ.ಭಾರತಿ, ಉಡುಪಿ ಜಿಲ್ಲೆಯ ಪುಟ್ಟ ಗ್ರಾಮ ಮರವಂತೆಯವರು. 

ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ. ಮತ್ತು 'ಕರಾವಳಿ ಕರ್ನಾಟಕದಲ್ಲಿ ರಂಗೋಲಿ ಕಲೆ' ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದದ್ದು ಸಣ್ಣ ಸಾಧನೆಯೇನಲ್ಲ. ಡಾ.ಭಾರತಿ ಮರವಂತೆಯವರ ಕೈಯಲ್ಲಿ ರೂಪುಗೊಳ್ಳುವ ರಂಗೋಲಿಗಳು ಅಕ್ಷರಶಃ ನೆಲದ ಮೇಲೆ ಅರಳುವ ಅಪರೂಪದ ಕಲಾಕೃತಿಗಳಾಗಿವೆ. ರಂಗೋಲಿಗೆ ಹಚ್ಚುವ ಬಣ್ಣಕ್ಕೆ ಇವರು ಜೀವ ತುಂಬುತ್ತಾರೆ.

ಪ್ರತೀ ಘಟನಾವಳಿಗಳಿಗೂ ಇವರು ರಂಗೋಲಿ ಮೂಲಕ ಮಿಡಿಯುತ್ತಾರೆ.ಕೊರೋನಾ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಮತ್ತದರ ವಿರಾಟ್ ಸ್ವರೂಪವನ್ನು ರಂಗೋಲಿಯಲ್ಲಿ ಹಿಡಿದಿಡುವ ಪ್ರಯತ್ನ‌ ಮಾಡಿದ್ದುಂಟು.ವಿವಿಧ ಘಟನಾವಳಿಗಳನ್ನು ಮತ್ತು ಸಾಧಕರುಗಳನ್ನು ರಂಗೋಲಿಯಲ್ಲಿ ಹಿಡಿದಿಟ್ಟ ಹೆಗ್ಗಳಿಕೆ ಇವರದ್ದು.

ನೀವು ನಂಬಲಿಕ್ಕಿಲ್ಲ ,ರಂಗೋಲಿ ತರಬೇತಿ ಮತ್ತು ಕಾರ್ಯಾಗಾರಗಳ ಮೂಲಕ ಇವರು ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ರಂಗೋಲಿಯ ಪಾಠ ಮಾಡಿದ್ದಾರೆ. ಒಟ್ಟಾರೆ ಹೇಳುವುದಾದರೆ ರಂಗೋಲಿ ಕಲೆಯನ್ನೇ ಉಸಿರಾಗಿಸಿ ,ಅದರಲ್ಲೇ ಸಂಶೋಧನೆ ನಡೆಸಿ ತಮ್ಮ ಹೆಸರಿನ ಮುಂದೆ "ಡಾ."ಎಂಬ ವಿಶೇಷ ತಂದುಕೊಂಡಿದ್ದಾರೆ.

ಸಾಕಷ್ಟು ಪ್ರಶಸ್ತಿ ಮತ್ತು ಗೌರವಗಳು ಇವರನ್ನು ಅರಸಿಕೊಂಡು ಬಂದಿವೆ.ಇವರ ಸಾಧನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ...