Asianet Suvarna News Asianet Suvarna News

ಕೇಂದ್ರೀಯ ಪಠ್ಯದಿಂದ ಬಾಬ್ರಿ ಧ್ವಂಸ, ಗೋದ್ರಾ ಹತ್ಯಾಕಾಂಡಕ್ಕೆ ಕೊಕ್‌..!

11ನೇ ತರಗತಿಯ ಅಧ್ಯಾಯ 8 ರಲ್ಲಿ, ಭಾರತೀಯ ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆಗಳು ಪಾಠದಲ್ಲಿನ ‘ಅಯೋಧ್ಯೆ ಬಾಬ್ರಿ ಧ್ವಂಸ’ ಹಾಗೂ ಹಿಂದುತ್ವ ರಾಜಕೀಯದ ಉಲ್ಲೇಖಗಳನ್ನು ಕೈಬಿಡಲಾಗಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕಾರಣ ಅದನ್ನು ಕೈಬಿಡಲಾಗಿದೆ.

NCERT Drops Controversial Text grg
Author
First Published Apr 6, 2024, 6:33 AM IST

ನವದೆಹಲಿ(ಏ.06):  ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ, ಗುಜರಾತ್ ಗಲಭೆಯಲ್ಲಿ ಮುಸ್ಲಿಮರ ಹತ್ಯೆ ಮತ್ತು ಹಿಂದುತ್ವದ ಉಲ್ಲೇಖಗಳನ್ನು ಕೈಬಿಡುವುದು ಮತ್ತು ಮಣಿಪುರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಉಲ್ಲೇಖ- ಸೇರಿದಂತೆ ಸಿಬಿಎಸ್ಸಿಯಂಥ ಕೇಂದ್ರೀಯ ಪಠ್ಯಕ್ರಮದ ಹಲವು ವಿವಾದಾತ್ಮಕ ಪಾಠ/ಉಲ್ಲೇಖಗಳಿಗೆ ಎನ್‌ಸಿಇಆರ್‌ಟಿ ತಿಲಾಂಜಲಿ ನೀಡಿದೆ. ಈ ಪಾಠಗಳು 11 ಮತ್ತು 12 ನೇ ತರಗತಿಗಳ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಲ್ಲಿ ಇದ್ದವು. ಅದರಲ್ಲಿ ಬದಲಾವಣೆ ಮಾಡಲಾಗಿದೆ.

ಏನು ಬದಲಾವಣೆ?:

11ನೇ ತರಗತಿಯ ಅಧ್ಯಾಯ 8 ರಲ್ಲಿ, ಭಾರತೀಯ ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆಗಳು ಪಾಠದಲ್ಲಿನ ‘ಅಯೋಧ್ಯೆ ಬಾಬ್ರಿ ಧ್ವಂಸ’ ಹಾಗೂ ಹಿಂದುತ್ವ ರಾಜಕೀಯದ ಉಲ್ಲೇಖಗಳನ್ನು ಕೈಬಿಡಲಾಗಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕಾರಣ ಅದನ್ನು ಕೈಬಿಡಲಾಗಿದೆ.

ನಾಡಗೀತೆ ಖಾಸಗಿ ಶಾಲೆಗಳಿಗೂ ಕಡ್ಡಾಯ: ಸರ್ಕಾರ

ಇನ್ನು11 ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೆಕ್ಯುಲರಿಸಂನ 8ನೇ ಅಧ್ಯಾಯದಲ್ಲಿ ‘2002 ರಲ್ಲಿ ಗುಜರಾತ್‌ನಲ್ಲಿ ಗೋಧ್ರಾ ನಂತರದ ಗಲಭೆಗಳ ಸಮಯದಲ್ಲಿ 1 ಸಾವಿರಕ್ಕೂ ಹೆಚ್ಚು ಜನರು, ಹೆಚ್ಚಾಗಿ ಮುಸ್ಲಿಮರನ್ನು ಕಗ್ಗೊಲೆ ಮಾಡಲಾಗಿತ್ತು’ ಎಂದು ಬರೆಯಲಾಗಿತ್ತು. ಅದನ್ನು ಈಗ ‘2002ರಲ್ಲಿ ಗುಜರಾತ್‌ನಲ್ಲಿ ಗೋಧ್ರಾ ನಂತರದ ಗಲಭೆಯಲ್ಲಿ 1,000 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು’ ಎಂದು ಬದಲಿಸಲಾಗಿದೆ. ಇದಕ್ಕೆ ಸಮಜಾಯಿಷಿ ನೀಡಿರುವ ಎನ್‌ಸಿಇಆರ್‌ಟಿ, ‘ಯಾವುದೇ ಗಲಭೆಗಳಲ್ಲಿ ಕೇವಲ ಒಂದು ಸಮುದಾಯ ಬಳಲಲು ಸಾಧ್ಯವಿಲ್ಲ’ ಎಂದಿದೆ. ‘ಪ್ರಜಾಪ್ರಭುತ್ವದ ಹಕ್ಕುಗಳು’ ಎಂಬ ಶೀರ್ಷಿಕೆಯ ಅಧ್ಯಾಯ 5 ರಲ್ಲಿ, ಸುದ್ದಿ ಕೊಲಾಜ್‌ನ ಶೀರ್ಷಿಕೆಯಲ್ಲಿ ಗುಜರಾತ್ ಗಲಭೆಯ ಉಲ್ಲೇಖವನ್ನು ಕೈಬಿಡಲಾಗಿದೆ.

ಇನ್ನು ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಹಿಂದಿನ ಪಠ್ಯಪುಸ್ತಕದಲ್ಲಿ ‘ಭಾರತವು ಈ ಪ್ರದೇಶವನ್ನು ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಹೇಳುತ್ತದೆ. ಪಾಕಿಸ್ತಾನವು ಈ ಪ್ರದೇಶವನ್ನು ಆಜಾದ್ ಪಾಕಿಸ್ತಾನ ಎನ್ನುತ್ತದೆ’ ಎಂದು ಬರೆಯಲಾಗಿತ್ತು. ಈಗ ಇದನ್ನು ಬದಲಿಸಿ ‘ಇದು ಪಾಕಿಸ್ತಾನದ ಅಕ್ರಮ ವಶದಲ್ಲಿರುವ ಭಾರತೀಯ ಪ್ರದೇಶವಾಗಿದೆ ಮತ್ತು ಇದನ್ನು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ) ಎಂದು ಕರೆಯಲಾಗುತ್ತದೆ’ ಎಂದು ಬರೆಯಲಾಗಿದೆ.

ಇನ್ನು ಮಣಿಪುರ ಒಪ್ಪಂದ ವಿಷಯದಲ್ಲಿ, ‘1949ರಲ್ಲಿ ರಾಜನ ಅಧೀನದಲ್ಲಿದ್ದ ಮಣಿಪುರವು ಭಾರತದಲ್ಲಿ ವಿಲೀನ ಆಗಿದ್ದು ಅಲ್ಲಿನ ಜನರ ಕೋಪ ಮತ್ತು ಅಸಮಾಧಾನಕ್ಕೆ ಕಾರಣವಾಯಿತು, ಇದರ ಪರಿಣಾಮ ಇವುಗಳನ್ನು ಇನ್ನೂ ಅನುಭವಿಸಲಾಗುತ್ತಿದೆ’ ಎಂದು ಬರೆಯಲಾಗಿತ್ತು. ಇದನ್ನು ‘ಭಾರತ ಸರ್ಕಾರವು ಸೆಪ್ಟೆಂಬರ್ 1949 ರಲ್ಲಿ ವಿಲೀನ ಒಪ್ಪಂದಕ್ಕೆ ಸಹಿ ಹಾಕುವಂತೆ ಮಹಾರಾಜರ ಮನವೊಲಿಸುವಲ್ಲಿ ಯಶಸ್ವಿಯಾಯಿತು’ ಎಂದು ಬದಲಿಸಲಾಗಿದೆ.
ಕಳೆದ ವಾರ ಎನ್‌ಸಿಇಆರ್‌ಟಿ, ಸಿಬಿಎಸ್ಸಿ ಪಠ್ಯದಲ್ಲಿ 3ರಿಂದ 6ನೇ ಕ್ಲಾಸ್‌ ತರಗತಿಗೆ ಹೊಸ ಮಾತ್ರ ಹೊಸ ಪಠ್ಯ ಅಳವಡಿಸಲಾಗುತ್ತದೆ ಎಂದಿತ್ತು. ಆದರೆ 11-12ನೇ ಕ್ಲಾಸ್‌ನಲ್ಲೂ ಈಗ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಹೊಸ ಪಠ್ಯಗಳನ್ನು ಪೇಟೆಗೆ ಪರಿಚಯಿಸಲಾಗುವುದು ಎಂದು ತಿಳಿಸಲಾಗಿದೆ.

Follow Us:
Download App:
  • android
  • ios