ಹುಕ್ಕೇರಿ: ತವರುಮನೆಗೆ ಹೋದ ಹೆಂಡ್ತಿ, ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಂದೆ ಆತ್ಮಹತ್ಯೆ
ಇಬ್ಬರು ಮಕ್ಕಳಿಗೆ ವಿಷ ಉಣಿಸಿ, ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ತಂದೆ| ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ನಡೆದ ಘಟನೆ| ಈ ಸಂಬಂಧ ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲು|
ಹುಕ್ಕೇರಿ(ಜು.29): ಪತ್ನಿ ತನ್ನನ್ನು ತೊರೆದು ತವರುಮನೆಗೆ ಹೋಗಿದ್ದಕ್ಕೆ ತೀವ್ರ ಮನನೊಂದಿರುವ ವ್ಯಕ್ತಿಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ, ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ಸಂಭವಿಸಿದೆ. ಯಾದಗೂಡ ಗ್ರಾಮದ ತಮ್ಮಣ್ಣ ಮಾರುತಿ ಗಿಡ್ಡಾಳೆ (44), ನಿರಂಜನ (9), ಪ್ರತೀಕ್ಷಾ(2) ಮೃತಪಟ್ಟವರು.
ಹತ್ತು ವರ್ಷದ ಹಿಂದೆ ತಮ್ಮಣ್ಣ ಹಾಗೂ ರಾಜಶ್ರೀಯ ಮದುವೆಯಾಗಿತ್ತು. ರಾಜಶ್ರೀಯನ್ನು ಮನವೊಲಿಸಲು ತಮ್ಮಣ್ಣ ಸೋಮವಾರ ಆಕೆಯ ತವರುಮನೆ ಚಿಕ್ಕೋಡಿ ತಾಲೂಕಿನ ಮಾಂಗನೂರ ಗ್ರಾಮಕ್ಕೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ ಸಹಿತ ತವರು ಮನೆಯವರು ತಮ್ಮಣ್ಣನನ್ನು ನಿಂದಿಸಿ ಹಲ್ಲೆಯನ್ನೂ ಮಾಡಿದ್ದಾರೆ ಎನ್ನಲಾಗಿದೆ.
ಹೆಂಡ್ತಿ ನಡವಳಿಕೆಯಿಂದ ಬೇಸತ್ತ ಗಂಡ: ಸೆಲ್ಫಿ ವಿಡಿಯೋ ಮಾಡಿ ತಂದೆ ಮಗಳು ನೇಣಿಗೆ ಶರಣು
ಇದರಿಂದ ನೊಂದಿರುವ ಆತ ರಾತ್ರಿ ಯಾದಗೂಡದ ತಮ್ಮ ಮನೆಯಲ್ಲಿ ಇಬ್ಬರೂ ಮಕ್ಕಳಿಗೆ ವಿಷ ಉಣಿಸಿ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.