ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ದುರುಳ!
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ದುರುಳ| ಉ.ಪ್ರ.ದಲ್ಲಿ ಹೈದ್ರಾಬಾದ್ ರೀತಿ ಹೇಯ ಘಟನೆ
ಲಖನೌ[ಡಿ.15]: ಹೈದರಾಬಾದ್ನಲ್ಲಿ ಪಶು ವೈದ್ಯೆ ಮೇಲೆ ಅತ್ಯಾಚಾರವೆಸಗಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಮರೆಯುವ ಮುನ್ನವೇ ಅದನ್ನು ಹೋಲುವ ಮತ್ತೊಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ, ಸೀಮೆಣ್ಣೆ ಸುರಿದು ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿರುವ ಘಟನೆ ಫತೇಪುರ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಗೆ ಶೇ.90ರಷ್ಟುಸುಟ್ಟಗಾಯಗಳಾಗಿದ್ದು, ಆಕೆ ಕಾನ್ಪುರ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ತನ್ನ ದೂರದ ಸಂಬಂಧಿಯೋರ್ವ ಲೈಂಗಿಕ ದೌರ್ಜನ್ಯವೆಸಗಿ ಬಳಿಕ, ಸೀಮೆಣ್ಣೆ ಹಾಕಿ ಸುಟ್ಟಎಂದು ಅಪ್ರಾಪ್ತೆ ಆರೋಪಿಸಿದ್ದಾಳೆ. ಇನ್ನು ಈ ಸಂಬಂಧ ಸಂತ್ರಸ್ತೆ ಕುಟುಂಬಸ್ಥರಿಂದ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಬಂಧನಕ್ಕಾಗಿ ಕಾರಾರಯಚರಣೆ ಕೈಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಲಾಲಾ ಲಜಪತ್ರಾಯ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅನುರಾಗ್ ರಜೋರಿಯಾ, ‘ಸದ್ಯ ಸಂತ್ರಸ್ತೆ ಸ್ಥಿತಿ ಚಿಂತಾಜನಕವಾಗಿದೆ. ಆಕೆಯ ಆರೋಗ್ಯ ಸ್ಥಿತಿ ಸುಧಾರಣೆಯಾದ ಬಳಿಕ ಆಕೆಯನ್ನು ವಾರ್ಡ್ಗೆ ಸ್ಥಳಾಂತರಿಸಲಾಗುತ್ತದೆ’ ಎಂದಿದ್ದಾರೆ.
ಉತ್ತರಪ್ರದೇಶದ ಉನ್ನಾವ್ನಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಕೊಲ್ಲಲಾಗಿತ್ತು. ಆ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ನಡುವೆಯೇ ಈ ಘಟನೆ ನಡೆದಿದೆ.
ಆಗಿದ್ದೇನು?:
ಸಂತ್ರಸ್ತೆ ಯುವತಿ ಮತ್ತು ಆರೋಪಿ ಅಕ್ಕಪಕ್ಕದ ಮನೆಯವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇದು ಇಬ್ಬರ ಮನೆಯಲ್ಲೂ ಗೊತ್ತಾಗಿ, ರಾಜಿ ಪಂಚಾಯ್ತಿ ನಡೆದಿತ್ತು. ಕೊನೆಗೆ ಮದುವೆಯಾಗುವವರೆಗೂ ಈ ಇಬ್ಬರಿಗೂ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿಬಂದಿದೆ. ಏತನ್ಮಧ್ಯೆ, ಯುವತಿ ಮೇಲೆ ಇಂಥ ಅಮಾನವೀಯ ಕೃತ್ಯ ನಡೆದಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.