#SexualAssaultCase: ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ದೋಷಮುಕ್ತ
- ತೆಹಲ್ಕಾ ನಿಯತಕಾಲಿಕದ ಸಂಸ್ಥಾಪಕ ತರುಣ್ ತೇಜ್ಪಾಲ್ಗೆ ರಿಲೀಫ್
- ಅತ್ಯಾಚಾರ, ಲೈಂಗಿಕ ಕಿರುಕುಳ ಆರೋಪದಿಂದ ಖುಲಾಸೆಗೊಳಿಸಿದ ನ್ಯಾಯಾಲಯ
ಪಣಜಿ(ಮೇ.21): ತೆಹಲ್ಕಾ ನಿಯತಕಾಲಿಕದ ಸಂಸ್ಥಾಪಕ ತರುಣ್ ತೇಜ್ಪಾಲ್ ಅವರನ್ನು ಗೋವಾ ನ್ಯಾಯಾಲಯವು ಅತ್ಯಾಚಾರ, ಲೈಂಗಿಕ ಕಿರುಕುಳ ಆರೋಪದಿಂದ ದೋಷ ಮುಕ್ತಗೊಳಿಸಿ ಖುಲಾಸೆಗೊಳಿಸಿದೆ.
ಜಾಮೀನಿನ ಮೇಲೆ ಹೊರಬಂದಿರುವ ತೇಜ್ಪಾಲ್, 2013 ರಲ್ಲಿ ಗೋವಾದ ಪಂಚತಾರಾ ರೆಸಾರ್ಟ್ನಲ್ಲಿ ನಡೆದ ಸಮಾವೇಶದ ಸಂದರ್ಭ ಕಿರಿಯ ಸಹೋದ್ಯೋಗಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಜನಾಂಗೀಯ ಹೇಳಿಕೆ ಕೊಟ್ಟ ನಟಿಯ ವಿರುದ್ಧ FIR ದಾಖಲು
2017 ರಲ್ಲಿ ನ್ಯಾಯಾಲಯವು ಆತನ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ, ಬಂಧನ ವಾರೆಂಟ್ ವಿಧಿಸಿತ್ತು. ತರುಣ್ ತೇಜ್ಪಾಲ್ ಅವರು ನ್ಯಾಯಾಲಯ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಗೋವಾದಲ್ಲಿ ವಿಚಾರಣೆಯನ್ನು ಆರು ತಿಂಗಳೊಳಗೆ ಮುಕ್ತಾಯಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟಿನ ಹೆಚ್ಚುವರಿ ನ್ಯಾಯಾಧೀಶೆ ಕ್ಷಮಾ ಜೋಶಿ, ತೇಜ್ಪಾಲ್ ಅವರು ದೋಷಮುಕ್ಕರೆಂದು ತೀರ್ಪು ಪ್ರಕಟಿಸಿದ್ದಾರೆ.
'ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿತ್ತು. ಇದೀಗ ಟ್ರಯಲ್ ಕೋರ್ಟ್ ನನ್ನನ್ನು ದೋಷಮುಕ್ತಗೊಳಿಸಿದೆ. ಇಂಥ ಕಾಲದಲ್ಲಿ ಸತ್ಯಕ್ಕೆ ಜಯ ಸಿಕ್ಕಿರುವುದಕ್ಕೆ ನಾನು ಋಣಿ,' ಎಂದು ಹೇಳಿದ್ದಾರೆ ತರುಣ್.