ನಿದ್ದೆಯಲ್ಲಿದ್ದಾಗ 10 ಸಲ ಕಚ್ಚಿದ ಹಾವು, ಕಚ್ಚಿಸಿದ್ದೆಂದು ಪ್ರಕರಣಕ್ಕೆ ಟ್ವಿಸ್ಟ್

Synopsis
ಹಾವು ಕಚ್ಚಿ ಸಾವನ್ನಪ್ಪಿದ ಯುವಕನ ಕೇಸ್ ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹಾವು ಹಾಸಿಗೆ ಮೇಲೆ ಬಂದಿದ್ದಲ್ಲ, ಬರಿಸಿದ್ದು ಎಂಬ ಸತ್ಯ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಮೀರತ್ (Meerut) ನಲ್ಲಿ ಹತ್ತು ಬಾರಿ ಹಾವು (snake) ಕಚ್ಚಿ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಎರಡು ದಿನಗಳ ಹಿಂದೆ ಅಮಿತ್ ಅಲಿಯಾಸ್ ವಿಕ್ಕಿ ಕಶ್ಯಪ್ ಎಂಬಾತ ಮಲಗಿದ್ದಾಗ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಬಂದಿತ್ತು. ಅಮಿತ್ ಗೆ ಹತ್ತು ಬಾರಿ ಹಾವು ಕಚ್ಚಿತ್ತು. ಪ್ರಕರಣದಲ್ಲಿ ಹಾವು ವಿಲನ್ ಆಗಿತ್ತು. ಆದ್ರೆ ಪ್ರಕರಣದ ತನಿಖೆ ಶುರುವಾದಾಗ ನಿಜವಾದ ವಿಲನ್ ಯಾರು ಎಂಬ ಸತ್ಯ ಹೊರಗೆ ಬಿದ್ದಿದೆ. ವಾಸ್ತವವಾಗಿ ಹಾವಿನ ಪಾತ್ರ ಇಲ್ಲಿ ಏನೂ ಇಲ್ಲ. ಎಲ್ಲ ವಿಕ್ಕಿ ಪತ್ನಿಯ ಕೈವಾಡ.
ಪತಿ ವಿಕ್ಕಿಯನ್ನು ಹತ್ಯೆ ಮಾಡಿದ ರವಿತಾ ನಂತ್ರ ಹಾಸಿಗೆ ಮೇಲೆ ಹಾವು ಬಿಟ್ಟಿದ್ದಾಳೆ. ಹತ್ತು ಬಾರಿ ಹಾವು ಕಚ್ಚಿ ವಿಕ್ಕಿ ಸಾವನ್ನಪ್ಪಿದ್ದಾನೆ ಅಂತ ಎಲ್ಲರನ್ನು ನಂಬಿಸಿದ್ದಾಳೆ. ಆದ್ರೆ ಪೋಸ್ಟ್ ಮಾರ್ಟಮ್ (post mortem) ವರದಿ ಸತ್ಯವನ್ನು ಬಿಚ್ಚಿಟ್ಟಿದೆ. ಮೀರತ್ ಜಿಲ್ಲೆಯ ಬಹಸೂಮಾ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಬರ್ಪುರ್ ಸಾದತ್ ಗ್ರಾಮದ ಯುವಕ ಅಮಿತ್. ಕೂಲಿ ಕೆಲಸ ಮಾಡುತ್ತಿದ್ದ ಅಮಿತ್ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಬಂದಿದ್ದಾನೆ. ನಿತ್ಯದಂತೆ ಊಟ ಮಾಡಿ ಅಮಿತ್ ನಿದ್ರೆಗೆ ಜಾರಿದ್ದಾನೆ. ಬೆಳಿಗ್ಗೆ ಅಮಿತ್ ಹೆಣವಾಗಿದ್ದಾನೆ. ಹಾಸಿಗೆ ಮೇಲೆ ಜೀವಂತ ಹಾವು ಕೂಡ ಕಾಣಿಸಿಕೊಂಡಿದೆ. ಊರವರೆಲ್ಲ ಹಾವು ಕಚ್ಚಿ ಅಮಿತ್ ಸಾವನ್ನಪ್ಪಿದ್ದಾನೆ ಅಂತ ಭಾವಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಕೂಡ ವೈರಲ್ ಆಗಿತ್ತು. ಯುವಕನ ಶವದ ಬಳಿ ಹಾವೊಂದು ಕಾಣಿಸಿಕೊಂಡಿದ್ದಲ್ಲದೆ, ಅಮಿತ್ ಗೆ ಅದು ಕಚ್ಚುತ್ತಿರೋದನ್ನು ವಿಡಿಯೋದಲ್ಲಿ ಜನ ನೋಡಿದ್ದರು. ಹಾವು 10 ಬಾರಿ ಕಚ್ಚಿದೆ ಅಂದ್ರೆ ಅದಕ್ಕೆ ಎಷ್ಟು ದ್ವೇಷವಿತ್ತು, ಯಾಕೆ ಹೀಗಾಯ್ತು ಅಂತ ಜನರು ನಾನಾ ರೀತಿ ಮಾತನಾಡಿದ್ದರು.
ಥೂ ಪಾಪಿಗಳಾ: ಮಾತೂ ಬಾರದ ಕಿವಿಯೂ ಕೇಳದ 11 ವರ್ಷದ ಬಾಲಕಿ ಮೇಲೆ ಕಾಮುಕರ ಕ್ರೌರ್ಯ
ಮರಣೋತ್ತರ ಪರೀಕ್ಷೆ ವೇಳೆ ಸತ್ಯ ಬಯಸಲು : ಪೋಸ್ಟ್ ಮಾರ್ಟಮ್ ವರದಿ ನೋಡಿ ಪೊಲೀಸರು ದಂಗಾದ್ರು. ಇದ್ರಲ್ಲಿ ಅಮಿತ್ ಸಾವು ಹಾವುಕಚ್ಚಿ ಆಗ್ಲಿಲ್ಲ, ಕತ್ತು ಹಿಸುಕಿ ಆಗಿದೆ ಅಂತಿತ್ತು. ತಕ್ಷಣ ಅಲರ್ಟ್ ಆದ ಪೊಲೀಸರು ತನಿಖೆ ಶುರು ಮಾಡಿದ್ರು. ಆಗ ಒಂದೊಂದೇ ಸುಳಿವು ಸಿಕ್ತಾ ಹೋಯ್ತು. ಪೊಲೀಸರ ಕಣ್ಣು ಮೊದಲು ಬಿದ್ದಿದ್ದು ಅಮಿತ್ ಪತ್ನಿ ರವಿತಾ ಮೇಲೆ.
ಹಲ್ಲೆಯನ್ನು ಗ್ಯಾಂಗ್ ರೇ*ಎಂದು ಕಥೆ ಕಟ್ಟಿದ ಮಹಿಳೆ: ಕೇಸ್ ದಾಖಲು!
ಸಾಕ್ಷ್ಯ ಮುಚ್ಚಲು ಹಾವಿನ ಬಳಕೆ : ಅಮಿತ್ ಪತ್ನಿ ರವಿತಾ ಹಾಗೂ ಅದೇ ಊರಿನ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆಗ ರವಿತಾ ಸತ್ಯ ಹೊರ ಹಾಕಿದ್ದಾಳೆ. ರವಿತಾಗೆ ಅದೇ ಗ್ರಾಮದ ಯುವಕನ ಜೊತೆ ಅಕ್ರಮ ಸಂಬಂಧವಿತ್ತು. ಇವರಿಬ್ಬರ ಪ್ರೀತಿಗೆ ಅಮಿತ್ ಅಡ್ಡಿಯಾಗಿದ್ದ. ಅಮಿತ್ ನನ್ನು ಮುಗಿಸಿ ತಮ್ಮ ದಾರಿ ಸುಗಮಗೊಳಿಸಿಕೊಳ್ಳಲು ಪ್ರೇಮಿಗಳು ಪ್ಲಾನ್ ಮಾಡಿದ್ರು. ಅಮಿತ್ ಸಾವು ದುರ್ಘಟನೆ ಎಂದು ಬಿಂಬಿಸಲು ಮುಂದಾದ್ರು. ಮಾರುಕಟ್ಟೆಯಿಂದ ಹಾವೊಂದನ್ನು ಖರೀದಿ ಮಾಡಿದ್ದ ಇವರು, ಅಮಿತ್ ಕತ್ತು ಹಿಸುಕಿ ಹತ್ಯೆ ಮಾಡಿದ್ರು. ನಂತ್ರ ಅವನ ಬೆಡ್ ಮೇಲೆ ಹಾವನ್ನು ಇಟ್ಟಿದ್ದರು. ಅಷ್ಟೇ ಅಲ್ಲ ಇದ್ರ ವಿಡಿಯೋ ಮಾಡಿ, ಸಾಕ್ಷ್ಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆರಂಭದಲ್ಲಿ ಎಲ್ಲರೂ ಅಮಿತ್ ಹಾವು ಕಚ್ಚಿ ಸತ್ತಿದ್ದಾನೆ ಎಂಬುದನ್ನು ನಂಬಿದ್ದರಿಂದ ರವಿತಾ ದಾರಿ ಸುಗಮವಾಯ್ತು. ಆದ್ರೆ ಪೊಲೀಸ್ ಕೈಗೆ ಸಿಕ್ಕಿಬಿದ್ದ ರವಿತಾ ಈಗ ಜೈಲೂಟ ತಿನ್ನುವಂತಾಗಿದೆ. ಇಬ್ಬರೂ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ.