ಹುಬ್ಬಳ್ಳಿ: ಜೈಲಿಂದ ಪರಾರಿಯಾದವ ಶವವಾಗಿ ಪತ್ತೆ
* ಅಣ್ಣಿಗೇರಿ ಸಮೀಪದ ರೈಲ್ವೆ ಹಳಿಯಲ್ಲಿ ಶವ ಪತ್ತೆ
* ಕಸ ಎಸೆಯುವ ನೆಪದಲ್ಲಿ ಕಾರಾಗೃಹದ ಸಿಬ್ಬಂದಿಯ ಕಣ್ತಪ್ಪಿಸಿ ಪರಾರಿಯಾಗಿದ್ದ ಕೈದಿ
* ಈತನ ಪತ್ತೆಗೆ ವಿಶೇಷ ತಂಡ ರಚಿಸಿದ್ದ ಪೊಲೀಸರು
ಹುಬ್ಬಳ್ಳಿ(ಆ.05): ಇತ್ತೀಚೆಗೆ ನಗರದ ಉಪ ಕಾರಾಗೃಹದಿಂದ ನಾಪತ್ತೆಯಾಗಿದ್ದ ಕೊಲೆ ಆರೋಪದ ವಿಚಾರಣಾಧೀನ ಕೈದಿ ಇಲ್ಲಿನ ಆನಂದನಗರದ ವಿಜಯ ನರೇಗಲ್(28) ಬುಧವಾರ ಅಣ್ಣಿಗೇರಿ ಸಮೀಪದ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ.
ಜೈಲಿನ ಆವರಣ ಶುಚಿಗೊಳಿಸುವ ವೇಳೆ ಜೈಲಿನ ಪ್ರವೇಶ ದ್ವಾರದ ಬಳಿಯ ತಿಪ್ಪೆಗುಂಡಿಯಲ್ಲಿ ಕಸ ಎಸೆಯುವ ನೆಪದಲ್ಲಿ ಹೋಗಿದ್ದ ವಿಜಯ ಕಾರಾಗೃಹದ ಸಿಬ್ಬಂದಿಯ ಕಣ್ತಪ್ಪಿಸಿ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಅಶೋಕನಗರ ಪೊಲೀಸರು ಈತನ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.
ದಾವಣಗೆರೆ: ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ..!
ಬೆಳಗ್ಗೆ ಅಣ್ಣಿಗೇರಿ ರೈಲ್ವೆ ಹಳಿ ಬಳಿ ಶವ ಪತ್ತೆಯಾದ ಮಾಹಿತಿ ಮೇರೆಗೆ ಅಲ್ಲಿಗೆ ಪೊಲೀಸರು ತೆರಳಿದಾಗ ವಿಜಯ ಎಂಬುದು ಪತ್ತೆಯಾಗಿದೆ. 2014ರಲ್ಲಿ ಕುರಿ ಕಳವನ್ನು ವಿರೋಧಿಸಿದ್ದ ಇಬ್ಬರು ಕುರಿಗಾಹಿಗಳ ಕೊಲೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ. ಕಳೆದ ಆರು ವರ್ಷದಿಂದ ವಿಚಾರಣಾಧೀನ ಕೈದಿಯಾಗಿ ಉಪ ಕಾರಾಗೃಹದಲ್ಲಿ ಇದ್ದ. ಕೊಲೆ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.