ಹಣಕಾಸು ವಿಚಾರಕ್ಕೆ ಅರ್ಚಕರ ಹೊಡೆದು ಹತ್ಯೆಗೈದು ಹೂತಿಟ್ಟ!
ಪೊಲೀಸರ ಸಮ್ಮುಖದಲ್ಲಿ ಹೊರ ತೆಗೆದ ಅರ್ಚಕ ನೀಲಕಂಠ ದೀಕ್ಷಿತ್ ಅವರ ಮೃತ ದೇಹ| ಮಹಜರು ಮಾಡಿ, ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ|
ಬೆಂಗಳೂರು(ಡಿ.25): ಹಣಕಾಸಿನ ವಿಚಾರವಾಗಿ ಮೂರುವರೆ ತಿಂಗಳ ಹಿಂದೆ ಹತ್ಯೆಯಾಗಿದ್ದ ಕಾಡುಗೋಡಿಯ ಕಾಶಿ ವಿಶ್ವನಾಥ್ ದೇವಾಲಯದ ಪ್ರಧಾನ ಅರ್ಚಕರಾದ ನೀಲಕಂಠ ದೀಕ್ಷಿತ್ ಅವರ ಮೃತದೇಹವನ್ನು ಗುರುವಾರ ಹೊರ ತೆಗೆಯಲಾಗಿದೆ.
ಬೆಂಗಳೂರ ಪೂರ್ವ ವಿಭಾಗದ ತಹಸೀಲ್ದಾರ್ ಅಜಿತ್, ವೈದ್ಯಾಧಿಕಾರಿ ಜಗದೀಶ್ ಮತ್ತು ವೈಟ್ಫೀಲ್ಡ್ ಉಪ ವಿಭಾಗದ ಎಸಿಪಿ ಹಾಗೂ ಕಾಡುಗೋಡಿ ಠಾಣೆ ಇನ್ಸ್ಪೆಕ್ಟರ್ ಸಮ್ಮುಖದಲ್ಲಿ ಬಿಬಿಎಂಪಿಯ ಕಸ ವಿಂಗಡಣ ಘಟಕದ ನಿರ್ಮಾಣ ಹಂತದ ಕಟ್ಟಡದ ಪಾಯದಲ್ಲಿ ಅರ್ಚಕ ನೀಲಕಂಠ ದೀಕ್ಷಿತ್ ಅವರ ಮೃತ ದೇಹವನ್ನು ಹೊರ ತೆಗೆಯಲಾಯಿತು. ಬಳಿಕ ಮಹಜರು ಮಾಡಿ, ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
1 ಕೋಟಿ ಮೌಲ್ಯದ ಡ್ರಗ್ಸ್ ವಶ: ಇಬ್ಬರು ವಿದೇಶಿ ಪೆಡ್ಲರ್ಗಳ ಬಂಧನ
ಆರ್ಚಕ ದೀಕ್ಷಿತ್ ಅವರು ಪರಿಚಯಸ್ಥ ಹಾರ್ಡ್ವೇರ್ ಮಂಜುನಾಥ್ಗೆ ಎರಡು ವರ್ಷಗಳ ಹಿಂದೆ 10 ಲಕ್ಷ ಸಾಲ ನೀಡಿದ್ದರು. ಮೊದಲಿಗೆ ಮಂಜುನಾಥ್, ಸರಿಯಾದ ಸಮಯಕ್ಕೆ ಬಡ್ಡಿಯನ್ನು ನೀಲಕಂಠನಿಗೆ ನೀಡುತ್ತಿದ್ದ. ಕೆಲ ತಿಂಗಳಿಂದ ಬಡ್ಡಿ ನೀಡಲು ಆರೋಪಿ ಸತಾಯಿಸುತ್ತಿದ್ದ. ಸೆ.5ರಂದು ರಾತ್ರಿ ಬಡ್ಡಿ ಕೇಳಲು ದೀಕ್ಷಿತ್ ಅವರು ಆರೋಪಿಯ ಹಾರ್ಡ್ವೇರ್ ಅಂಗಡಿಗೆ ತೆರಳಿದ್ದರು. ಆರೋಪಿ ಗೋಡೌನ್ನಲ್ಲಿ ಕೊಡುವುದಾಗಿ ಸ್ವಲ್ಪ ದೂರದಲ್ಲಿಯೇ ಇರುವ ಗೋಡೌನ್ಗೆ ಕರೆದೊಯ್ದಿದ್ದ. ಬಳಿಕ ಅಲ್ಲಿಯೇ ಇದ್ದ ವಿಕೆಟ್ನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದ. ದೀಕ್ಷಿತ್ ಅವರ ಕೂಗಾಟವನ್ನು ಕೇಳಿ ಸಮೀಪದಲ್ಲಿರುವ ಹಾರ್ಡ್ವೇರ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಇತರೆ ಆರೋಪಿಗಳು ಸ್ಥಳಕ್ಕೆ ಬಂದಿದ್ದರು. ಆಗ ಅವರಿಗೆ ಹಣದ ಆಮಿಷವೊಡ್ಡಿ ಬಾಯಿ ಮುಚ್ಚಿಸಿದ್ದ. ಮರುದಿನ ಸೆ.6ರಂದು ತಡರಾತ್ರಿ ಮೃತದೇಹವನ್ನು ಕಾರಿನಲ್ಲಿ ಕೊಂಡೊಯ್ದು ಕಾಡುಗೋಡಿಯಲ್ಲಿರುವ ತನ್ನ ಶ್ರೀಲಕ್ಷ್ಮಿ ಪ್ಯಾಲೆಸ್ ಕಲ್ಯಾಣ ಮಂಟಪದ ಹಿಂಭಾಗದ ಬಿಬಿಎಂಪಿ ಕಸ ವಿಂಗಡಣೆ ಘಟಕದ ಪಾಯದಲ್ಲಿ ಗುಂಡಿ ತೋಡಿ ಹೂತ್ತಿಟ್ಟಿದ್ದ.
ಇತ್ತ ಸೆ.5ರ ರಾತ್ರಿ 7.45ರಲ್ಲಿ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೋದ ನೀಲಕಂಠ ದೀಕ್ಷಿತ್ ಅವರು ವಾಪಸ್ ಬಂದಿರಲಿಲ್ಲ. ಈ ಸಂಬಂಧ ಆರ್ಚಕನ ಸಹೋದರ ದೂರು ನೀಡಿದ್ದರು. ಅನುಮಾನದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟರು ಎಂದು ಪೊಲೀಸರು ಮಾಹಿತಿ ನೀಡಿದರು.