2ನೇ ಹೆಂಡ್ತಿ ಮಾತು ಕೇಳಿ ಮಕ್ಕಳ ಮೇಲೆ ಕ್ರೌರ್ಯ ಮೆರೆಯುತ್ತಿದ್ದ ಪಾಪಿ ತಂದೆ..!
* ಮೂವರು ಮಕ್ಕಳ ಮೈ, ಕೈಗೆ ಬರೆ ಕೊಟ್ಟಿದ್ದ ಪಾಪಿ ತಂದೆ
* ಹಲ್ಲೆಗೊಳಗಾದ ಮಕ್ಕಳನ್ನ ರಕ್ಷಿಸಿದ ಪೊಲೀಸರು
* ಆರೋಪಿ ವಿರುದ್ಧ ಐಪಿಸಿ 307 ಕೊಲೆಯತ್ನ ಅಡಿ ಕೇಸ್
ಬೆಂಗಳೂರು(ಜೂ.23): ತನ್ನ ಹೆತ್ತ ಮಕ್ಕಳ ಮೇಲೆಯೇ ಕ್ರೌರ್ಯ ಮೆರೆಯುತ್ತಿದ್ದ ಪಾಪಿ ತಂದೆಯನ್ನ ಪೊಲೀಸರು ಬಂಧಿಸಿದ ಘಟನೆ ಜೆ.ಪಿ ನಗರದಲ್ಲಿ ಇಂದು(ಬುಧವಾರ) ನಡೆದಿದೆ. ಸೆಲ್ವ ಎಂಬಾತನೇ ಚಿಕ್ಕಮಕ್ಕಳ ಮೇಲೆ ಕ್ರೌರ್ಯ ಮೆರೆಯುತ್ತಿದ್ದ ತಂದೆಯಾಗಿದ್ದಾನೆ.
"
ಘಟನೆ ಹಿನ್ನೆಲೆ:
ಮೂರು ತಿಂಗಳ ಹಿಂದಷ್ಟೇ ಸೆಲ್ವನ ಮೊದಲ ಪತ್ನಿ ಅಂಜಲಿ ಮೃತಪಟ್ಟಿದ್ದಳು. ಹೀಗಾಗಿ ಸೆಲ್ವ ಸತ್ಯಾ ಎಂಬುವರನ್ನ ಎರಡನೇ ಮದುಯಾಗಿದ್ದ, ನಂತರ ಮೊದಲ ಪತ್ನಿಯ ಮೂವರು ಮಕ್ಕಳನ್ನು ಎರಡನೇ ಪತ್ನಿ ಸತ್ಯಾ ಮನೆಗೆ ಕರೆ ತಂದಿದ್ದನು. ಸೆಲ್ವ ಕೆಲಸಕ್ಕೆ ಹೋಗಿ ವಾಪಸ್ ಮನೆಗೆ ಬರುತ್ತಿದ್ದಂತೆ ಸತ್ಯಾ ಮಕ್ಕಳ ಮೇಲೆ ಚಾಡಿ ಹೇಳುತ್ತಿದ್ದಳು. ಎರಡನೇ ಪತ್ನಿ ಸತ್ಯಾಳ ಮಾತನ್ನ ಕೇಳಿ ಸೆಲ್ವ ತನ್ನ ಮಕ್ಕಳ ಮೇಲೆಯೇ ಕ್ರೌರ್ಯ ಮೆರೆಯುತ್ತಿದ್ದ ಎಂದು ತಿಳಿದು ಬಂದಿದೆ.
ಅನ್ಯಜಾತಿ ಯುವಕನ ಪ್ರೀತಿಸಿದ ಪುತ್ರಿ ಕೊಲೆ: ಮೈಸೂರಿನಲ್ಲಿ ಮರ್ಯಾದಾ ಹತ್ಯೆ?
ಮಕ್ಕಳು ಹಠ ಮಾಡುತ್ತಾರೆ ಎಂಬ ನೆಪ ಹೇಳಿ ಮಕ್ಕಳ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದ ಸೆಲ್ವ. ನಿನ್ನೆ ಕೂಡ ಮಕ್ಕಳು ಹಠ ಮಾಡುತ್ತಾರೆ ಎಂಬ ಕಾರಣಕ್ಕೆ ದೋಸೆ ಮೊಣಚುವ ಕೈಯಲ್ಲಿ ಮೂವರು ಮಕ್ಕಳ ಮೈ, ಕೈಗೆ ಬರೆ ಕೊಟ್ಟಿದ್ದಾನೆ ಪಾಪಿ ತಂದೆ. ನೋವು ತಡೆಯಲಾರದೆ ಮಕ್ಕಳು ಮನೆಯಿಂದ ಹೊರ ಬಂದಿದ್ದು ಕಿರುಚಾಟ ಆರಂಭಿಸಿದ್ದರು. ಮಕ್ಕಳ ಕಿರುಚಾಟ ಕೇಳಿ ನೆರೆಹೊರೆಯವರು ಸಹಾಯಕ್ಕೆ ಧಾವಿಸಿದ್ದರು. ಈ ಬಗ್ಗೆ ಪೊಲೀಸರು ಮಾಹಿತಿ ಕೂಡ ನೀಡಿದ್ದರು.
ಸದ್ಯ ಹಲ್ಲೆಗೊಳಗಾದ ಮಕ್ಕಳನ್ನ ಜೆ.ಪಿ ನಗರ ಪೊಲೀಸರು ರಕ್ಷಣೆ ಮಾಡಿದ್ದಾರೆ. ತನ್ನ ಮಕ್ಕಳ ಮೇಲೆ ಕ್ರೌರ್ಯ ಮೆರೆದ ಪಾಪಿ ತಂದೆ ಇದೀಗ ಕಂಬಿಯ ಹಿಂದೆ ಬಿದ್ದಿದ್ದಾನೆ. ಆರೋಪಿಯ ವಿರುದ್ಧ ಜೆ.ಪಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ 307 ಕೊಲೆಯತ್ನ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.