ಹಳೇ ದ್ವೇಷ: ಕೊಲೆ ಆರೋಪಿ ಬರ್ಬರ ಹತ್ಯೆ
ಕೆಲ ತಿಂಗಳ ಹಿಂದೆ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಕೊಲೆಗೀಡಾದ ಸುರೇಶ್| ಮೈಕೋ ಲೇಔಟ್ ಸಮೀಪದ ಎನ್.ಎಸ್.ಪಾಳ್ಯದಲ್ಲಿ ಆಟೋ ಚಾಲಕನ ಹತ್ಯೆ|
ಬೆಂಗಳೂರು(ಆ.05): ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕ ಸೇರಿದಂತೆ ಇಬ್ಬರು ಪ್ರತ್ಯೇಕವಾಗಿ ಮೈಕೋ ಲೇಔಟ್ ಹಾಗೂ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಹತ್ಯೆಗೀಡಾಗಿದ್ದಾರೆ. ಬೈರತಿ ಬಂಡೆ ಸಮೀಪ ಸುರೇಶ್ (20) ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಕೊಂದು ಪರಾರಿಯಾಗಿದ್ದಾರೆ.
ಕೆಲ ತಿಂಗಳ ಹಿಂದೆ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಕಾವಲ್ಬೈರಸಂದ್ರದ ಸುರೇಶ್ ಹೊರಬಂದಿದ್ದ. ಈ ಹತ್ಯೆಯಲ್ಲಿ ಆತನ ವಿರೋಧಿಗಳಾದ ಧನುಷ್ ಮತ್ತು ಆಕಾಶ್ ಕೈವಾಡವಿರಬಹುದು ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಪತಿಯಿಂದ ಪತ್ನಿಯ ಕೊಲೆ: ತಾಯಿಯ ಶವದ ಪಕ್ಕದಲ್ಲೇ ರಾತ್ರಿ ಕಳೆದ ಮಕ್ಕಳು
ಸುರೇಶ್ನನ್ನು ದುಷ್ಕರ್ಮಿಗಳು ಬೈರತಿ ಬಂಡೆ ಸಮೀಪಕ್ಕೆ ಭಾನುವಾರ ಕರೆಸಿಕೊಂಡು ಹತ್ಯೆ ಮಾಡಿರಬಹುದು. ಮರುದಿನ ಬೆಳಗ್ಗೆ ಅಪರಿಚಿತ ಮೃತದೇಹ ಕಂಡ ಸಾರ್ವಜನಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲಿಸಿದಾಗ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಟೋ ಚಾಲಕನ ಹತ್ಯೆ:
ಮೈಕೋ ಲೇಔಟ್ ಸಮೀಪದ ಎನ್.ಎಸ್.ಪಾಳ್ಯದಲ್ಲಿ ಆಟೋ ಚಾಲಕನೊಬ್ಬ ಹತ್ಯೆಯಾಗಿದೆ. ಸೋಮವಾರ ರಾತ್ರಿ ಎನ್.ಎಸ್.ಪಾಳ್ಯ ಸಮೀಪ ಮಣಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಮಣಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.