ಕಾಲಿನಿಂದ ಗೆಳೆಯನ ಕುತ್ತಿಗೆ ತುಳಿದು ಹತ್ಯೆ: ಕೊಲೆ ಬಳಿಕ ನಿದ್ದೆಗೆ ಜಾರಿದ್ದ ಹಂತಕ
ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ವೇಳೆ ವ್ಯಕ್ತಿಯೊಬ್ಬ ಕಾಲಿನಿಂದ ಆತನ ಸ್ನೇಹಿತನ ಕುತ್ತಿಗೆ ತುಳಿದ ಉಸಿರುಗಟ್ಟಿಸಿ ದಾರುಣವಾಗಿ ಕೊಲೆ ಮಾಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಮೇ.29): ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ವೇಳೆ ವ್ಯಕ್ತಿಯೊಬ್ಬ ಕಾಲಿನಿಂದ ಆತನ ಸ್ನೇಹಿತನ ಕುತ್ತಿಗೆ ತುಳಿದ ಉಸಿರುಗಟ್ಟಿಸಿ ದಾರುಣವಾಗಿ ಕೊಲೆ ಮಾಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಾದಮಂಗಲ ಕಾರ್ಮಿಕ ಶೆಡ್ ನಿವಾಸಿ ವೀರೇಂದ್ರ ಕುಮಾರ್(38) ಕೊಲೆಯಾದ ದುರ್ದೈವಿ. ಶುಕ್ರವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಈ ಸಂಬಂಧ ಆರೋಪಿ ಮನೋಹರ್ ವರ್ಮಾ(28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವೀರೇಂದ್ರ ಕುಮಾರ್ ಮತ್ತು ಆರೋಪಿ ಮನೋಹರ್ ವರ್ಮಾ ಉತ್ತರ ಪ್ರದೇಶ ಮೂಲದವರು.
ವೃತ್ತಿಯಲ್ಲಿ ಪೇಂಟರ್ ಆಗಿದ್ದು, ಕಾಡಿಗೋಡಿಯ ಸಾದಮಂಗಲದಲ್ಲಿ ಕಾರ್ಮಿಕ ಶೆಡ್ನಲ್ಲಿ ನೆಲೆಸಿದ್ದರು. ಇಬ್ಬರು ಮದ್ಯ ವ್ಯಸನಿಗಳಾಗಿದ್ದು, ಶುಕ್ರವಾರ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿ ಬಂದಿದ್ದರು. ಮದ್ಯದ ಅಮಲಿನಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದುಕೊಂಡಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮನೋಹರ್ ವರ್ಮಾ ಏಕಾಏಕಿ ವೀರೇಂದ್ರ ಕುಮಾರ್ಗೆ ಮೇಲೆ ಹಲ್ಲೆ ಮಾಡಿದ್ದಾನೆ. ನೆಲಕ್ಕೆ ಕೆಡವಿ ಆತನ ಕುತ್ತಿಗೆ ಮೇಲೆ ಕಾಲು ಇರಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ತನಗೂ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕಾರ್ಮಿಕರ ಶೆಡ್ನಲ್ಲಿ ನಿದ್ದೆಗೆ ಜಾರಿದ್ದಾನೆ.
ಏರಿಯಾದಲ್ಲಿ ಹವಾ ಸೃಷ್ಟಿಸಲು ಕೊಲೆ ಮಾಡಿದ್ದ ಮೂವರ ಸೆರೆ
ಶನಿವಾರ ಬೆಳಗ್ಗೆ ವೀರೇಂದ್ರ ಕುಮಾರ್ ಎಚ್ಚರಗೊಂಡಿರಲಿಲ್ಲ. ಈ ಬಗ್ಗೆ ಅನುಮಾನಗೊಂಡ ಪಕ್ಕದ ಶೆಡ್ನ ಕಾರ್ಮಿಕರು ಬಂದ ಎಚ್ಚರಗೊಳಿಸಲು ಪ್ರಯತ್ನಿಸಿದ್ದಾರೆ. ಆದರೆ, ವೀರೇಂದ್ರ ಕುಮಾರ್ ಎಷ್ಟೇ ಪ್ರಯತ್ನಪಟ್ಟರೂ ಎಚ್ಚರವಾಗಿಲ್ಲ. ಮುಖಕ್ಕೆ ನೀರು ಹಾಕಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವೇಳೆ ಆತಂಕಗೊಂಡ ಕಾರ್ಮಿಕರು ಗುತ್ತಿಗೆದಾರರನಿಗೆ ಮಾಹಿತಿ ನೀಡಿದ್ದಾರೆ. ಗುತ್ತಿಗೆದಾರ ಕಾರ್ಮಿಕರ ಶೆಡ್ ಬಳಿ ನೋಡಿದಾಗ ವೀರೇಂದ್ರ ಕುಮಾರ್ ಮೃತಪಟ್ಟಿರುವುದು ಗೊತ್ತಾಗಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾಡುಗೋಡಿ ಠಾಣೆ ಪೊಲೀಸರು, ಆರೋಪಿ ಮನೋಹರ್ ವರ್ಮಾನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಜಲು ತೆರಳಿದ ನಾಲ್ವರು ನೀರುಪಾಲು: ಬೆಂಗಳೂರಿನಿಂದ ನಾಲ್ವರು ಯುವಕರ ತಂಡ ಇಂದು ದ್ವಿಚಕ್ರ ವಾಹನದಲ್ಲಿ ನಂದಿಬೆಟ್ಟಕ್ಕೆ ಬಂದಿದ್ದು, ಬೆಂಗಳೂರಿಗೆ ವಾಪಸ್ ತೆರಳುವಾಗ ದಾರಿ ಮಧ್ಯೆ ಸಿಕ್ಕ ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ರಾಮನಾಥಪುರದ ಕೆರೆಯಲ್ಲಿ ಘಟನೆ ನಡೆದಿದೆ. ಬೆಂಗಳೂರಿನ ಆರ್.ಟಿ ನಗರದ ಯುವಕರ ತಂಡ ಇಂದು ಬೆಳಗ್ಗೆ ನಂದಿಬೆಟ್ಟಕ್ಕೆ ಬೈಕ್ ನಲ್ಲಿ ಬಂದಿದ್ದರು ಎನ್ನಲಾಗಿದೆ, ಮಧ್ಯಾಹ್ನ ನಂದಿಬೆಟ್ಟದಿಂದ ಬೆಂಗಳೂರಿಗೆ ವಾಪಸ್ ಹೊರಟಿದ್ದರು, ಈ ನಡುವೆ ಮಾರ್ಗ ಮಧ್ಯೆ ಸಿಕ್ಕ ರಾಮನಾಥಪುರ ಕೆರೆಯಲ್ಲಿ ಈಜಲು ಹೋಗಿದ್ದಾರೆ, ನೀರಿನಲ್ಲಿ ಮುಳುಗಿ ನಾಲ್ವರು ಯುವಕರು ಸಾವನ್ನಪ್ಪಿರುವ ಸಂಶಯ ಇದೆ.
ಕೆರೆಯ ದಂಡೆಯಲ್ಲಿ ನಿಂತಿದ್ದ ಬೈಕ್ಗಳು, ಯುವಕರ ಬಟ್ಟೆಮತ್ತು ಶೂಗಳನ್ನ ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ, ಸ್ಥಳಕ್ಕೆ ಬಂದ ವಿಶ್ವನಾಥಪುರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ನೀರಿನಲ್ಲಿ ಮುಳುಗಿರುವ ಶವಗಳ ಪತ್ತೆಗಾಗಿ ಕಾರ್ಯಚಾರಣೆ ನಡೆಸಿದ್ದಾರೆ. ಸದ್ಯ ಇಬ್ಬರ ಶವಗಳು ಪತ್ತೆಯಾಗಿದ್ದು, ಮತ್ತಿಬ್ಬರು ಯುವಕರ ಶವ ಪತ್ತೆಗಾಗಿ ಕಾರ್ಯಚಾರಣೆ ಮುಂದುವರೆದಿದೆ, ಮೃತ ಯವಕರ ಪೋಷಕರು ಸ್ಥಳಕ್ಕೆ ಬಂದಿದ್ದು, ಮೃತ ಯುವಕರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.