ನಟ ಸುಶಾಂತ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಏಮ್ಸ್ ಅಂತಿಮ ವರದಿ!
ನಟ ಸುಶಾಂತ್ದು ಕೊಲೆ ಅಲ್ಲ, ಆತ್ಮಹತ್ಯೆ| ನೇಣು ಹಾಕಿಕೊಂಡು ಸಾವು| ದೇಹದ ಇತರೆಡೆ ಗಾಯದ ಗುರುತಿಲ್ಲ| ಸಿಬಿಐಗೆ ಏಮ್ಸ್ನಿಂದ ಅಂತಿಮ ವರದಿ| ಪ್ರಕರಣಕ್ಕೆ ಮಹತ್ವದ ತಿರುವು| ‘ಆತ್ಮಹತ್ಯೆಗೆ ಪ್ರಚೋದನೆ’ ದೃಷ್ಟಿಕೋನದಲ್ಲಿ ಸಿಬಿಐನಿಂದ ತನಿಖೆ ಸಾಧ್ಯತೆ
ಮುಂಬೈ(ಅ.04): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ‘ಸುಶಾಂತ್ ಅವರದ್ದು ಕೊಲೆ ಅಲ್ಲ. ಅದು ಆತ್ಮಹತ್ಯೆ. ನೇಣು ಹಾಕಿಕೊಂಡು ಅವರು ಸಾವಿಗೆ ಶರಣಾಗಿದ್ದಾರೆ’ ಎಂದು ದಿಲ್ಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಅಂತಿಮ ವರದಿ ನೀಡಿದೆ. ‘ಸುಶಾಂತ್ ಅವರಿಗೆ ವಿಷಪ್ರಾಶನ ಮಾಡಿಸಿದ ಅಥವಾ ಬೇರೆಯವರು ಹಗ್ಗ ಬಿಗಿದ ಯಾವುದೇ ಕುರುಹು ಇಲ್ಲ’ ಎಂದೂ ವರದಿ ಸ್ಪಷ್ಟಪಡಿಸಿದೆ.
‘ಸುಶಾಂತ್ ಅವರದ್ದು ಆತ್ಮಹತ್ಯೆ ಅಲ್ಲ, ಕೊಲೆ’ ಎಂದು ಅವರ ಕುಟುಂಬ ಆರೋಪಿಸುತ್ತಿದೆ. ಸುಶಾಂತ್ ಬಿಹಾರ ಮೂಲದವರಾದ ಕಾರಣ ಅಲ್ಲೂ ಈ ಕುರಿತ ರಾಜಕೀಯ ಬಲು ಜೋರಾಗಿ ನಡೆದಿದೆ. ಈ ಸಂದರ್ಭದಲ್ಲಿ ಏಮ್ಸ್ ವರದಿ ಮಹತ್ವ ಪಡೆದಿದೆ. ಹೀಗಾಗಿ ಇನ್ನು ಮುಂದೆ ಸಿಬಿಐ, ‘ಕೊಲೆ’ ಬದಲು ‘ಆತ್ಮಹತ್ಯೆಗೆ ಪ್ರಚೋದನೆ’ ದೃಷ್ಟಿಕೋನದಲ್ಲಿ ತನಿಖೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.
ಸಿಬಿಐ ಕೋರಿಕೆ ಮೇರೆಗೆ ಸುಶಾಂತ್ ಮರಣೋತ್ತರ ವರದಿ ಮರುಮೌಲ್ಯಮಾಪನವನ್ನು ಡಾ
ಸುಧೀರ್ ಗುಪ್ತಾ ನೇತೃತ್ವದ ಏಮ್ಸ್ನ 6 ವಿಧಿವಿಜ್ಞಾನ ತಜ್ಞರ ವೈದ್ಯಕೀಯ ಮಂಡಳಿ ನಡೆಸಿದೆ. ‘ಸುಶಾಂತ್ ನೇಣು ಬಿಗಿದುಕೊಂಡಿದ್ದಾರೆ. ಇದು ಆತ್ಮಹತ್ಯೆಯಿಂದ ಸಂಭವಿಸಿದ ಸಾವು ಎಂದು ಸಿಬಿಐಗೆ ವರದಿ ನೀಡಿದ್ದೇವೆ. ನೇಣಿಗೆ ಹೊರತಾಗಿ ದೇಹದ ಇತರ ಭಾಗದಲ್ಲಿ ಯಾವುದೇ ಗಾಯಗಳಿಲ್ಲ. ಬದುಕಲು ಹೋರಾಡಿದ ಯಾವುದೇ ಕುರುಹುಗಳಿಲ್ಲ’ ಎಂದು ಗುಪ್ತಾ ಸ್ಪಷ್ಟಪಡಿಸಿದ್ದಾರೆ.
‘ಸುಶಾಂತ್ ಅವರ ದೇಹದ ಮೇಲೆ ಗುರುತುಗಳಿವೆ ಎಂದ ಮಾತ್ರಕ್ಕೆ ಅದರ ಆಧಾರದ ಮೇಲೆ ಯಾವುದೇ ತೀರ್ಮಾನಕ್ಕೆ ಬರಲಾಗದು’ ಎಂದು ಇತ್ತೀಚೆಗೆ ಕೂಡ ಡಾ
ಗುಪ್ತಾ ಹೇಳಿದ್ದರು. ‘ಸುಶಾಂತ್ ದೇಹದ ಮೇಲೆ ಗುರುತುಗಳಿದ್ದು, ಇದು ಕೊಲೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ’ ಎಂದು ಸುಶಾಂತ್ ಕುಟುಂಬದ ವಕೀಲ ವಿಕಾಸ್ ಸಿಂಗ್ ಮಾಡಿದ ಆರೋಪಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ನೋಡಿ | ಸುಶಾಂತ್ ಪುನರ್ಜನ್ಮ ಬಗ್ಗೆ ರಾಖಿ ಸಾವಂತ್ ಹೇಳಿದ್ದಿಷ್ಟು...!
"