Asianet Suvarna News Asianet Suvarna News

ಬಿಹಾರದಲ್ಲಿ ಬೆಳ್ಳಂಬೆಳಗ್ಗೆ ಪತ್ರಕರ್ತನ ಗುಂಡಿಕ್ಕಿ ಹತ್ಯೆ!

ಬಿಹಾರದಲ್ಲಿ  ಪತ್ರಕರ್ತರೊಬ್ಬರನ್ನು ಅಪರಿಚಿತರು ಶುಕ್ರವಾರ ಮುಂಜಾನೆ ಗುಂಡಿಕ್ಕಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ. ಪ್ರಕರಣ ಸಂಬಂಧ ಶನಿವಾರ ನಾಲ್ವರನ್ನು ಬಂಧಿಸಲಾಗಿದೆ.

Bihar journalist Vimal Yadav shot dead accused arrested gow
Author
First Published Aug 19, 2023, 11:31 AM IST

ಪಾಟ್ನಾ (ಆ.19): ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಪತ್ರಕರ್ತರೊಬ್ಬರನ್ನು ಅಪರಿಚಿತರು ಶುಕ್ರವಾರ ಮುಂಜಾನೆ ಗುಂಡಿಕ್ಕಿ ಕೊಂದಿದ್ದಾರೆ. ಹಿಂದಿ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಮಲ್ ಕುಮಾರ್‌ ಯಾದವ್‌ (35) ಮೃತ ಪತ್ರಕರ್ತ. ಇವರನ್ನು ಅರಾರಿಯಾದ ಪ್ರೇಮನಗರ ಗ್ರಾಮದ ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ‌ ಶನಿವಾರ ನಾಲ್ವರು ಆರೋಪಿಗಳ ಬಂಧನವಾಗಿದೆ. ನಾಲ್ವರಲ್ಲಿ ಇಬ್ಬರು ಹತ್ಯೆಯಲ್ಲಿ ನೇರವಾಗಿ ಭಾಗಿಯಾದ ಆರೋಪ ಇದೆ.

ಆರೋಪಿಗಳು  ಬೆಳಿಗ್ಗೆ 5.30 ರ ಸುಮಾರಿಗೆ ದಾಳಿಕೋರರು ಯಾದವ್‌ ಅವರ ಮನೆಯ ಗೇಟ್‌ಗಳನ್ನು ತಟ್ಟಿದರು. ವಿಮಲ್‌ ಗೇಟ್‌ ತೆರೆದ ತಕ್ಷಣ ಗುಂಡಿನ ದಾಳಿ ನಡೆಸಿದರು.  ಯಾದವ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಬಿಹಾರ ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ಆರೋಪಿಗಳು 2019 ರಲ್ಲಿ ವಿಮಲ್ ಯಾದವ್ ಅವರ ಸಹೋದರನನ್ನು ಸಹ ಕೊಲೆ ಮಾಡಿದ್ದರು. ಆ ಪ್ರಕರಣದಲ್ಲಿ ವಿಮಲ್ ಏಕೈಕ ಸಾಕ್ಷಿಯಾಗಿದ್ದರು ಮತ್ತು ಅವರ ಸಾಕ್ಷ್ಯವನ್ನು ನಾಶ ಮಾಡಲು ಒತ್ತಡ ಹಾಕಲಾಗಿತ್ತು. ಎಂಟು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ವಿಪಿನ್ ಯಾದವ್, ಭವೇಶ್ ಯಾದವ್, ಆಶಿಶ್ ಯಾದವ್ ಮತ್ತು ಉಮೇಶ್ ಯಾದವ್ ಎಂದು ಗುರುತಿಸಲಾಗಿದೆ.

ಕಾರ್ಗಿಲ್‌ನಲ್ಲಿ ಭೀಕರ ಸ್ಫೋಟ , 3 ಸಾವು 11 ಮಂದಿ ಗಂಭೀರ

ಮೃತರು ನೆರೆಹೊರೆಯವರೊಂದಿಗೆ ಹಳೆ ಜಗಳದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಆದರೂ ಎಲ್ಲ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅರಾರಿಯಾ ಪೊಲೀಸ್‌ ವರಿಷ್ಠ ಅಶೋಕ್‌ ಕುರ್ಮಾ ಸಿಂಗ್‌ ಹೇಳಿದ್ದಾರೆ.

ನಿತೀಶ್‌ ದುಃಖ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ‘ನಾನು ನಿಜವಾಗಿಯೂ ದುಃಖಿತನಾಗಿದ್ದೇನೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.

ಬೆಂಗಳೂರು ನಿಲ್ದಾಣಕ್ಕೆ ಬಂದ ಮುಂಬೈ ಉದ್ಯಾನ್ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ, ಹೊತ್ತಿ ಉರಿದ ಎಸಿ

ವಿಪಕ್ಷ ವಾಗ್ದಾಳಿ:
ಆದಾಗ್ಯೂ, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ‘ಘಟನೆಯು ಬಿಹಾರದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ತೋರಿಸುತ್ತದೆ. ಬಿಹಾರದಲ್ಲಿ ಪತ್ರಕರ್ತರು ಸೇರಿದಂತೆ ಅಮಾಯಕ ನಾಗರಿಕರು ಮತ್ತು ಪೊಲೀಸ್‌ ಸಿಬ್ಬಂದಿಯನ್ನು ಹತ್ಯೆ ಮಾಡಲಾಗುತ್ತಿದೆ. ಆದರೆ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಾಮ್ರಾಟ್‌ ಚೌಧರಿ ಆರೋಪಿಸಿದ್ದಾರೆ. ಎಲ್‌ಜೆಪಿ ಮುಖಂಡ ಚಿರಾಗ್‌ ಪಾಸ್ವಾನ್‌ ಮಾತನಾಡಿ, ‘ಬಿಹಾರದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ’ ಎಂದು ಕಿಡಿಕಾರಿದ್ದಾರೆ.

Follow Us:
Download App:
  • android
  • ios