Asianet Suvarna News Asianet Suvarna News

Bengaluru crime news; ಹುಟ್ಟುಹಬ್ಬಕ್ಕೆ ಕರೆದು ಬರ್ಬರವಾಗಿ ಯುವಕನ ಹತ್ಯೆ!

ಹುಟ್ಟುಹಬ್ಬಕ್ಕೆ ಕರೆದು ಬರ್ಬರವಾಗಿ ಯುವಕನ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಗುರುತು ಸಿಗದಂತೆ ಮುಖ ಜಜ್ಜಿ ಹತ್ಯೆ ಮಾಡಿದ್ದು  ನೈಸ್‌ ರಸ್ತೆಯ ಅಂಡರ್‌ಪಾಸ್‌ನಲ್ಲಿ ಶವ ದೊರಕಿದೆ.

 

bengaluru youth found dead after birthday gow
Author
Bengaluru, First Published Jul 18, 2022, 8:37 AM IST | Last Updated Jul 18, 2022, 8:41 AM IST

ಬೆಂಗಳೂರು (ಜು.18): ಹುಟ್ಟುಹಬ್ಬದ ಆಚರಣೆಗಾಗಿ ಸ್ನೇಹಿತರ ಜತೆಗೆ ತೆರಳಿದ್ದ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ದುರ್ಘಟನೆ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗೇರಿ ಸಮೀಪದ ಎಚ್‌.ಗೋಲ್ಲಹಳ್ಳಿ ನಿವಾಸಿ ಹೇಮಂತ್‌ ಕುಮಾರ್‌ (26) ಮೃತ ಯುವಕ. ಭಾನುವಾರ ಬೆಳಗ್ಗೆ 8ರ ಸುಮಾರಿಗೆ ಕೋನಸಂದ್ರ ಕೆರೆ ಸಮೀಪದ ನೈಸ್‌ ರಸ್ತೆಯ ಅಂಡರ್‌ ಪಾಸ್‌ನಲ್ಲಿ ಹೇಮಂತ್‌ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಗುರುತು ಸಿಗದ ಹಾಗೆ ಕಲ್ಲಿನಿಂದ ಮುಖ ಜಜ್ಜಿ ಶವ ಎಸೆದು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಚಾಮರಾಜಪೇಟೆ ಮೂಲದ ಮೃತ ಹೇಮಂತ್‌ ಕುಟುಂಬ ಕೆಲ ವರ್ಷಗಳ ಹಿಂದೆ ಎಚ್‌.ಗೋಲ್ಲಹಳ್ಳಿಗೆ ಬಂತು ನೆಲೆಸಿತ್ತು. ಪಿಯು ಮುಗಿಸಿದ್ದ ಹೇಮಂತ್‌, ವಾಹನಗಳಿಗೆ ಸ್ಟಿಕ್ಕರ್‌ ಅಂಟಿಸುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ಹೇಮಂತ್‌ ಹುಟ್ಟುಹಬ್ಬವಿದ್ದ ಹಿನ್ನೆಲೆಯಲ್ಲಿ ಮೂವರು ಪರಿಚಿತ ಸ್ನೇಹಿತರು ಹೇಮಂತ್‌ ಮೊಬೈಲ್‌ಗೆ ಪದೇ ಪದೇ ಕರೆ ಮಾಡುತ್ತಿದ್ದರು. ಹೀಗಾಗಿ ಮಧ್ಯಾಹ್ನ 2.30ರ ಸುಮಾರಿಗೆ ಸ್ನೇಹಿತರನ್ನು ಭೇಟಿಯಾಗುವುದಾಗಿ ಹೇಮಂತ್‌ ತನ್ನ ಅಕ್ಕನ ಜತೆಗೆ ಸ್ಕೂಟರ್‌ನಲ್ಲಿ ಕೆಂಗೇರಿಗೆ ಡ್ರಾಪ್‌ ಪಡೆದಿದ್ದ.

ರಾತ್ರಿ 8ರ ಸುಮಾರಿಗೆ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದ. ರಾತ್ರಿ 10 ಗಂಟೆಯಾದರೂ ಹೇಮಂತ್‌ ಮನೆಗೆ ಬಾರದಿದ್ದರಿಂದ ಪೋಷಕರು ಕರೆ ಮಾಡಿದಾಗ ಹೇಮಂತ್‌ ಮೊಬೈಲ್‌ ಸ್ವಿಚ್‌್ಡಆಫ್‌ ಬಂದಿದೆ. ಇದರಿಂದ ಗಾಬರಿಗೊಂಡ ಪೋಷಕರು ಆತನ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ನಡುವೆ ದುಷ್ಕರ್ಮಿಗಳು ಹೇಮಂತ್‌ನನ್ನು ಮಾರಕಾಸ್ತ್ರಗಳಿಂದ ಅಮಾನುಷವಾಗಿ ಹತ್ಯೆ ಮಾಡಿದ್ದಾರೆ.

Kodagu; ಕೊಡವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದಾತ ಬಂಧನ

ಟ್ಯಾಟುನಿಂದ ಗುರುತು ಪತ್ತೆ: ಹತ್ಯೆ ಬಳಿಕ ದುಷ್ಕರ್ಮಿಗಳು ಕೋನಸಂದ್ರ ಕೆರೆ ಸಮೀಪದ ನೈಸ್‌ ರಸ್ತೆಯ ಅಂಡರ್‌ ಪಾಸ್‌ನಲ್ಲಿ ಶವ ಎಸೆದಿದ್ದಾರೆ. ಬಳಿಕ ಶವದ ಗುರುತು ಸಿಗದ ಹಾಗೆ ಕಲ್ಲಿನಿಂದ ಮುಖವನ್ನು ಜಜ್ಜಿದ್ದಾರೆ. ಭಾನುವಾರ ಬೆಳಗ್ಗೆ 8ರ ಸುಮಾರಿಗೆ ದಾರಿಹೋಕರು ಅಪರಿಚಿತ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಇದೇ ವೇಳೆಗೆ ಹೇಮಂತ್‌ ಪೋಷಕರು ಸ್ಥಳಕ್ಕೆ ಬಂದು ಶವದ ಕೈ ಮೇಲಿನ ತ್ರಿಶೂಲ ಮತ್ತು ಡಮರುಗ ಟ್ಯಾಟು ನೋಡಿ, ಇದು ಹೇಮಂತ್‌ ಶವ ಎಂದು ಗುರುತು ಪತ್ತೆಹಚ್ಚಿದ್ದಾರೆ. ದ್ವೇಷದ ಹಿನ್ನೆಲೆಯಲ್ಲಿ ಪರಿಚಿತರೇ ಹೇಮಂತ್‌ನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು, ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಕೊಂಡಿದ್ದಾರೆ.

ವಂಚನೆ ಕೇಸ್‌ನಲ್ಲಿ ಸ್ಯಾಂಡಲ್‌ವುಡ್‌ ಖ್ಯಾತ ನಟಿ ಆಪ್ತ ಸೇರಿ ಇಬ್ಬರು ಅರೆಸ್ಟ್

ಪಾರ್ಟಿ ಬಳಿಕ ಕೊಲೆ: ಹೇಮಂತ್‌ ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಬಳಿಕ ಹೇಮಂತ್‌ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹೇಮಂತ್‌ಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ. ಆದರೂ ದುಷ್ಕರ್ಮಿಗಳು ಬಹಳ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಪೊಲೀಸರು ಹೇಮಂತ್‌ನ ಸ್ನೇಹಿತರನ್ನು ಕರೆಸಿ ವಿಚಾರಣೆ ಮಾಡುತ್ತಿದ್ದಾರೆ. ಮೊಬೈಲ್‌ ಕರೆಗಳು ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Latest Videos
Follow Us:
Download App:
  • android
  • ios