ಐಸಿಸಿಯು ಭಾರತದ ಪರವಾಗಿ ಕೆಲಸ ಮಾಡುತ್ತಿದ್ದು, ಟೀಂ ಇಂಡಿಯಾಗೆ ಅನುಕೂಲವಾಗುವ ರೀತಿಯಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ದೂರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಲಂಡನ್: ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತಕ್ಕಾಗಿಯೇ ಸೆಟ್ ಮಾಡಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಆರೋಪಿಸಿದ್ದಾರೆ. ಅಲ್ಲದೆ ಇದು ದ್ವಿಪಕ್ಷೀಯ ಸರಣಿ ಅಲ್ಲ. ಇತರ ದೇಶಗಳನ್ನೂ ಸಮಾನವಾಗಿ ನೋಡಬೇಕು ಎಂದು ಐಸಿಸಿಗೆ ಕುಟುಕಿದ್ದಾರೆ.
ಈ ಬಗ್ಗೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಆ್ಯಡಂ ಗಿಲ್ಕ್ರಿಸ್ಟ್ ಜೊತೆಗೆ ಯೂಟ್ಯೂಬ್ ಚಾನೆಲ್ವೊಂದರ ಸಂದರ್ಶನದ ವೇಳೆ ಮಾತನಾಡಿರುವ 49ರ ವಾನ್, ‘ಇದು ಭಾರತದ ಟೂರ್ನಿ ಎಂಬಂತಾಗಿದೆ. ಭಾರತಕ್ಕೆ ಬೇಕಾದಾಗ ಪಂದ್ಯಗಳನ್ನು ನಡೆಸಲಾಗುತ್ತಿದೆ. ಭಾರತೀಯರು ರಾತ್ರಿ ವೇಳೆ ಪಂದ್ಯ ವೀಕ್ಷಿಸುವುದಕ್ಕಾಗಿ ಟೀಂ ಇಂಡಿಯಾದ ಎಲ್ಲಾ ಪಂದ್ಯಗಳನ್ನು ಹಗಲಿನಲ್ಲೇ ಆಯೋಜಿಸಲಾಗುತ್ತಿದೆ. ವಿಶ್ವ ಕ್ರಿಕೆಟ್ನಲ್ಲಿ ಹಣ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಗೊತ್ತು. ಆದರೆ ವಿಶ್ವಕಪ್ನಲ್ಲಿ ಐಸಿಸಿ ಒಂದು ತಂಡದ ಪರವಾಗಿರಬಾರದು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡ ವಿಶ್ವಕಪ್ನಿಂದ ಹೊರಬಿದ್ದ ಕೂಡಲೇ ಅಲ್ಲಿನ ಕೆಲ ಮಾಧ್ಯಮಗಳು ಸಹ ಐಸಿಸಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.
T20 World Cup 2024: ಇಂಗ್ಲೆಂಡ್ ಬಗ್ಗುಬಡಿದು ದಶಕದ ಬಳಿಕ ಫೈನಲ್ ಗೆ ಲಗ್ಗೆಯಿಟ್ಟ ಭಾರತ
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತದ ಎಲ್ಲಾ ಪಂದ್ಯಗಳು ಸ್ಥಳೀಯ ಕಾಲಮಾನ ಬೆಳಗ್ಗೆ 10.30ಕ್ಕೆ(ಭಾರತೀಯ ಕಾಲಮಾನ ಸಂಜೆ 8 ಗಂಟೆಗೆ) ಆರಂಭವಾಗಿದ್ದವು.
ಇಂಗ್ಲೆಂಡ್ ಬಗ್ಗುಬಡಿದು ಫೈನಲ್ಗೆ ಲಗ್ಗೆಯಿಟ್ಟ ಭಾರತ:
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 68 ರನ್ಗಳಿಂದ ಮಣಿಸಿದ ಟೀಂ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಭಾರತ ನೀಡಿದ್ದ 172 ರನ್ಗಳ ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ ಮಾರಕ ದಾಳಿಗೆ ತತ್ತರಿಸಿ ಕೇವಲ 103 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಟೀಂ ಇಂಡಿಯಾ ಒಂದು ದಶಕದ ಬಳಿಕ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಭಾರತ ತಂಡವು 2014ರಲ್ಲಿ ಕೊನೆಯ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು.
