ಕೊರೋನಾ ಭೀತಿ: ರಕ್ಷಣೆಗೂ ಸೈ ಜಾಗೃತಿಗೂ ಜೈ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ!
ಮನೆ ಮನೆಗೆ ತೆರಳಿ ರಾತ್ರಿಯೂ ಪೊಲೀಸರ ಕೊರೋನಾ ಜಾಗೃತಿ| ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗುಡ್ಡದ ಮಲ್ಲಾಪುರ ಗ್ರಾಮದಲ್ಲಿ ಜಾಗೃತಿ| ಉದ್ಯೋಗ ಅರಸಿ ಕೇರಳದ ಕಾಸರಗೋಡು, ಗೋವಾ, ಮಂಗಳೂರಿಗೆ ಹೆಚ್ಚು ಜನ ವಲಸೆ ಹೋಗುವ ಊರಲ್ಲಿ ಪೊಲೀಸರು ಹೈಅಲರ್ಟ್|
ಬಾಗಲಕೋಟೆ(ಮಾ.30): ಪೊಲೀಸರಿಬ್ಬರು ಕೆಲಸದ ಅವಧಿ ಮುಗಿದ ಬಳಿಕವೂ ಗ್ರಾಮಸ್ಥರಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಡ್ಡದ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಪೊಲೀಸ್ ಪೇದೆ ನಿಂಗರಾಜ್ ಕೂಡ್ಲಿಗಿ, ರಮೇಶ್ ಇಳಗೇರ ಎಂಬುವರೇ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.
ಹಗಲಲ್ಲಿ ಚೆಕ್ ಪೋಸ್ಟ್ನಲ್ಲಿ ಡ್ಯೂಟಿ ಮಾಡುವ ಪೊಲೀಸರು, ಡ್ಯೂಟಿ ಬಳಿಕ ತಮ್ಮ ಬೀಟ್ ಊರಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.ಗ್ರಾಮದ ಜನರಿಗೆ ಮಾಸ್ಕ್ ಹಾಕಿಕೊಳ್ಳಿ, ಮನೆಯಲ್ಲೇ ಇರಿ,ವಲಸೆ ಹೋಗಿ ಬರುವವರ ಬಗ್ಗೆ ಮಾಹಿತಿ ನೀಡಿ ಸರ್ಕಾರದ ಆದೇಶಗಳನ್ನ ಕಟ್ಟುನಿಟ್ಟಾಗಿ ಪಾಲಿಸಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಪೊಲೀಸರೊಂದಿಗೆ ಸಹಕರಿಸಿ, ಕೊರೋನಾ ಮಹಾಮಾರಿ ಹೊಡೆದೋಡಿಸೋಣ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕರ್ತವ್ಯ ನಿರತ ಪೊಲೀಸರಿಗೆ ಊಟದ ವ್ಯವಸ್ಥೆ: ಮಾನವೀಯತೆ ಮೆರೆದ ಯುವಕರು
ಪೊಲೀಸರ ಜಾಗೃತಿಗೆ ಗ್ರಾಮಸ್ಥರ ಕೂಡ ಸಾಥ್ ನೀಡುತ್ತಿದ್ದಾರೆ. ಜೊತೆಗೆ ಪೊಲೀಸರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉದ್ಯೋಗ ಅರಸಿ ಕೇರಳದ ಕಾಸರಗೋಡು, ಗೋವಾ, ಮಂಗಳೂರಿಗೆ ಹೆಚ್ಚು ಜನ ವಲಸೆ ಹೋಗುವ ಈ ಊರಿನಲ್ಲಿ ಪೊಲೀಸರು ಅಲರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.