ವೈದ್ಯರಿಂದಾಗಿ ಕೊರೋನಾ ಗೆದ್ದೆ: ಸೋಂಕಿನಿಂದ ಗುಣಮುಖರಾದ ವ್ಯಕ್ತಿ ಮಾತು!
ಕೊರೋನಾವನ್ನು ಸೋಲಿಸಿ ಗುಣಮುಖರಾಗಿ ರಾಜೀವ್ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವ್ಯಕ್ತಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು(ಏ.01): ಆರೋಗ್ಯ ಇಲಾಖೆ ಹಾಗೂ ರಾಜೀವ್ಗಾಂಧಿ ಎದೆರೋಗಗಳ ಆಸ್ಪತ್ರೆ ವೈದ್ಯರ ಸಹಕಾರದಿಂದ ಕೊರೋನಾ ಸೋಂಕಿನ ಅಪಾಯದಿಂದ ಸುರಕ್ಷಿತವಾಗಿ ಪಾರಾಗಿ ಬಂದಿದ್ದೇನೆ. ಅಲ್ಲಿನ ವ್ಯವಸ್ಥೆಗಳನ್ನು ನೋಡಿದ ಮೇಲೆ ಸರ್ಕಾರಕ್ಕೆ ನಾನು ಇಷ್ಟುವರ್ಷಗಳ ಕಾಲ ತೆರಿಗೆ ಕಟ್ಟಿದ್ದಕ್ಕೂ ಧನ್ಯತೆಯ ಭಾವ ಮೂಡಿತು.
- ರಾಜ್ಯದಲ್ಲಿ ಕೊರೋನಾ ಸೋಂಕಿಗೆ (4ನೇ ರೋಗಿ) ಗುರಿಯಾಗಿ ಸೋಂಕಿನಿಂದ ಗುಣಮುಖವಾದ ಮೊದಲ ವ್ಯಕ್ತಿಯ ಕೊರೋನಾ ಅನುಭವದ ಮಾತಿದು.
ಕೊರೋನಾ ಸೋಂಕು ಕೇವಲ ರೋಗವಲ್ಲ. ಬಂಧುಗಳು ಯಾರು? ಶತ್ರುಗಳು ಯಾರು ಎಂಬುದನ್ನೂ ಸಹ ತೋರಿಸಿಕೊಡುತ್ತದೆ. ನನ್ನ ಮಟ್ಟಿಗೆ ನನ್ನಿಂದ ಈ ಕ್ಷಣದಲ್ಲಿ ದೂರ ಹೋದವರಿಗಿಂತ ನೆರವಾದವರೇ ಹೆಚ್ಚು. ಅದಕ್ಕಾಗಿ ನಾನು ತೃಪ್ತ ವ್ಯಕ್ತಿಯಾಗಿದ್ದೇನೆ ಎಂದು ಅನುಭವ ಹಂಚಿಕೊಂಡರು.
ರಾಜರಾಜೇಶ್ವರಿ ನಗರ ನಿವಾಸಿ (50) ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಫೇಸ್ಬುಕ್ ಮೂಲಕ ನೆನಪು ಹಂಚಿಕೊಂಡಿದ್ದು, ಸುಮಾರು ಹದಿನೈದು ದಿನಗಳು ನಿರಂತರವಾಗಿ 100ರಿಂದ 102 ಡಿಗ್ರಿ ಆಸುಪಾಸು ಜ್ವರದಿಂದ ಬಳಲಿದೆ. ಉಳಿದಂತೆ ನನಗೆ ಯಾವುದೇ ಸಮಸ್ಯೆ ಆಗಲಿಲ್ಲ. ನನಗೆ ತಿಳಿವಳಿಕೆ ಬಂದಾಗಿನಿಂದ ಜೀವನದಲ್ಲೇ ನಾನು ಇಷ್ಟೊಂದು ಸುದೀರ್ಘ ದಿನಗಳು ಜ್ವರ ಅನುಭವಿಸಿದ್ದು ನೆನಪಿಲ್ಲ. ಈ ವೈರಸ್ ಸೋಂಕಿತರು ಜ್ವರವನ್ನು ಸಹಿಸಿಕೊಳ್ಳದೆ ವಿಧಿ ಇಲ್ಲ. ಸಮಾಧಾನದಿಂದ ಮತ್ತು ಧೈರ್ಯವಾಗಿ ಜ್ವರವನ್ನು ಸಹಿಸಿಕೊಂಡರೆ ಸಾಕು ಸೋಂಕಿನಿಂದ ಪಾರಾಗಬಹುದು ಎಂದು ವಿಶ್ವಾಸ ತುಂಬಿದರು.
ಮಾಚ್ರ್ ಮೊದಲ ವಾರದಲ್ಲಿ ಅನಿವಾರ್ಯವಾಗಿ ನಾನು ಅಮೇರಿಕಾ ಹಾಗೂ ಲಂಡನ್ಗೆ ಹೋಗಬೇಕಾಯಿತು. ಈ ವೇಳೆ ಲಂಡನ್ ವಿಮಾನ ನಿಲ್ದಾಣದಲ್ಲಿ ನಾನು ಸಾಕಷ್ಟುಎಚ್ಚರ ವಹಿಸಿದ್ದೆ. ಆದರೂ ಶೌಚಾಲಯ ಅಥವಾ ಫಿಂಗರ್ ಪ್ರಿಂಟ್ ಸ್ಕಾ್ಯನರ್ ಮೂಲಕ ನನಗೆ ಸೋಂಕು ತಗುಲಿರಬಹುದು. ಅಲ್ಲಿ ಒಂದೆರಡು ದಿನಗಳಲ್ಲಿ ನನಗೆ ಜ್ವರ ಕಾಣಿಸಿಕೊಂಡಿತು. ಆಗ ಅಲ್ಲಿಯೇ ಮಾತ್ರೆ ತೆಗೆದುಕೊಂಡು ನೇರವಾಗಿ ಬೆಂಗಳೂರು ವಿಮಾನ ಏರಿದೆ ಎಂದರು.
ಎಲ್ಲರೊಂದಿಗೂ ಅಂತರ ಕಾಯ್ದುಕೊಂಡೆ
ವಿಮಾನ ನಿಲ್ದಾಣದಲ್ಲಿ ನಾನೇ ಹುಡುಕಿಕೊಂಡು ಹೋಗಿ ಮಾತ್ರೆ ತೆಗೆದುಕೊಂಡಿದ್ದೇನೆ. ನನ್ನ ಪರಿಸ್ಥಿತಿ ಈ ರೀತಿ ಇದೆ ಎಂದು ಹೇಳಿದೆ. ಆಗ ಇನ್ನೂ ಅವರು ಪರೀಕ್ಷೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ನಾನು ಮನೆಗೆ ಬಂದು ಮಹಡಿ ಮನೆ ಮೇಲೆ ಹೋಗಿ ಸದಸ್ಯರ ಜೊತೆ ಅಂತರ ಕಾಯ್ದುಕೊಂಡೆ. ರೋಗ ಲಕ್ಷಣಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗಲು ಒಂದು ಖಾಸಗಿ ಆಸ್ಪತ್ರೆಗೆ ಪ್ರಯತ್ನಿಸಿದರೂ ಅವರು ಅವಕಾಶ ನೀಡಲಿಲ್ಲ ಎಂದು ಅವರು ದೂರಿದರು.
ಬಳಿಕ ಮಾಚ್ರ್ 8ಕ್ಕೆ ರಾಜೀವ್ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆಗೆ ಒಳಗಾದೆ. ಮನೆಗೆ ವಾಪಸಾಗಿದ್ದ ನನಗೆ ಮರುದಿನ ವೈದ್ಯರೊಬ್ಬರು ಕರೆ ಮಾಡಿ ವೈರಸ್ ಲೋಡ್ ತುಂಬಾ ಇದ್ದು, ತಕ್ಷಣ ದಾಖಲಾಗುವಂತೆ ಸೂಚಿಸಿದರು.