Asianet Suvarna News Asianet Suvarna News

ಉತ್ತರ ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸ ಬನ್ನಿ: ಸಚಿವ ಅಶ್ವತ್ಥ ನಾರಾಯಣ

*  ಬಿಯಾಂಡ್‌ ಬೆಂಗಳೂರು ಉದ್ಯಮ ಸ್ಥಾಪಿಸಲು ಸಾಕಷ್ಟು ಸೌಲಭ್ಯ
*  ಇನೋವೆಷನ್‌ ಆ್ಯಂಡ್‌ ಇಂಪ್ಯಾಕ್ಟ್ ಹುಬ್ಬಳ್ಳಿ ಸಮಾವೇಶ
* ಉನ್ನತ ಶಿಕ್ಷಣ ನೀತಿ ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಸರ್ಕಾರ

Minister CN Ashwathnarayan Invite to Entrepreneurs For Start Business in North Karnataka grg
Author
Bengaluru, First Published Oct 6, 2021, 11:41 AM IST

ಹುಬ್ಬಳ್ಳಿ(ಅ.06):  ಬಿಯಾಂಡ್‌ ಬೆಂಗಳೂರು’(BeyondBengaluru) ಅಂದರೆ ಬೆಂಗಳೂರು ಹೊರತಾಗಿ ಇತರೆ ನಗರಗಳಲ್ಲಿ ಉದ್ಯಮ ಸ್ಥಾಪನೆಗೆ ಮುಂದಾಗುವವರಿಗೂ ಸರ್ಕಾರ ಸಾಕಷ್ಟು ವಿನಾಯ್ತಿ ನೀಡುತ್ತಿದೆ. ಬನ್ನಿ ಬೇರೆ ಬೇರೆ ನಗರಗಳಲ್ಲಿ ಉದ್ಯಮ ಸ್ಥಾಪಿಸಬನ್ನಿ..!

ಇದು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಐಟಿ​-ಬಿಟಿ ಇಲಾಖೆ ಆಯೋಜಿಸಿದ್ದ ‘ಬಿಯಾಂಡ್‌ ಬೆಂಗಳೂರು ಶೀರ್ಷಿಕೆಯಡಿ ‘ಇನೋವೆಷನ್‌ ಆ್ಯಂಡ್‌ ಇಂಪ್ಯಾಕ್ಟ್ ಹುಬ್ಬಳ್ಳಿ’ ಸಮಾವೇಶದಲ್ಲಿ ಐಟಿ-ಬಿಟಿ ಸಚಿವ ಅಶ್ವತ್ಥ ನಾರಾಯಣ(CN Ashwathnarayan) ಉದ್ಯಮಿಗಳಿಗೆ ಆಹ್ವಾನ ನೀಡಿದ ಬಗೆ.

ಹುಬ್ಬಳ್ಳಿಯಲ್ಲಿ(Hubballi) ಎ.ಐ. (ಕೃತಕ ಬುದ್ಧಿಮತ್ತೆ) ಮತ್ತು ಡಾಟಾ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಉತ್ಕೃಷ್ಟತಾ ಕೇಂದ್ರವನ್ನು (ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌) ಶೀಘ್ರವೇ ಸ್ಥಾಪಿಸಲಾಗುವುದು. ಸಾಫ್ಟ್‌ವೇರ್‌ ಪಾರ್ಕ್ ನಿರ್ಮಾಣಕ್ಕೆ 50 ಎಕರೆ ಜಮೀನು ಒದಗಿಸಲಾಗುವುದು ಎಂದೂ ತಿಳಿಸಿದರು.

ಸಾಲ ಮರುಪಾವತಿಗೆ ಬಿಡಿಗಾಸೂ ಇಲ್ಲ ಎಂದಿದ್ದ ಅಂಬಾನಿಗೆ ವಿದೇಶದಲ್ಲಿ 18 ಕಂಪನಿ!

ಬೆಂಗಳೂರು(Bengaluru) ಹೊರತಾಗಿ ರಾಜ್ಯದ ಇತರೆ ನಗರಗಳಲ್ಲಿ ಉದ್ದಿಮೆ ಸ್ಥಾಪನೆಗೆ ಉತ್ತೇಜನ ನೀಡಲು ಸರ್ಕಾರ ಹತ್ತು ಹಲವು ಬಗೆಯಲ್ಲಿ ವಿನಾಯ್ತಿ ನೀಡುತ್ತಿದೆ. ಉದ್ಯಮ ಸ್ಥಾಪನೆಯ ಪ್ರಾರಂಭದ ಹಂತ, ಭೂಮಿ ಖರೀದಿಗೆ ಶೇ. 25, ಉದ್ಯಮ ಸ್ಥಾಪನೆ ವೆಚ್ಚದ ಶೇ. 45ರಷ್ಟುಸಹಾಯ ಧನ ಸರ್ಕಾರ ನೀಡುತ್ತಿದೆ. ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಶೇ. 5ರಷ್ಟು ಪ್ರೋತ್ಸಾಹ ಧನ, ಮುದ್ರಾಂಕ ಶುಲ್ಕದ ವಿನಾಯ್ತಿ, ರಿಯಾಯ್ತಿ ದರದಲ್ಲಿ ವಿದ್ಯುತ್‌, ಕೆಲವು ಉದ್ದಿಮೆಗಳಿಗೆ ಬಾಡಿಗೆ ವೆಚ್ಚವನ್ನು ಸಹ ಭರಿಸಲಾಗುತ್ತಿದೆ. ಈ ಸೌಲಭ್ಯಗಳ್ಯಾವವು ಬೆಂಗಳೂರಲ್ಲಿ ಸ್ಥಾಪನೆಯಾಗುವ ಉದ್ಯಮಗಳಿಗಿಲ್ಲ ಎಂದು ಸ್ಪಷ್ಟಪಡಿಸಿದರು.

ಎನ್‌ಇಪಿ ಆಶಯ:

ಶಿಕ್ಷಣ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ತರುವ ಮಹತ್ತರದ ಸಾಧನ. ಹೊಸ ತಾಂತ್ರಿಕ ಬೆಳವಣಿಗೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌.ಇ.ಪಿ-2020) ಆಶಯ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಮಟ್ಟದಲ್ಲಿ ಮುಂದಿನ ವರ್ಷದಿಂದಲೇ ಮಕ್ಕಳಿಗೆ ಕೋಡಿಂಗ್‌ ಕಲಿಕೆ ಪಠ್ಯಕ್ರಮದ ಭಾಗವಾಗುತ್ತಿದೆ. ಬಡವರ ಮಕ್ಕಳಿಗೂ ತಾಂತ್ರಿಕ ಶಿಕ್ಷಣ ನೀಡಲಾಗುವುದು. ಶಾಲಾ ಹಂತದಲ್ಲಿ ನೀಡಲಾಗುವ ತಾಂತ್ರಿಕ ಶಿಕ್ಷಣವನ್ನು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ. ಜೊತೆ ಸಂಯೋಜಿಸಲಾಗುವುದು.

ಉನ್ನತ ಶಿಕ್ಷಣ ನೀತಿ ರೂಪಿಸುವಲ್ಲಿ ರಾಜ್ಯ ಸರ್ಕಾರ ಮುಂಚೂಣಿಯಲ್ಲಿದೆ. ಪದವಿ ಶಿಕ್ಷಣದಲ್ಲಿ ಡಿಜಿಟಲ್‌ ಕಲಿಕೆಗೆ ಅವಕಾಶ ನೀಡಲಾಗಿದೆ. ಇದರ ಮೇಲೆ ಕಡ್ಡಾಯ ಪರೀಕ್ಷೆ ನೆಡೆಸಿ ಮೌಲ್ಯಮಾಪನ ಮಾಡಲಾಗುವುದು. ರಾಜ್ಯದ ಎಂಜಿನಿಯರಿಂಗ್‌ ಕಾಲೇಜುಗಳ ಪಠ್ಯಕ್ರಮ ಐಐಟಿ ಪಠ್ಯಕ್ರಮಕ್ಕಿಂತ ಉನ್ನತವಾಗಿದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಹೆಚ್ಚಾಗಿ ನೀಡಲು 3 ವಾರಗಳಿದ್ದ ಇಂಟರ್‌ಶಿಪ್‌ ಅವಧಿಯನ್ನು 30 ವಾರಗಳಿಗೆ ಹೆಚ್ಚಿಸಲಾಗಿದೆ. ಈ ಅವಧಿಯಲ್ಲಿ ಖಾಸಗಿ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಭತ್ಯೆ ಸಹ ನೀಡಲು ಯೋಚಿಸಲಾಗಿದೆ. ವಿದೇಶಗಳಲ್ಲಿ ಇಂಟರ್‌ಶಿಪ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಫ್ಯೂಚರ್‌ ಡಿಜಿಟಲ್‌ ಜಾಬ್ಸ್‌ ಹುಬ್ಬಳ್ಳಿ ಎಂಬ ಘಟಕ ಆರಂಭಿಸಲಾಗಿದೆ. ಸದ್ಯ ಶಿಕ್ಷಣ ಪಡೆದು ಹೊರ ಬರುವ ವಿದ್ಯಾರ್ಥಿಗಳಿಗೆ ಹೆಸರಾಂತ ಕಂಪನಿಗಳಲ್ಲಿ 2700 ಉದ್ಯೋಗ ಅವಕಾಶಗಳು ಲಭ್ಯವಿವೆ ಎಂದರು.

ಪಾಲಿಟೆಕ್ನಿಕ್ ಮೂಲಕ ಎಂಜಿನಿಯರಿಂಗ್‌ಗೆ ಹೆಚ್ಚಿನ ಅವಕಾಶ: ಸಚಿವ ಅಶ್ವತ್ಥನಾರಾಯಣ

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಹುಬ್ಬಳ್ಳಿ -ಧಾರವಾಡ ಹಾಗೂ ಕಲಬುರಗಿ ಭಾಗಗಳಲ್ಲಿ ಎಲೆಕ್ಟ್ರಾನಿಕ್ಸ್‌ ಹಾಗೂ ಹಾರ್ಡ್‌ವೇರ್‌ ಉತ್ಪಾದನಾ ಘಟಕ ಸ್ಥಾಪಿಸಬೇಕು. ಭಾರತ ಸರಿ ಸುಮಾರು 3.7 ಟ್ರಿಲಿಯನ್‌ ಮೊತ್ತದ ಹಾರ್ಡ್‌ವೇರ್‌ ಹಾಗೂ ಎಲೆಕ್ಟ್ರಾನಿಕ್‌ ಉತ್ಪನ್ನ ಆಮದು ಮಾಡಿಕೊಳ್ಳುತ್ತಿದೆ. ಈ ಕ್ಷೇತ್ರದಲ್ಲಿ ಭಾರತ ಸ್ವಾವಲಂಭಿಯಾಗಬೇಕಿದೆ. ಹುಬ್ಬಳ್ಳಿ ಎಲೆಕ್ಟ್ರಾನಿಕ್‌ ಉತ್ಪನ್ನಗಳ ತಯಾರಿಕ ಹಬ್‌ ಆಗಬೇಕು. ವಿಶ್ವದ 10 ಮುಂಚೂಣಿ ಹಾರ್ಡ್‌ವೇರ್‌ ಕಂಪನಿಗಳು ದೇಶಕ್ಕೆ ಆಗಮಿಸುತ್ತಿವೆ. ಇದರಲ್ಲಿ ಎರಡು ಕಂಪನಿಗಳನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಲು ಆಹ್ವಾನಿಸಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌(Karnataka Digital Economy Mission) ಹಲವು ಖಾಸಗಿ ಸಂಸ್ಥೆಗಳೊಂದಿಗೆ ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ತನ್ನ ಕಾರ್ಯ ಆರಂಭಿಸಲು ಒಡಂಬಡಿಕೆ ಮಾಡಿಕೊಳ್ಳಲಾಯಿತು.

ರಾಜ್ಯ ನವೋದ್ಯಮ ದೂರದರ್ಶಿತ್ವ ಮಂಡಳಿ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌, ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ (ಕೆಡಿಇಎಂ) ಅಧ್ಯಕ್ಷ ಬಿ.ವಿ.ನಾಯ್ಡ, ಏಕಸ್‌ ಸಂಸ್ಥೆಯ ಅರವಿಂದ ಮೆಳ್ಳಿಗೇರಿ, ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕೆಎಲ್‌ಇ ತಾಂತ್ರಿಕ ವಿ.ವಿ. ಉಪ ಕುಲಪತಿ ಅಶೋಕ್‌ ಎಸ್‌.ಶೆಟ್ಟರ್‌, ಕರ್ನಾಟಕ ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ. ಕೆ.ಬಿ. ಗುಡಿಸಿ, ಐಐಟಿ ನಿರ್ದೇಶಕ ಪ್ರೊ. ಕವಿ ಮಹೇಶ್‌, ಸಂಜೀವ್‌ ಗುಪ್ತ, ವಿವೇಕ್‌ ಪವಾರ್‌, ಐಟಿ-ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್‌ ಮತ್ತಿತರರು ಇದ್ದರು.
 

Follow Us:
Download App:
  • android
  • ios