ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ, ಲೇಖಕ ಕೆ.ಜಿ ನಾಗರಾಜಪ್ಪಗೆ ಅಕಾಡಮಿ ಗೌರವ
ಕನ್ನಡ ಸಾಹಿತ್ಯ ಲೋಕಕ್ಕೆ ಬುಧವಾರ ಎರಡೆರಡು ಕೊಡುಗೆ ಸಿಕ್ಕಿದೆ. ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಮತ್ತು ಲೇಖಕ ಕೆ.ಜಿ ನಾಗರಾಜಪ್ಪ ಅವರಿಗೆ ಸಾಹಿತ್ಯ ಅಕಾಡಮಿ ಗೌರವ ದೊರೆತಿದೆ.
ಬೆಂಗಳೂರು[ಡಿ.05] ಸಂಶೋಧಕ, ನಿಘಂಟು ತಜ್ಞ ಜಿ. ವೆಂಕಟಸುಬ್ಬಯ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಮ್ಮಾನ್ಗೆ ಪಾತ್ರರಾಗಿದ್ದಾರೆ. ಲೇಖಕ ಕೆ.ಜಿ ನಾಗರಾಜಪ್ಪ ಅವರ ಚಿಂತನಶೀಲ ಬರಹ ಮಾಲಿಕೆ ‘ಅನುಶ್ರೇಣಿ ಯಜಮಾನಿಕೆ’ ಪುಸ್ತಕಕ್ಕೆ 2018ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ.
2016-17ನೇ ಸಾಲಿನ ಭಾಷಾ ಸಮ್ಮಾನ್ ಪುರಸ್ಕಾರಕ್ಕೆ ವೆಂಕಟಸುಬ್ಬಯ್ಯ ಆಯ್ಕೆಯಾಗಿದ್ದಾರೆ. ಎರಡೂ ಪ್ರಶಸ್ತಿಯು ಒಂದು ಲಕ್ಷ ನಗದು ಹಾಗೂ ಸ್ಮರಣಿಕೆ ಹೊಂದಿರಲಿದೆ.
ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ ಚಂದ್ರಶೇಖರ್ ಕಂಬಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಭಾಷೆಗಳ ಒಟ್ಟು 24 ಪುಸ್ತಕಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ. 2019ರ ಜನವರಿ 29ರಂದು ದೆಹಲಿಯಲ್ಲಿ ಸಾಧಕರನ್ನು ಗೌರವಿಸಲಾಗುವುದು.