ಆರ್ಥಿಕ ಚೇತರಿಕೆಯಲ್ಲಿ ಭಾರತವೇ ಮುಂಚೂಣಿ: ಬಂಡವಾಳ ಹೂಡಲು ಮೋದಿ ಕರೆ!

By Kannadaprabha NewsFirst Published Jul 10, 2020, 8:09 AM IST
Highlights

ಆರ್ಥಿಕ ಚೇತರಿಕೆಯಲ್ಲಿ ಭಾರತವೇ ಮುಂಚೂಣಿ| ನಮ್ಮಲ್ಲಿ ಅವಕಾಶ ಇವೆ, ಬಂಡವಾಳ ಹೂಡಿ: ಮೋದಿ| ಹೂಡಿಕೆದಾರರಿಗೆ ಭಾರತದಲ್ಲಿ ಕೆಂಪು ಹಾಸಿನ ಸ್ವಾಗತ

ನವದೆಹಲಿ(ಜು. 10): ಕೊರೋನಾದಿಂದ ಉಂಟಾಗಿರುವ ಆರ್ಥಿಕ ಹಿಂಜರಿತದಿಂದ ಜಗತ್ತು ಚೇತರಿಸಿಕೊಳ್ಳುವುದರಲ್ಲಿ ಭಾರತ ಮುಂಚೂಣಿ ಪಾತ್ರ ವಹಿಸಲಿದೆ. ಹೀಗಾಗಿ ಭಾರತದಲ್ಲಿ ವಿಪುಲ ವಾಣಿಜ್ಯ ಅವಕಾಶಗಳಿದ್ದು, ಜಾಗತಿಕ ಕಂಪನಿಗಳು ಬಂದು ಬಂಡವಾಳ ಹೂಡಿಕೆ ಮಾಡಬೇಕು. ನಾವು ನಿಮಗೆ ಕೆಂಪು ಹಾಸಿನ ಸ್ವಾಗತ ನೀಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಭಾರತವು ಕೊರೋನಾ ಮಹಾಮಾರಿಯಿಂದ ಜನರ ಆರೋಗ್ಯವನ್ನು ರಕ್ಷಿಸಲು ಸಾಕಷ್ಟುಕ್ರಮ ಕೈಗೊಳ್ಳುವುದರ ಜೊತೆಗೆ ಆರ್ಥಿಕತೆಯ ಆರೋಗ್ಯವನ್ನೂ ರಕ್ಷಿಸಲು ಎಲ್ಲಾ ಕ್ರಮ ಕೈಗೊಂಡಿದೆ. ಇದರ ಪರಿಣಾಮವಾಗಿ ಈಗಾಗಲೇ ಆರ್ಥಿಕತೆಯಲ್ಲಿ ಹೊಸ ಹಸಿರು ಚಿಗುರುಗಳು ಕಾಣಿಸುತ್ತಿವೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು ಜಗತ್ತಿನಲ್ಲೇ ಅತ್ಯಂತ ಮುಕ್ತವಾದ ಆರ್ಥಿಕತೆಗಳಲ್ಲಿ ಒಂದಾಗಿದೆ. ಇಲ್ಲಿರುವ ಬಂಡವಾಳಸ್ನೇಹಿ ಪರಿಸರ, ಸ್ಪರ್ಧಾತ್ಮಕ ವಾತಾವರಣ ಹಾಗೂ ಅಸೀಮ ಅವಕಾಶಗಳ ಲಾಭವನ್ನು ಜಾಗತಿಕ ಕಂಪನಿಗಳು ಪಡೆದುಕೊಳ್ಳಬೇಕು ಎಂದೂ ಹೇಳಿದ್ದಾರೆ.

ಹೊಸ ಭಾರತದ ಕನಸು ಬಿಚ್ಚಿಟ್ಟ ಮೋದಿ; ಇಂಡಿಯಾ ಗ್ಲೋಬಲ್ ವೀಕ್ 2020 ಭಾಷಣದ ವಿವರ!

ಬ್ರಿಟನ್ನಿನಲ್ಲಿ ಆಯೋಜಿಸಿರುವ ‘ಇಂಡಿಯಾ ಗ್ಲೋಬಲ್‌ ವೀಕ್‌-2020’ ಸಮಾವೇಶವನ್ನು ಗುರುವಾರ ಆನ್‌ಲೈನ್‌ನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ತಾಂತ್ರಿಕ ಉದ್ದಿಮೆಗಳು ಹಾಗೂ ತಂತ್ರಜ್ಞರು ಆರೋಗ್ಯ, ಬ್ಯಾಂಕಿಂಗ್‌ ಮತ್ತು ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳ ನೆರವಿನಿಂದ ಸದಾ ಜಾಗತಿಕ ಮಟ್ಟದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಹೀಗಾಗಿ ಜಾಗತಿಕ ಆರ್ಥಿಕತೆಯ ಮರುಚೇತರಿಕೆಯಲ್ಲಿ ಭಾರತ ಮುಂಚೂಣಿ ಪಾತ್ರ ವಹಿಸಲಿದೆ ಎಂಬ ನಂಬಿಕೆಯಿದೆ ಎಂದು ಹೇಳಿದರು. ಕೊರೋನಾ ವಿಶ್ವವ್ಯಾಪಿಯಾದ ಬಳಿಕ ಮೋದಿ ಅವರು ಮಾತನಾಡಿದ ಮೊದಲ ಜಾಗತಿಕ ಸಮಾವೇಶ ಇದಾಗಿದೆ. 30 ದೇಶಗಳ 5000 ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಯ ಕ್ರಮಗಳಿಂದ ಇಂದು ಭಾರತದ ಕೃಷಿ, ಸರಕು, ವಾಣಿಜ್ಯ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ವ್ಯಾಪಕ ಹೂಡಿಕೆಯ ಅವಕಾಶಗಳು ಸೃಷ್ಟಿಯಾಗಿವೆ. ನಾವು ನಿಮಗೆ ಕೆಂಪು ಹಾಸಿನ ಸ್ವಾಗತ ನೀಡುತ್ತಿದ್ದೇವೆ ಎಂದು ಬಂಡವಾಳ ಹೂಡಿಕೆದಾರರಿಗೆ ಆಹ್ವಾನ ನೀಡಿದ ಅವರು, ಭಾರತ ಇಂದು ನೀಡುತ್ತಿರುವಂತಹ ಅವಕಾಶಗಳನ್ನು ಬಹಳ ಕಡಿಮೆ ದೇಶಗಳು ನೀಡುತ್ತವೆ ಎಂದು ಕಿವಿಮಾತು ಹೇಳಿದರು.

ಗುರುವಾರ ಪ್ರಧಾನಿ ಮೋದಿ ಮೊದಲ ಜಾಗತಿಕ ಕಾರ್ಯಕ್ರಮ!

ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಕ್ಷೇತ್ರದಲ್ಲೂ ಸಾಕಷ್ಟುಸುಧಾರಣೆ ತರಲಾಗಿದೆ. ಇವು ದೊಡ್ಡ ಉದ್ದಿಮೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಕೃಷಿ, ಸರಕು ಹಾಗೂ ರಕ್ಷಣಾ ಕ್ಷೇತ್ರದಲ್ಲೂ ಖಾಸಗಿ ಹೂಡಿಕೆಗೆ ಸಾಕಷ್ಟುಅವಕಾಶಗಳಿವೆ. ಅಸಾಧ್ಯವಾದುದನ್ನು ಸಾಧಿಸುವ ಶಕ್ತಿ ಭಾರತೀಯರಿಗಿದೆ. ಆದ್ದರಿಂದ ಕೊರೋನಾ ಬಿಕ್ಕಟ್ಟಿನ ನಂತರ ಭಾರತದ ಆರ್ಥಿಕತೆ ಈಗಾಗಲೇ ಚೇತರಿಸಿಕೊಳ್ಳಲು ಆರಂಭಿಸಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ನಾವು ಆರ್ಥಿಕತೆಯನ್ನು ಸುಧಾರಿಸುವ ಮಾತನಾಡುವಾಗ ಪರಿಸರಕ್ಕೆ ಪೂರಕವಾಗಿ ಸುಸ್ಥಿರ ರೀತಿಯಲ್ಲಿ ಸುಧಾರಣೆಯ ಕ್ರಮಗಳನ್ನು ಜಾರಿಗೊಳಿಸುತ್ತೇವೆ. ಜಗತ್ತಿನ ಒಳಿತಿಗೆ ಏನು ಮಾಡಲು ಸಾಧ್ಯವಿದೆಯೋ ಅದನ್ನೆಲ್ಲ ಮಾಡಲು ಭಾರತ ಸಿದ್ಧವಿದೆ ಎಂದು ತಿಳಿಸಿದರು.

click me!