ಬಾಂಗ್ಲಾ ದಂಗೆ: ಶೇಖ್ ಹಸೀನಾ ದೇಶ ತೊರೆಯುತ್ತಿದ್ದಂತೆ ಬಾಂಗ್ಲಾದಲ್ಲಿ ಇಬ್ಬರು ಹಿಂದೂಗಳ ಹತ್ಯೆ

By Kannadaprabha NewsFirst Published Aug 6, 2024, 8:11 AM IST
Highlights

ಬಾಂಗ್ಲಾ ಸರ್ಕಾರದ ವಿರುದ್ಧದ ಸ್ಥಳೀಯರ ಮೀಸಲು ಹೋರಾಟ, ಹಿಂದೂಗಳ ವಿರುದ್ಧದ ದಾಳಿಗೂ ಕಾರಣವಾಗಿದೆ. ರಂಗ್‌ಪುರ ಎಂಬಲ್ಲಿ ಪ್ರತಿಭಟನಾಕಾರರು ಹಿಂದೂಗಳ ಮನೆ ಮೇಲೆ ದಾಳಿ ನಡೆಸಿ, ಇಬ್ಬರನ್ನು ಹತ್ಯೆಗೈದಿದ್ದಾರೆ.

ಢಾಕಾ: ಬಾಂಗ್ಲಾ ಸರ್ಕಾರದ ವಿರುದ್ಧದ ಸ್ಥಳೀಯರ ಮೀಸಲು ಹೋರಾಟ, ಹಿಂದೂಗಳ ವಿರುದ್ಧದ ದಾಳಿಗೂ ಕಾರಣವಾಗಿದೆ. ರಂಗ್‌ಪುರ ಎಂಬಲ್ಲಿ ಪ್ರತಿಭಟನಾಕಾರರು ಹಿಂದೂಗಳ ಮನೆ ಮೇಲೆ ದಾಳಿ ನಡೆಸಿ, ಇಬ್ಬರನ್ನು ಹತ್ಯೆಗೈದಿದ್ದಾರೆ. ಹಿಂದೂ ಅವಾಮಿ ಲೀಗ್‌ ಪಕ್ಷದ ನಾಯಕ ಹರದನ್‌ ರಾಯ್‌ ಹಾಗೂ ಅವರ ಅಳಿಯನನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ ನೋಖಾಲಿ ಎಂಬಲ್ಲಿ ಹಿಂದೂಗಳ ಮನೆಗೆ ಉದ್ರಿಕ್ತರ ಗುಂಪು ನುಗ್ಗಿ ಹಲ್ಲೆ ನಡೆಸುತ್ತಿರುವ ವಿಡಿಯೋಗಳು ಸಿಕ್ಕಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಿಂದೂ ಮಹಿಳೆಯೊಬ್ಬರು ‘ಭಗವಂತ ಭಗವಂತ’ ಎಂದು ಕೂಗುತ್ತಿರುವುದು ಅದರಲ್ಲಿ ಸೆರೆಯಾಗಿದೆ.

ಬಾಂಗ್ಲಾ ಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಪುತ್ಥಳಿ ಧ್ವಂಸ

Latest Videos

ಢಾಕಾ: ಬಾಂಗ್ಲಾದಲ್ಲಿ ಪ್ರತಿಭಟನಾ ನಿರತ ಯುವಸಮೂಹ, ಬಾಂಗ್ಲಾದ ಸ್ಥಾಪಕ ಹಾಗೂ ಮಾಜಿ ಪ್ರಧಾನಿ ಶೇಖ್‌ ಹಸೀನಾರ ತಂದೆ, ಮಾಜಿ ಪ್ರಧಾನಿ ಶೇಖ್ ಮುಜಿಬುರ್ ರೆಹಮಾನ್ ಅವರ ಪುತ್ಥಳಿಯನ್ನೂ ಸೋಮವಾರ ಧ್ವಂಸಗೊಳಿಸಿದ್ದಾರೆ. ಪಾಕಿಸ್ತಾನದ ಪೂರ್ವಭಾಗವಾಗಿದ್ದ ಬಾಂಗ್ಲಾ ಸ್ವತಂತ್ರ ದೇಶವಾಗಬೇಕೆಂದು ರೆಹಮಾನ್‌ರ ಮುಂದಾಳತ್ವದಲ್ಲಿ ಅವಾಮಿ ಲೀಗ್ ಹೋರಾಟ ನಡೆಸಿತ್ತು. 1971ರಲ್ಲಿ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದಾಗ ಮೊದಲ ಪ್ರಧಾನಿಯಾದ ಇವರು, ಅಧ್ಯಕ್ಷೀಯ ಮಾದರಿಯ ಸರ್ಕಾರದ ಸಂವಿಧಾನವನ್ನು ಜಾರಿಗೆ ತಂದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಬಾಂಗ್ಲಾ ಪ್ರಧಾನಿ ದೇಶ ಬಿಟ್ಟು ಹೋಗುವಂತೆ ಮಾಡಿದ ದಂಗೆಗೆ ಕಾರಣವಾದ ವಿವಾದಾತ್ಮಕ ಮೀಸಲು ಯಾವುದು?

ಕೋಲ್ಕತಾ - ಢಾಕಾ ಮೈತ್ರಿ ಎಕ್ಸ್‌ಪ್ರೆಸ್‌ ರೈಲು ರದ್ದು

ಕೋಲ್ಕತಾ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ತೀವ್ರಗೊಂಡಿರುವುದರಿಂದ ಕೋಲ್ಕತಾ ಹಾಗೂ ಢಾಕಾ ನಡುವೆ ಸಂಚರಿಸುತ್ತಿದ್ದ ‘ಮೈತ್ರಿ ಎಕ್ಸ್‌ಪ್ರೆಸ್‌’ ರೈಲಿನ ಸೇವೆ ಮಂಗಳವಾರೂ ರದ್ದಾಗಿರಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಬಾಂಗ್ಲಾದಲ್ಲಿ ವಿದ್ಯಾರ್ಥಿ ಸಂಘರ್ಷ ಜೋರಾದ ಬೆನ್ನಲ್ಲೇ ಈ ರೈಲು ಜು.19ರಿಂದಲೇ ತನ್ನ ಸಂಚಾರವನ್ನು ನಿಲ್ಲಿಸಿತ್ತು. ಆದರೆ ಬಾಂಗ್ಲಾದಲ್ಲಿನ ಅಧಿಕಾರಿಗಳ ಸೂಚನೆ ಮೇರೆಗೆ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಪೂರ್ವ ರೈಲ್ವೆ ಹೇಳಿದೆ. ಈ ರೈಲು ವಾರಕ್ಕೆ ಎರಡು ಬಾರಿ ಕೋಲ್ಕತಾದಿಂದ ಹೊರಟು ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ತಲುಪುತ್ತಿತ್ತು. 2008ರಲ್ಲಿ ಲಾಲು ಪ್ರಸಾದ್‌ ಯಾದವ್‌ ಅವರು ರೈಲ್ವೆ ಸಚಿವರಾಗಿದ್ದಾಗ ಉದ್ಘಾಟಿಸಿದ್ದರು.

ಢಾಕಾ ಏರ್ಪೋರ್ಟ್‌ ಕಾರ್‍ಯಾಚರಣೆ ಸ್ಥಗಿತ

ಢಾಕಾ: ಬಾಂಗ್ಲಾದೇಶದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವ ಢಾಕಾದ ಹಜ಼್ರತ್‌ ಶಾಹ್‌ಜಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಹಿಂಸಾಚಾರ ತೀವ್ರಗೊಂಡು ಪ್ರತಿಭಟನಾಕಾರರು ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ್ದಾರೆ. ಹೀಗಾಗಿ ವಿಮಾನಗಳ ಹಾರಾಟಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ನಿಲ್ದಾಣದ ಕಾರ್ಯನಿರ್ವಹಕ ನಿರ್ದೇಶಕ ಕ್ಯಾಪ್ಟನ್‌ ಕಮ್ರುಲ್‌ ಇಸ್ಲಾಂ ಹೇಳಿದ್ದಾರೆ.

ಬಾಂಗ್ಲಾ ಪ್ರಧಾನಿ ಮನೆಯಲ್ಲಿ ಪ್ರತಿಭಟನಾಕಾರರ ದರೋಡೆ, ಶೇಖ್‌ ಹಸಿನಾರ 'ಬ್ರಾ..' ಕೂಡ ಬಿಡದ ಲೂಟಿಕೋರರು!

ಬಾಂಗ್ಲಾ: ಹಸೀನಾ ವಿರೋಧಿ ಜಿಯಾ ಬಿಡುಗಡೆಗೆ ಆದೇಶ

ಢಾಕಾ: ಬಾಂಗ್ಲಾದೇಶದಿಂದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ಪರಾರಿ ಬೆನ್ನಲ್ಲೇ, ಜೈಲು ಪಾಲಾಗಿದ್ದ ಅವರ ರಾಜಕೀಯ ಕಡುವೈರಿ ಹಾಗೂ ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ಬಿಡುಗಡೆಗೆ ಬಾಂಗ್ಲಾ ಅಧ್ಯಕ್ಷರು ಸೋಮವಾರ ರಾತ್ರಿ ಆದೇಶಿಸಿದ್ದಾರೆ. ವಿವಿಧ ಭ್ರಷ್ಟಾಚಾರ ಅರೋಪ ಹೊರಿಸಿ 2 ಬಾರಿ ಪ್ರಧಾನಿ ಆಗಿದ್ದ ಜಿಯಾರನ್ನು ಹಸೀನಾ ಜೈಲಿಗೆ ಹಾಕಿಸಿದ್ದರು. ಇದೇ ವೇಳೆ, ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಂಧಿತರಾಗಿದ್ದ ಎಲ್ಲರ ಬಿಡುಗಡೆಗೂ ಅಧ್ಯಕ್ಷರು ಆದೇಶಿಸಿದ್ದಾರೆ.

ಢಾಕಾಗೆ ಏರ್‌ ಇಂಡಿಯಾ ವಿಮಾನ ಹಾರಾಟ ರದ್ದು
ನವದೆಹಲಿ: ಬಾಂಗ್ಲಾ ಹಿಂಸಾಚಾರ ಹಿನ್ನೆಲೆ ಏರ್‌ಇಂಡಿಯಾ ವಿಮಾನಯಾನ ಸಂಸ್ಥೆ ಸೋಮವಾರ ಢಾಕಾಗೆ ತನ್ನ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ. ದೆಹಲಿಯಿಂದ ಢಾಕಾಗೆ ಪ್ರತಿದಿನ ಎರಡು ಏರ್‌ಇಂಡಿಯಾ ವಿಮಾನಗಳು ಹಾರಾಡುತ್ತಿದ್ದವು. ಬಾಂಗ್ಲಾದ ಉದ್ವಿಗ್ನ ಪರಿಸ್ಥಿತಿ ಕಾರಣ ಈ ಸೇವೆಯನ್ನು ರದ್ದುಗೊಳಿಸಿದೆ. ಇದೇ ವೇಳೆ ಇಂಡಿಗೋ ಕೂಡಾ ಢಾಕಾದ ತನ್ನ ವಿಮಾನಗಳ ಸಂಚಾರ ರದ್ದುಪಡಿಸಿತು.

click me!