Shivamogga: ಹಿಂದೂಪರ ಕಾರ್ಯಕರ್ತನ ಭೀಕರ ಹತ್ಯೆ, ಪರಿಸ್ಥಿತಿ ಉದ್ನಿಗ್ನ, 144 ಸೆಕ್ಷನ್‌ ಜಾರಿ

Feb 21, 2022, 9:39 AM IST

ಶಿವಮೊಗ್ಗ (ಫೆ. 21): ಹಿಂದೂಪರ ಕಾರ್ಯಕರ್ತ (Hindu Activits) ಹರ್ಷ ಎಂಬಾತನನ್ನು ಅಪರಿಚಿತ ದುರ್ಷರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ತೀರ್ಥಹಳ್ಳಿ ರಸ್ತೆಯ ಭಾರತಿ ಕಾಲೋನಿಯಲ್ಲಿ ನಡೆದಿದೆ. ಘಟನೆಯಿಂದಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ಕಡೆ ಕಲ್ಲುತೂರಾಟ ನಡೆದ ಘಟನೆಯೂ ವರದಿಯಾಗಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ನಗರ ವ್ಯಾಪ್ತಿಯಲ್ಲಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಈಗಾಗಲೇ ಜಾರಿಯಲ್ಲಿದ್ದ 144 ಸೆಕ್ಷನ್‌ ಅನ್ನು ಮತ್ತೆರಡು ದಿನ ವಿಸ್ತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ  ಮೆಗ್ಗಾನ್‌ ಆಸ್ಪತ್ರೆ ಎದುರು ನೂರಾರು ಮಂದಿ ಜಮಾಯಿಸಿದ್ದು, ಈ ವೇಳೆ ಕೆಲವರು ಆಸ್ಪತ್ರೆಯ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಆಸ್ಪತ್ರೆ ಗಾಜುಗಳಿಗೆ ಹಾನಿಯಾಗಿದೆ.

ಕಲ್ಲುತೂರಾಟ-ಘಟನೆ ಬೆನ್ನಲ್ಲೇ ನಗರದ ರವಿವರ್ಮ ಬೀದಿ ಮತ್ತು ಆಜಾದ್‌ ನಗರದಲ್ಲಿ ಕಲ್ಲುತೂರಾಟದ ಘಟನೆ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ಈ ಮಧ್ಯೆ, ನಗರದ ಎಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.