ದರ್ಶನ್ ಅಭಿಮಾನಿಗಳಿಂದ ನೈತಿಕ ಪೊಲೀಸ್‌ಗಿರಿ: ಬಸ್ಕಿ, ಬರೀಗೈಯಲ್ಲಿ ಆರತಿ ಮಾಡುವಂತೆ ಬೆದರಿಕೆ!

Jan 14, 2024, 8:37 PM IST

ದಾವಣಗೆರೆ (ಜ.14): ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ದೊಡ್ಡೇಶ್ ಎಂಬಾತ ನೈತಿಕ ಪೊಲೀಸ್ ಗಿರಿ ಮೆರೆದಿದ್ದು, ದರ್ಶನ್ ಬಗ್ಗೆ ಕೆಟ್ಟದಾಗಿ ಪೋಸ್ಟ್ ಹಾಕಿದ್ದ ಎಂದು ಆರೋಪಿಸಿ ಯುವಕನೊಬ್ಬನಿಗೆ ಶಿಕ್ಷೆ ನೀಡಿದ್ದಾನೆ. ದಾವಣಗೆರೆಯಲ್ಲಿ ಈ ಘಟನೆ ನಡೆದಿದ್ದು, ತಾನು, ಯುವಕನೊಬ್ಬನಿಗೆ ಶಿಕ್ಷೆ ನೀಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ದೊಡ್ಡೇಶ್ ಹಂಚಿಕೊಂಡಿದ್ದಾನೆ. ವಿಡಿಯೋನಲ್ಲಿ ಯುವಕನೊಬ್ಬನನ್ನು ಬಲವಂತದಿಂದ ಬಸ್ಕಿ ಹೊಡೆಯುವಂತೆ ಮಾಡಿದ್ದು, ಬರಿಗೈನಲ್ಲಿ ಕರ್ಪೂರ ಹಚ್ಚಿ, ದರ್ಶನ್​ರ ಕಟೌಟ್​ಗೆ ಬೆಳಗುವಂತೆ ದರ್ಪದಿಂದ ಆದೇಶಿಸಿದ್ದಾನೆ. 

ಭಯಗೊಂಡ ಯುವಕ ದೊಡ್ಡೇಶ್ ಹೇಳಿದಂತೆ ಬರಿಗೈಯಲ್ಲಿ ಕರ್ಪೂರ ಹಚ್ಚಿಕೊಂಡು ಆರತಿ ಮಾಡಿದ್ದಾನೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ವಡ್ನಳ್ಳಿ ಗ್ರಾಮದ ಯುವಕ ಲಿಂಗರಾಜು ಹೆಸರಿನ ಯುವಕ ಕೆಲವು ದಿನಗಳ ಹಿಂದೆ ದರ್ಶನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ಯುವಕ ಪುನೀತ್ ರಾಜ್​ಕುಮಾರ್ ಅಭಿಮಾನಿ ಎಂದು ಸಹ ಹೇಳಲಾಗುತ್ತಿದೆ. ಈ ಯುವಕನ್ನು ಹಿಡಿದು ತಂದು ‘ಕಾಟೇರ’ ಸಿನಿಮಾ ಪ್ರದರ್ಶನವಾಗುತ್ತಿರುವ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದ ಮುಂದೆ ನಿಲ್ಲಿಸಿ ಆತನಿಗೆ ಶಿಕ್ಷೆ ನೀಡಿದ್ದಾನೆ ದೊಡ್ಡೆಶ್.