ಮೈಕ್‌ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕೇಳುತ್ತದೆಯೇ.? : ಆಝಾನ್‌ ಬಗ್ಗೆ ವಿವಾದ ಎಬ್ಬಿಸಿದ ಈಶ್ವರಪ್ಪ

Mar 13, 2023, 2:48 PM IST

ಮಂಗಳೂರು (ಮಾ.13): ಮಂಗಳೂರಲ್ಲಿ ಮುಸ್ಲಿಂ ಸಮುದಾಯದ ಜನರು ಅಝಾನ್‌ ಕೂಗುವಾಗ ಮೈಕ್‌ನಲ್ಲಿ ಜೋರಾಗಿ ಕೂಗಿದರೆ ಮಾತ್ರ ಅಲ್ಲಾನಿಗೆ ಕೇಳುತ್ತದೆಯೇ.? ಸುಪ್ರೀಂ ಕೋರ್ಟ್‌ ಜಡ್ಜ್‌ಮೆಂಟ್‌ ಮೂಲಕ ಶೀಘ್ರವಾಗಿ ಅಝಾನ್‌ಗೆ ಬ್ರೇಕ್‌ ಬೀಳಲಿದೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ನಡೆಯುತ್ತಿದ್ದ ವಿಜಯ ಸಂಕಲ್ಪ ಯಾತ್ರೆಯ ವೇಳೆ ಮಾತನಾಡಿದ ಅವರು, ನಮಗೆ ಎಲ್ಲಾ ಮುಸಲ್ಮಾನರ ಓಟ್ ಬೇಡ ಅಂತ ಹೇಳಿಲ್ಲ. ಪಿಎಫ್ಐ ಬೆಂಬಲಿತ ಮುಸಲ್ಮಾನರ ಓಟ್ ಬೇಡ ಅಂತ ಹೇಳಿದ್ದೆನು. ಅಜಾನ್ ನಿಂದ ಮಕ್ಕಳ ಪರೀಕ್ಷೆ ಮೇಲೆ ಎಫೆಕ್ಟ್ ಆಗುತ್ತದೆ. ಅಲ್ಲಾನಿಗೆ ಕಿವಿ ಇದೆಯೋ ಇಲ್ಲವೋ ಅಂತ ನಾನು ಕೇಳಿದ್ದು ಹೌದು. ಅದನ್ನು ರಾಜ್ಯದ ಜನರು ತೀರ್ಮಾನ ಮಾಡ್ತಾರೆ. ನಾನು ಧಾರ್ಮಿಕ ನಿಂದನೆ ಖಂಡಿತಾ ಮಾಡಿಲ್ಲ. ಆದ್ರೆ ಮೈಕ್ ನಲ್ಲಿ ಅಜಾನ್ ಕರೆಯುವ ವಿಚಾರ ಮಾತನಾಡಿದ್ದೆ‌ನು. ಅದು ಧಾರ್ಮಿಕ ನಿಂದನೆ ಮಾಡಿದಂತೆ ಆಗಿಲ್ಲ ಎಂದು ಹೇಳಿದ್ದಾರೆ. 

ನಾವು ಒಂದೊಂದೆ ಕಾನೂನು ಜಾರಿ ಮಾಡ್ತಾ ಇದ್ದೇವೆ. ಸುಪ್ರೀಂ ಕೋರ್ಟ್ ತೀರ್ಪು ಇದ್ರೂ ಜಾರಿ ಆಗಿಲ್ಲ. ಅಭಿವೃದ್ಧಿ ವಿಚಾರದ ಬಗ್ಗೆಯೂ ಸಭೆಯಲ್ಲಿ ಮಾತನಾಡಿದ್ದೇವೆ. ರಾಜಕೀಯ ಲಾಭ ಮಾತ್ರ ನಮ್ಮ ಉದ್ದೇಶ ಅಲ್ಲ. ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದು ಲಾಭಕ್ಕೆ ಅಲ್ಲ. ಕೇವಲ ರಾಜಕಾರಣ ಮಾಡಲ್ಲ, ಹಾಗಂತ ನಾವು ಸನ್ಯಾಸಿಗಳಲ್ಲ. ನಾನು ಶಾಸಕನಾಗಿ ಮುಸ್ಲಿಮರಿಗೆ ಸಹಾಯ ಮಾಡುತ್ತಿದ್ದೇನೆ. ನನ್ನ ಮನೆಗೆ ಹಲವು ಮುಸ್ಲಿಂ ಮಹಿಳೆಯರು ಬರ್ತಾರೆ. ಅವರಿಗೆ ಸಹಾಯ ಮಾಡುವುದರಲ್ಲಿ ಧರ್ಮ ನೋಡಿಲ್ಲ ಎಂದು ಹೇಳಿದರು.